ರೌಡಿ ರಿಜ್ವಾನ್ ಶತ್ರು ಹತ್ಯೆಗೆ ಅಪ್ರಾಪ್ತ ಬಾಲಕರಿಗೆ ಸುಪಾರಿ: ಹುಟ್ಟುಹಬ್ಬ ಆಚರಣೆ ಹೆಸರಲ್ಲಿ ಮರ್ಡರ್ !
ಬೆಂಗಳೂರು, ಜು. 25: ಬೆಂಗಳೂರು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕಾದ ಪ್ರಕರಣವಿದು. ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ಮನಸು ಪರಿವರ್ತನೆ ಮಾಡದ ಪ್ರತಿಫಲವಿದು. ರಾಜಧಾನಿ ಬೆಂಗಳೂರಿನಲ್ಲಿ ವ್ಯಕ್ತಿಯ ಹತ್ಯೆ ಮಾಡಿದ ನಾಲ್ವರು ಕಾನೂನು ಸಂಘರ್ಷಕ್ಕೆ ಒಳಗಾದ ನಾಲ್ವರು ಬಾಲಕರನ್ನು ಕೆಂಗೇರಿ ಪೊಲೀಸರು ವಶಕ್ಕೆ ಪಡೆದು ಬಾಲ ನ್ಯಾಯಮಂಡಳಿಗೆ ಒಪ್ಪಿಸಿದ್ದಾರೆ.
ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಈ ಮಕ್ಕಳಿಗೆ ಸುಪಾರಿ ಹತ್ಯೆ ನೀಡಿದ ಪ್ರಮುಖ ಆರೋಪಿ ತ್ಯಾಗರಾಜನಗರದ ನಿವಾಸಿ ಹರೀಶ್ ಅಲಿಯಾಸ್ ಶ್ರೀ ಹರಿ, ಶಿವಮೊಗ್ಗ ಮೂಲದ ರೌಡಿ ಶೀಟರ್ ರಿಜ್ವಾನ್ ಅಲಿಯಾಸ್ ಕುಳ್ಳ ರಿಜ್ವಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸಂಚು ರೂಪಿಸಿದ ಹರೀಶ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಚ್ಚರಿ ಏನೆಂದರೆ ಎದುರಾಳಿ ಗ್ಯಾಂಗ್ ನ ಸದಸ್ಯನನ್ನು ಕೊಲೆ ಮಾಡಲು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಬಳಕೆ ಮಾಡಿದ್ದು, ಇತ್ತೀಚೆಗೆ ಇದು ಬೆಂಗಳೂರು ಪಾತಕ ಲೋಕದಲ್ಲಿ ದೊಡ್ಡ ಟ್ರೆಂಡ್ ಅಗಿದೆ.
ಶಿವಮೊಗ್ಗದಲ್ಲಿ ರೌಡಿ ಪರೇಡ್, ಚಟುವಟಿಕೆ ಬಿಡಲು ಲಾಸ್ಟ್ ವಾರ್ನಿಂಗ್ ಕೊಟ್ಟ ಎಸ್ಪಿ
ಸುಪಾರಿ ಹತ್ಯೆಯ ಮಿಸ್ಟ್ರಿ:
ನೈಸ್ ರಸ್ತೆಯ ಹೆಮ್ಮಿಗೆಪುರದಿಂದ ಕೋಣಸಂದ್ರದ ಕಡೆಗೆ ದಿವ್ಯಾ ಎಂಬಾಕೆ ಹೋಗುವಾಗ ಮೋರಿಯಲ್ಲಿ ಸಹೋದರ ಹೇಮಂತ್ ಕುಮಾರ್ ಅಲಿಯಾಸ್ ದಿಲೀಪ್ನ ಮೃತ ದೇಹ ಸಿಕ್ಕಿದ್ದು, ಯಾರೋ ದುಷ್ಕರ್ಮಿಗಳು ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೃತ ಹೇಮಂತ್ ಕುಮಾರ್ನ ಸಹೋದರಿ ಕೆಂಗೇರಿ ಪೊಲೀಸರಿಗೆ ತನ್ನ ಸಹೋದರ ಹೇಮಂತ್ ಕುಮಾರ್ ಅಲಿಯಾಸ್ ದಿಲೀಪ್ ಹತ್ಯೆ ಮಾಡಿರುವ ಬಗ್ಗೆ ದೂರು ನೀಡಿದ್ದರು.
ಈ ಕುರಿತು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ತನಿಖೆ ನಡೆಸಿದಾಗ ಮೃತನ ಚಲನವಲನ ಜಾಡು ಹಿಡಿದು ತನಿಖೆ ನಡೆಸಿದಾಗ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಬಾಲಕರ ಪಾತ್ರ ಇರುವುದು ಕಂಡು ಬಂದಿತ್ತು. ನಿನ್ನೆ ತ್ಯಾಗರಾಜನಗರ ಬಳಿ ನಾಲ್ವರು ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೇಮಂತ್ ಕುಮಾರ್ ನನ್ನು ತಾವೇ ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕೊಲೆಗೆ ಸುಪಾರಿ ನೀಡಿದ ಹರೀಶ್ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಹಳೇ ವೈಷಮ್ಯದಿಂದ ಹೇಮಂತ್ ಕುಮಾರ್ ಹತ್ಯೆಗೆ ಸಂಚು ರೂಪಿಸಿದ್ದು, ಅದರಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ದುರ್ಬಳಕೆ ಮಾಡಿಕೊಂಡು ಕೊಲೆ ಮಾಡಿಸಲಾಗಿದೆ.
