ಫಲಪ್ರದವಾಗದ ಮೆಟ್ರೋ ಅಧಿಕಾರಿಗಳು ಹಾಗೂ ನೌಕರರ ಸಭೆ
ಬೆಂಗಳೂರು, ಮೇ 4: ಹೈಕೋರ್ಟ್ ಸೂಚನೆಯಂತೆ ಎರಡನೇ ಬಾರಿಗೆ ಮೆಟ್ರೋ ನೌಕರರು ಹಾಗೂ ಅಧಿಕಾರಿಗಳ ಸಂಧಾನ ಸಭೆ ಗುರುವಾರದಿಂದ ಪ್ರಾರಂಭವಾಗಿದೆ.
ಮುಷ್ಕರ ನಡೆಸಲು ಮುಂದಾಗಿದ್ದ ನೌಕರರಿಗೆ ಸಂಧಾನ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಗುರುವಾರದಿಂದ ಸಭೆ ನಡೆಸಲು ಆರಂಭಿಸಿದ್ದಾರೆ. ಮೊದಲ ಸಭೆಯಲ್ಲಿ ಹಿಂದಿನಂತೆಯೇ ಅಹವಾಲುಗಳನ್ನು ಆಲಿಸಲಾಗಿದೆ.
ಚುನಾವಣೆ ಇರುವುದರಿಂದ ಆರ್ಥಿಕ ವಿಚಾರಗಳನ್ನು ಹೊರತುಪಡಿಸಿ ಬೇರೆ ಬೇಡಿಕೆಗಳ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿದೆ. ವೇತನ ಪರಿಷ್ಕರಣ, ಬಡ್ತಿ ಮೊದಲಾದ ವಿಷಯಗಳನ್ನು ಚರ್ಚಿಸದೆ, ನೌಕರ ಸ್ನೇಹಿಯಾಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆದಿದೆ.

ಪ್ರತಿ ವಾರ ಮೂರು ಅಥವಾ ಎರಡು ಸಭೆಗಳನ್ನು ನಡೆಸಿ ಚರ್ಚಿಸಲು ತೀರ್ಮಾನಿಸಲಾಗಿದೆ. ಹಣಕಾಸು ಸಂಬಂಧಿ ಬೇಡಿಕೆಗಳನ್ನು ಹೊಸ ಸರ್ಕಾರ ಬರುವವರೆಗೂ ಈಡೇರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ತರಾತುರಿಯ ಸಭೆ: ಸಭೆ ನಡೆಸುವಲ್ಲೂ ಬಿಎಂಆರ್ಸಿಎಲ್ ಅಸಡ್ಡೆ ತೋರುತ್ತಿದೆ ಎಂದು ನೌಕರರು ದೂರಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಕಳೆದ ತಿಂಗಳು ಸಭೆ ನಡೆಸಿದ್ದಾಗ ಒಂದು ಅಥವಾ ಎರಡು ದಿನಗಳ ಮುಂಚೆ ಸೂಚನೆ ನೀಡಲಾಗುತ್ತಿತ್ತು. ಆಗ ಕೆಲಸದ ಅವಧಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಸಭೆಗೆ ಹಾಜರಾಗಬಹುದಿತ್ತು. ಆದರೆ ಗುರುವಾರ ದಿಢೀರನೆ ಸಭೆ ಕರೆದಿದ್ದಾರೆ ಎಂದು ಕೆಲ ನೌಕರರು ದೂರಿದ್ದಾರೆ.












Click it and Unblock the Notifications