ಸ್ವಂತ ವಾಹನ ಬಳಕೆ ಕಡಿಮೆ ಮಾಡಿ, ವಾಯು ಮಾಲಿನ್ಯ ತಗ್ಗಿಸಿ: ಸುನೀಲ್ ಕುಮಾರ್
ಬೆಂಗಳೂರು, ಜೂನ್ 6: ಸ್ವಂತ ವಾಹನಗಳ ಬಳಕೆ ಕಡಿಮೆ ಮಾಡಿ, ಸಮೂಹ ಸಾರಿಗೆಯನ್ನು ಬಳಸಿ ಇದರಿಂದ ವಾಯು ಮಾಲಿನ್ಯ ಪ್ರಮಾಣ ತಗ್ಗುತ್ತದೆ ಎಂದು ಪೊಲೀಸ್ ಹೆಚ್ಚುವರಿ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿದ್ದಾರೆ.
ಶಿಲ್ಪಾ ಪೌಂಡೇಷನ್, ನಗರದ ವಿಕ್ಟೋರಿಯಾ ಲೇಔಟ್ ನ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರದಲ್ಲಿ ಒಟ್ಟು 85 ಲಕ್ಷ ವಾಹನಗಳಿವೆ, ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ, ಕಚೇರಿಗಳಿಗೆ ತೆರಳುವವರು ಕಾರ್, ಬೈಕ್ ಪೂಲಿಂಗ್ ಮೂಲಕ ತೆರಳಿ ಸ್ವಂತ ವಾಹನಗಳ ಬಳಕೆ ಕಡಿಮೆ ಮಾಡಿದರೆ ಮಾಲಿನ್ಯ ಕಡಿಮೆಯಾಗುತ್ತದೆ ಎಂದು ಹೇಳಿದರು.

ಹೆಚ್ಚೆಚ್ಚು ಸಸಿಗಳನ್ನು ನೆಡುವ ಬಗ್ಗೆ ಕ್ರಮ ಕೈಗೊಳ್ಳಬೇಕು, ಮತ್ತೆ ಬೆಂಗಳೂರು ಹೆಸರಿಗೆ ತಕ್ಕಂತೆ ಉದ್ಯಾನ ನಗರಿಯಾಗಿ ಮಾರ್ಪಾಡಾಗಬೇಕು.ಕೆರೆಗಳು ತುಂಬಿ ಹರಿಯಬೇಕು ಎಂದರು.
ಪರಿಸರದಲ್ಲಿ ಕಾಂಕ್ರಿಟೀಕರಣದಿಂದ ಉಷ್ಣಾಂಶ ಹೆಚ್ಚಾಗುತ್ತಿದೆ, ಹಸಿರು ಪರಿಸರ ಉಳಿಸಿಕೊಳ್ಳುವ ಹೊಣೆಗಾರಿಕೆ ವರ್ತಮಾನದಲ್ಲಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಿಲ್ಪಾ ಪೌಂಡೇಷನ್ ಪರಿಸರ ಜಾಗೃತಿ ಹಾಗೂ ಪರಿಸರ ಸ್ನೇಹಿ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
"ನಾನು ಸರ್ಕಾರಿ ಶಾಲೆಯಲ್ಲಿ ಕಲಿತವನು, ಆದ್ದರಿಂದ ವಿಶ್ವ ಪರಿಸರ ದಿನದಂದು ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡ ನೆಡುತ್ತಿರುವುದು ನನಗೆ ಹೆಮ್ಮೆಯ ಸಂಗತಿ"
-ಟಿ ಸುನೀಲ್ ಕುಮಾರ್, ಬೆಂಗಳೂರು ನಗರ ಪೊಲೀಸ್ ಆಯುಕ್ತರು.












Click it and Unblock the Notifications