ಸ್ವಲ್ಪ ಕ್ಲೀನ್ ಅಪ್ ಮಾಡಿ ಅಭಿಯಾನಕ್ಕೆ ಚಾಲನೆ
ಬೆಂಗಳೂರು, ಸೆ.29: ಉದ್ಯಾನ ನಗರಿ ಬೆಂಗಳೂರನ್ನು ಸ್ವಚ್ಛ ನಗರಿಯಾಗಿಸಲು ಪಣತೊಟ್ಟಿರುವ ಪ್ರೊ. ಎಂವಿ ರಾಜೀವ್ ಗೌಡ ಅವರ ನೇತೃತ್ವದ ತಂಡ ಭಾನುವಾರ(ಸೆ.29) 'ಸ್ವಲ್ಪ ಕ್ಲೀನ್ ಅಪ್ ಮಾಡಿ' ಎಂಬ ಅಭಿಯಾನಕ್ಕೆ ಚಾಲನೆ ನೀಡಿದೆ.
ಸಮಾನ ಮನಸ್ಕ ನಾಗರೀಕರು, ವಿದ್ಯಾರ್ಥಿಗಳ ಜತೆ ಕಾರ್ಪೊರೇಟರ್ ಗಳು ಕೂಡಾ ಈ ಅಭಿಮಾನಕ್ಕೆ ಕೈ ಜೋಡಿಸಿದ್ದು, ನಗರದ ಬಡಾವಣೆಗಳನ್ನು ಗಲೀಜು ಮುಕ್ತಗೊಳಿಸಲು ಯೋಜಿಸಿದ್ದಾರೆ.
ಕಸ ಮುಕ್ತ ಬೆಂಗಳೂರು : ಬೆಂಗಳೂರನ್ನು ಇತ್ತೀಚೆಗೆ ಬಹುವಾಗಿ ಕಾಡಿದ ಕಸದ ಸಮಸ್ಯೆಗೆ ನಾಗರೀಕರೇ ಪರಿಹಾರ ಕಂಡುಕೊಳ್ಳುವ ಮನಸ್ಥಿತಿ ಮೂಡಿಸಬೇಕಾಗಿದೆ. ಸ್ವಲ್ಪ ಅಡ್ಜೆಸ್ಟ್ ಮಾಡಿ ಎಂಬ ಬೆಂಗಳೂರಿಗರ ಕಾಮನ್ ಡೈಲಾಗ್ ಹಾಗೂ ಮನಸ್ಥಿತಿಯನ್ನು ಬದಲಿಸಲು ಪ್ರೊ ರಾಜೀವ್ ಗೌಡ ಅವರು ಯೋಜನೆ ಹಾಕಿಕೊಂಡರು.
ಬಡಾವಣೆಗಳಲ್ಲಿ ನೆಲದ ಮೇಲೆ ಕಸ ಹರಡಿಕೊಂಡು ಎಲ್ಲರಿಗೂ ತೊಂದರೆಯಾಗುವುದನ್ನು ತಪ್ಪಿಸಲು ಕ್ಲೀನ್ ಅಪ್ ಅಭಿಯಾನ ಆರಂಭಿಸಲಾಗಿದೆ. ರಾಜೀವ್ ಗೌಡ ಅವರ Resurgent India ಯೋಜನೆಯ ಅಂಗವಾಗಿ ಆರಂಭವಾಗಿರುವ 'ಸ್ವಲ್ಪ ಕ್ಲೀನ್ ಅಪ್ ಮಾಡಿ' ಅಭಿಯಾನ ಮೊದಲಿಗೆ ಆರ್ ಟಿ ನಗರದ ಚಾಮುಂಡಿನಗರ ಬಡಾವಣೆಯಲ್ಲಿ ಭಾನುವಾರ ಆರಂಭಗೊಂಡಿದೆ. ಕಸಗಳನ್ನು ಒಯ್ದು ಕಸ ಸಂಗ್ರಹಣಗಾರರಿಗೆ ನೀಡಲಾಗುತ್ತಿದೆ. ಬೆಂಗಳೂರು ಇನ್ನೂ ಡಂಪಿಂಗ್ ಯಾರ್ಡ್ ಸಮಸ್ಯೆಯಿಂದ ಮುಕ್ತವಾಗಿಲ್ಲ ಎಂದು ರಾಜೀವ್ ಗೌಡ ಹೇಳಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಪ್ರೊಫೆಸರ್ ಆಗಿರುವ ರಾಜೀವ್ ಗೌಡ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.