ಜು. 17 ರಂದು ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಹೇಮಂತ್ ಕುಮಾರ್ ತೆರಳಿದ್ದ. ಕಂಠಪೂರ್ತಿ ಮದ್ಯ ಕುಡಿದು ಪಾರ್ಟಿ ಮಾಡಿದ್ದ ಹೇಮಂತ್ ಕುಮಾರ್ ಮನೆಗೆ ಹೋಗಲು ತೂರಾಡುತ್ತಿದ್ದ. ಪಾರ್ಟಿ ಮುಗಿದ ಬಳಿಕ ಹೇಮಂತ್ ಕುಮಾರ್ನನ್ನು ಮನೆಗೆ ಕರೆದುಕೊಂಡು ಹೋಗಿ ಬಿಡುವುದಾಗಿ ನಂಬಿಸಿದ್ದಾರೆ. ಕೆಂಗೇರಿಗೆ ಡ್ರಾಪ್ ಕೊಡುವ ನೆಪದಲ್ಲಿ ಕರೆದುಕೊಂಡು ಬಂದು ಬೆಳಗಿನ ಜಾವ 2.30 ರ ಸುಮಾರಿನಲ್ಲಿ ಕೋಣಸಂದ್ರ ನೈಸ್ ರೋಡ್ ಬಳಿ ಹತ್ಯೆ ಮಾಡಿದ್ದಾರೆ. ಆ ಬಳಿಕ ಮೃತ ದೇಹವನ್ನು ಬಿಸಾಡಿ ಪರಾರಿಯಾಗಿದ್ದರು. ಈ ಕುರಿತು ಕೆಂಗೇರಿಯಲ್ಲಿ ಕೇಸು ದಾಖಲಾಗಿತ್ತು.
ಬೆಂಗಳೂರಿನಲ್ಲಿ ಇತ್ತೀಚೆಗೆ ಸುಪಾರಿ ಹತ್ಯೆಗಳಿಗೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಬಳಕೆ ಮಾಡುತ್ತಿವುದೇ ದೊಡ್ಡ ಟ್ರೆಂಡ್ ಶುರುವಾಗಿದೆ. ಎದುರಾಳಿ ಗ್ಯಾಂಗ್ ನನ್ನು ಸುಲಭವಾಗಿ ಮುಗಿಸುವುದರ ಜತೆಗೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಗಂಭೀರ ಸ್ವರೂಪದ ಶಿಕ್ಷೆಗೆ ಗುರಿಯಾಗದೇ ಬಿಡುಗಡೆಯಾಗುತ್ತಾರೆ. ಹೀಗಾಗಿ ಕಾನೂನು ಸಂಘರ್ಷಕ್ಕೆ ಒಳಗಾದ ಹುಡುಗರನ್ನು ರೌಡಿಸಂ ನತ್ತ ಸೆಳೆದು ಬೆಂಗಳೂರು ಪಾತಕ ಲೋಕ ಅವರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದೆ. ಹಲವಾರು ಕೊಲೆ ಪ್ರಕರಣಗಳಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳೇ ಬಂಧನಕ್ಕೆ ಒಳಗಾಗುತ್ತಿದ್ದಾರೆ.
ಆಕಸ್ಮಿಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಕಾನೂನು ಸಂಘರ್ಷಕ್ಕೆಒಳಗಾದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ, ಮನಸು ಪರಿವರ್ತನೆ ಮಾಡುವ ಪ್ರಯತ್ನಗಳು ನಡೆಯುತ್ತಿಲ್ಲ. ಹೀಗಾಗಿ ದೇಶದ ಪ್ರಜೆಗಳಾಗಬೇಕಾದವರು ರೌಡಿಗಳಾಗಿ ರೂಪಾಂತರಗೊಳ್ಳುತ್ತಿದ್ದಾರೆ. ಕೊಲೆ ಪ್ರಕರಣಗಳಲ್ಲಿ ಪದೇ ಪದೇ ಕಾನೂನು ಸಂಘರ್ಷಕ್ಕೆ ಒಳಗಾದವರೇ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಅಪ್ರಾಪ್ತ ಬಾಲಕರು ಅಪರಾಧ ಕೃತ್ಯ ಎಸಗಿದ್ರೆ ಕಾನೂನಿನ ನೆರವಿನಿಂದಲೇ ಬಿಡುಗಡೆಯಾಗುವುದನ್ನು ಅರಿತ ರೌಡಿ ಗ್ಯಾಂಗ್ ಗಳು ಶಾಲಾ ಕಾಲೇಜುಗಳ ಬಳಿ ಅಪ್ರಾಪ್ತರಿಗೆ ಗಾಳ ಹಾಕಿ ಅಮಿಷೆಗಳನ್ನು ಒಡ್ಡಿ ಅವರ ಭವಿಷ್ಯವನ್ನೇ ಹಾಳು ಮಾಡುತ್ತಿವೆ.
Recommended Video