ಕನಕಪುರ ರಸ್ತೆಯಲ್ಲಿ ಉಗ್ರ ಡಾ ಇಮ್ರಾನ್ ಬಂಧನ- NIA

ಬೆಂಗಳೂರು, ನ 30: ಆತಂಕಕಾರಿ ಬೆಳವಣಿಗೆಯೊಂದರಲ್ಲಿ ನಗರದ ಹೊರವಲಯದಲ್ಲಿ ಕನಕಪುರ ರಸ್ತೆಯಲ್ಲಿ ಶಂಕಿತ ಭಯೋತ್ಪಾದಕನೊಬ್ಬನನ್ನು ರಾಷ್ಟ್ರೀಯ ತನಿಖಾ ದಳದ ಹಿರಿಯ ಅಧಿಕಾರಿಗಳು ಬಂಧಿಸಿ, ದೆಹಲಿಗೆ ಕರೆದೊಯ್ದಿದ್ದಾರೆ.
ಕರ್ನಾಟಕದ ಕೆಲ ಪತ್ರಕರ್ತರು, ಹಿಂದೂ ಪರ ಸಂಘಟನೆ ಹಾಗೂ ರಾಜಕೀಯ ಮುಖಂಡರ ಹತ್ಯೆಗೆ ಲಷ್ಕರ್-ಎ-ತಯ್ಯಬಾ ( LeT ) ಜತೆಗೂಡಿ ಸಂಚು ರೂಪಿಸಿದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಪಾತಕಿಯೇ ಈಗ ಬಂಧನಕ್ಕೀಡಾಗಿರುವ ವ್ಯಕ್ತಿ.
ಬಂಧಿತನ ಹೆಸರು ಡಾ. ಇಮ್ರಾನ್ ಅಹಮ್ಮದ್ ಅಲಿಯಾಸ್ ಇಮ್ಮು ಭಾಯಿ ( Dr Imran Ahmed ). ಕಳೆದ ಫೆಬ್ರವರಿಯಲ್ಲಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಈಗ ಬಂಧಿತನಾಗಿರುವ ಡಾ. ಇಮ್ರಾನ್ ಅಹಮ್ಮದನ ಹೆಸರು ಸಹ ಉಲ್ಲೇಖಗೊಂಡಿತ್ತು ಎಂಬುದು ಗಮನಾರ್ಹ.
ಈತ ಕನಕಪುರ ರಸ್ತೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದ. ಗುರುವಾರ ಆತನನ್ನು ನಗರದ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ತಮ್ಮ ವಶಕ್ಕೆ ಪಡೆದು NIA ಅಧಿಕಾರಿಗಳು ದೆಹಲಿಗೆ ಕರೆದೊಯ್ದಿದ್ದಾರೆ. ಆದರೆ ಶಂಕಿತ ಉಗ್ರನ ಬಂಧನದ ಬಗ್ಗೆ ತಮ್ಮ ಬಳಿ ಹೆಚ್ಚಿನ ಮಾಹಿತಿಯಿಲ್ಲ ಎಂದು ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2012ರಲ್ಲಿ ಲಷ್ಕರ್ ಜತೆಗೂಡಿ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ಪ್ರಮುಖ ಪತ್ರಕರ್ತರು, ಹಿಂದೂ ಪರ ಸಂಘಟನೆಗಳ, ರಾಜಕೀಯ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ 12 ಮಂದಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಈ ಹಿಂದೆ ಬಂಧಿಸಿದ್ದರು.
ಈಗ ಬಂಧನಕ್ಕೀಡಾಗಿರುವ ಇಮ್ರಾನ್ ಅಹಮ್ಮದ್ ಎಂಬುವವನು ನಕಲಿ ದಾಖಲೆ ಸೃಷ್ಟಿಸಿ ಪಾಸ್ ಪೋರ್ಟ್ ಪಡೆದು ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿದ್ದ. ಅಲ್ಲಿಂದ ಉಗ್ರ ಚಟುವಟಿಕೆಗಳಿಗೆ ಹಣಕಾಸು ಒದಗಿಸುತ್ತಿದ್ದ. ನಕಲಿ ಪಾಸ್ಪೋರ್ಟ್ (forged passport) ಪಡೆದು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ. ಆ ಬಗ್ಗೆ ಖಚಿತ ಮಾಹಿತಿ ಪಡೆದು ಇಮ್ರಾನನನ್ನು ಬಂಧಿಸಲಾಗಿದೆ ಎಂದು ಎನ್ ಐಎ ಮೂಲಗಳು ತಿಳಿಸಿವೆ.












Click it and Unblock the Notifications