'ಸ್ವಲ್ಪ ಕ್ಲೀನ್ ಅಪ್ ಮಾಡಿ' ಅಭಿಯಾನ ಆರ್ ಟಿ ನಗರದ ಚಾಮುಂಡಿನಗರ ಮುಖ್ಯರಸ್ತೆ ಬಾಂಬೆ ಟೈಲರ್ಸ್ ಅಂಗಡಿ ಮುಂದೆ 6ನೇ ಸಿ ಮುಖ್ಯರಸ್ತೆ ಸಮೀಪ ಆರಂಭಗೊಂಡಿದೆ. ಈ ಸ್ವಚ್ಛ ಅಭಿಯಾನ ಚಿತ್ರಗಳು ಇಲ್ಲಿವೆ ನೋಡಿ...
ರಿಸರ್ಜೆಂಟ್ ಇಂಡಿಯಾ ರುವಾರಿ
ಮ್ಯಾನೇಜ್ಮೆಂಟ್, ರಾಜಕಾರಣ, ಕ್ವಿಜ್ ಮುಂತಾದ ಕ್ಷೇತ್ರಗಳಲ್ಲಿ 'ಮಾಸ್ಟರ್' ಅನ್ನಿಸಿಕೊಂಡಿರುವ ಬಹುಮುಖ ಪ್ರತಿಭೆಯ ಚಳವಳಿಗಾರ ಡಾ. ಎಂ.ವಿ. ರಾಜೀವ್ ಗೌಡ ಅವರಿಗೆ ಯಶಸ್ವಿ ರಾಜಕಾರಣಿಯಾಗುವ ಕನಸಿದೆ.
ರಾಜೀವ್ ಅವರು ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸ್ಪೀಕರ್ ಮುಳಬಾಗಿಲಿನ ದಿವಂಗತ ಎಂವಿ ವೆಂಕಟಪ್ಪ ಅವರ ಪುತ್ರ
'ರಿಸರ್ಜೆಂಟ್ ಇಂಡಿಯಾ' ಎಂಬ ಯುವಕರೇ ಇರುವ ಸರ್ಕಾರೇತರ ಸಂಸ್ಥೆ(NGO)ಯನ್ನು ಹುಟ್ಟುಹಾಕಿ ಯುವಕರನ್ನು ಇಂಜಿನಿಯರಿಂಗ್ ಹಾಗು ಮೆಡಿಕಲ್ ವೃತ್ತಿಯ ಗುಂಗಿನಿಂದ ಹೊರತಂದು ಇತರ ಕ್ಷೇತ್ರಗಳಲ್ಲಿ ಜೀವನೋಪಾಯ ಕಂಡುಕೊಳ್ಳಲು ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ.
ಯೂಥ್ ಕನೆಕ್ಟ್ ಸಂವಾದ
Youth Connect ಎಂಬ ವೇದಿಕೆ ಮೂಲಕ ಬೆಂಗಳೂರಿನ ಯುವ ಸಮುದಾಯ ರಾಜಕೀಯ ನಾಯಕರ ಜೊತೆ ನೇರ ಸಂವಾದ ನಡೆಸುವ ವಿಶಿಷ್ಟ ಕಾರ್ಯಕ್ರಮ ಕಳೆದ ಮೇನಲ್ಲಿ ನಡೆದಿತ್ತು.
