ಪತ್ರಕರ್ತ ರವಿ ಬೆಳಗೆರೆ ವಿರುದ್ಧದ ಸುಪಾರಿ ಪ್ರಕರಣಕ್ಕೆ ಹೈ ಕೋರ್ಟ್ ತಡೆ
ಬೆಂಗಳೂರು, ಡಿಸೆಂಬರ್ 7: "ನನ್ನ ವಿರುದ್ಧ ಇದ್ದ ಸುಪಾರಿ ಪ್ರಕರಣಕ್ಕೆ ಹೈ ಕೋರ್ಟ್ ತಡೆ ನೀಡಿದೆ. ಇದು ವಿಜಯದ ಆರಂಭವಷ್ಟೇ. ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂಬುದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ" ಎಂದು ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರ್ ವಾರಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರು ಒನ್ ಇಂಡಿಯಾ ಕನ್ನಡಕ್ಕೆ ಹೇಳಿದರು.
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ರವಿ ಬೆಳಗೆರೆ ಅವರು ಸುಪಾರಿ ನೀಡಿದ್ದರು ಎಂಬ ಆರೋಪ ಮಾಡಲಾಗಿತ್ತು. ಈ ಪ್ರಕರಣವನ್ನು ರದ್ದು ಪಡಿಸುವಂತೆ ಕೋರಿ, ಹೈ ಕೋರ್ಟ್ ನಲ್ಲಿ ರವಿ ಬೆಳಗೆರೆ ಅವರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಪುರಸ್ಕರಿಸಿರುವ ಹೈ ಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಪಿ.ದಿನೇಶ್ ಕುಮಾರ್ ಅವರು ಮಧ್ಯಂತರ ತಡೆ ನೀಡಿದ್ದಾರೆ.
ಈ ಬಗ್ಗೆ ಒನ್ ಇಂಡಿಯಾ ಕನ್ನಡದ ಜತೆಗೆ ಮಾತನಾಡಿ, ನನ್ನ ವಿರುದ್ಧ ಇಂಥದ್ದೊಂದು ಆರೋಪ ಬಂದಾಗ ಚಿಕ್ಕ ವಯಸ್ಸಿನ ನನ್ನ ಮಗನ ಫೋಟೊ ಕೂಡ ಬಳಸಿ ಸುದ್ದಿ ಮಾಡಿದ್ದ ಮಾಧ್ಯಮಗಳ ಬಗ್ಗೆ ಈಗಲೂ ನನಗೆ ಅಸಮಾಧಾನ ಇದೆ. ಈಗ ಹೈ ಕೋರ್ಟ್ ನಿಂದ ಆದೇಶ ಬಂದಿದೆ. ಇದು ವಿಜಯದ ಆರಂಭವಷ್ಟೇ ಎಂದು ಹೇಳಿದರು.

ನಾನು ಸೋಲುವುದಿಲ್ಲ. ನಿಮ್ಮೆಲ್ಲ ಗೆಳೆಯರ ಹಾರೈಕೆಯಿಂದ ನನ್ನ ಮೇಲೆ ಹಾಕಿದ್ದ ಸುಪಾರಿ ಕೇಸ್ ಗೆ ಹೈಕೋರ್ಟ್ನಲ್ಲಿ ತಡೆ ಸಿಕ್ಕಿದೆ. ನನ್ನ ರಕ್ಷಣೆಗೆ ಸಿ. ವಿ.ನಾಗೇಶ್ ವಕೀಲರು ಮತ್ತು ದಿವಾಕರ್ ವಕೀಲರು ಇದ್ದಾರೆ. ಅವರಿಗೆ ನನ್ನ ಪ್ರಣಾಮಗಳು. ನಿಮ್ಮ ಹಾರೈಕೆಗೆ ಋಣಿ. ಸತ್ಯ ಗೆಲ್ಲುತ್ತದೆ ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿಕೊಂಡಿದ್ದಾರೆ.












Click it and Unblock the Notifications