ನಿರ್ದೇಶಕ ಕೆಎಂ ಚೈತನ್ಯ, ರೇಡಿಯೋ ಹಾಗೂ ಟಿವಿ ನಿರೂಪಕಿ ವಾಸಂತಿ ಹರಿಪ್ರಕಾಶ್, ಒಲಿಂಪಿಯನ್ ಹಾಗೂ ಕ್ರೀಡಾ ಸಲಹೆಗಾರ ಹಕಿಮುದ್ದೀನ್ ಹಬಿಬುಲ್ಲಾ ಅವರ ನಡುವೆ ಬೆಂಗಳೂರಿನ ಕಸದ ಸಮಸ್ಯೆ ಬಗ್ಗೆ ರಾಜೀವ್ ಗೌಡ ಅವರು ಚರ್ಚಿಸಿ ಯೋಜನೆ ಕೈಗೊಂಡಿದ್ದರು.
ತ್ಯಾಜ್ಯ ವಿಲೇವಾರಿ ಅಷ್ಟೇ ಅಲ್ಲದೆ, ತ್ಯಾಜ್ಯ ನಿರ್ವಹಣೆ, ತೆರಿಗೆ ಹಾಗೂ ಜನರಿಗೆ ಎಷ್ಟರ ಮಟ್ಟಿಗೆ ಜನಪ್ರತಿನಿಧಿಗಳು ಅರಿವು ಮೂಡಬೇಕಿದೆ ಎಂಬುದನ್ನು ಮನಗಂಡಿದ್ದರು.
ಯುವಪಡೆ ಹೋರಾಟ
ಶಿಕ್ಷಣ, ರಸ್ತೆ ಮತ್ತು ರೈಲು ವ್ಯವಸ್ಥೆ ಸೇರಿದಂತೆ ಬೆಂಗಳೂರಿಗೆ ಅತ್ಯುತ್ತಮ ಮೂಲಸೌಕರ್ಯ ದೊರಕಿಸುವ ನಿಟ್ಟಿನಲ್ಲಿ ಯುವಪಡೆಯೊಂದಿಗೆ ರಾಜೀವ್ ಗೌಡ ಅವರು ಬದಲಾವಣೆಗಾಗಿ ಹೋರಾಟ ನಡೆಸಿದ್ದಾರೆ.
ಸಂಸತ್ ಕಲಾಪಕ್ಕೆ ಸಲಹೆ
ಸಂಸತ್ ಕಲಾಪಗಳು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲು, ಕಲಾಪಗಳು ಇನ್ನಷ್ಟು ಸುಗಮವಾಗಿ ಸಾಗಲು 5 ಅಂಶಗಳ ಸಲಹೆಗಳನ್ನು ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಮುಂದೆ ರಾಜಕೀಯ ಧುರೀಣ ರಾಜೀವ್ ಗೌಡ ಅವರು ಮುಂದಿಟ್ಟಿದ್ದರು
ವಿನೂತನ ಪ್ರತಿಭಟನೆ
ಈ ಹಿಂದೆ ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸುವುದು ಭಾರತೀಯ ಸಂಸ್ಕೃತಿಗೆ ವಿರುದ್ಧ, ಅಂಥ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಗುಡುಗಿದ್ದು ನೆನಪಿರಬಹುದು.
ಇದಕ್ಕೆ ವಿರುದ್ಧವಾಗಿ ಪ್ರೇಮಿಗಳ ದಿನವನ್ನು ಬೆಂಬಲಿಸುವ ಮತ್ತು ರಾಮಸೇನೆಯ ಉದ್ಧಟತನವನ್ನು ವಿರೋಧಿಸುವ ಎಲ್ಲ ನೌಕರರು ಮತ್ತು ಕಾಲೇಜು ವಿದ್ಯಾರ್ಥಿಗಳು ಸರಿಯಾಗಿ ಊಟದ ವೇಳೆಯಲ್ಲಿ, ಅಂದರೆ ಮಧ್ಯಾಹ್ನ 1.30ಕ್ಕೆ ಕಚೇರಿ ಅಥವಾ ಕಾಲೇಜಿನಿಂದ ಹೊರಬಂದು 'Step out, Stand up and Stamp out' ಎಂಬ ಕೂಗು ಎತ್ತಬೇಕೆಂದು ರಾಜೀವ್ ಗೌಡ ವಿನಂತಿಸಿದ್ದರು