ಅಭಿಮಾನಿ ಆತ್ಮಹತ್ಯೆ ಯತ್ನ, ಆಸ್ಪತ್ರೆಗೆ ನಟ ಯಶ್ ಭೇಟಿ
ಬೆಂಗಳೂರು, ಜನವರಿ 08 : ನಟ ಯಶ್ ನಿವಾಸದ ಮುಂದೆ ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಭಿಮಾನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಯಶ್ ಆಸ್ಪತ್ರೆಗೆ ಭೇಟಿ ನೀಡಿದರು.
***
ಇದೀಗ ಬಂದ ಮಾಹಿತಿಯ ಪ್ರಕಾರ, ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ರವಿ ಅವರು ಮೃತರಾಗಿದ್ದಾರೆ. ಇಂತಹ ಹುಚ್ಚುತನ ಏಕೆ? ದುಡುಕಿನಿಂದ ಪ್ರಾಣ ಕಳೆದುಕೊಂಡರೆ ಅವರನ್ನು ನಂಬಿದವರ ಗತಿಯೇನು? ನೆಚ್ಚಿನ ತಾರೆಯರನ್ನು ಭೇಟಿಯಾಗದಿದ್ದರೆ ಇಡೀ ಜಗತ್ತೇ ಮುಳುಗಿ ಹೋಗುತ್ತದೆಯೆ?
***
ಜನವರಿ 8ರ ಮಂಗಳವಾರ ನಟ ಯಶ್ ಹುಟ್ಟುಹಬ್ಬ. ಯಶ್ ನೋಡಲು ನೆಲಮಂಗಲ ತಾಲೂಕಿನ ಶಾಂತಿನಗರದ ನಿವಾಸಿ ರವಿ ಹೊಸಕೆರೆಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ್ದರು. ಆದರೆ, ಯಶ್ ನೋಡಲು ಸಿಗಲಿಲ್ಲ.
ಇದರಿಂದ ಬೇಸರಗೊಂಡ ಅವರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗಾಯಗೊಂಡ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಮಂಗಳವಾರ ಸಂಜೆ ಯಶ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ರವಿ ಅವರ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯಲ್ಲಿಯಲ್ಲಿಯೇ ರವಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗುತ್ತಿದೆ.
ನಟ ಯಶ್ ಕೆಜಿಎಫ್ ಸಿನಿಮಾ ಬಿಡುಗಡೆ ಮತ್ತು ಚಿತ್ರದ ಯಶಸ್ಸಿನ ಸಂತಸದಲ್ಲಿದ್ದಾರೆ. ಆದರೆ. ಅಂಬರೀಶ್ ಅವರ ನಿಧನದ ಹಿನ್ನಲೆಯಲ್ಲಿ ಈ ವರ್ಷ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಯಶ್ ಫೇಸ್ಬುಕ್ ಲೈವ್ ಮುಖಾಂತರ ಹೇಳಿಕೆ ನೀಡಿದ್ದರು.
ನಟ ಯಶ್ ಹೇಳಿಕೆ : ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ನಟ ಯಶ್, 'ಘಟನೆ ನಡೆದಾಗ ನಾನು ಮನೆಯಲ್ಲಿ ಇರಲಿಲ್ಲ. ಹುಟ್ಟು ಹಬ್ಬ ಆಚರಣೆ ಮಾಡುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಸ್ವಲ್ಪ ಹೊತ್ತಿನ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿಯಿತು. ತಕ್ಷಣ ಆಸ್ಪತ್ರೆಗೆ ಬಂದೆ' ಎಂದರು.
'ರವಿ ಅವರ ಶೇ 70ರಷ್ಟು ದೇಹ ಸುಟ್ಟು ಹೋಗಿದೆ. ನನಗೆ ವಿಚಾರ ತಿಳಿದು ಭಯವಾಯಿತು. ಸಿನಿಮಾ ನೋಡಿ ನಮ್ಮಿಂದ ಏನಾದರೂ ಒಳ್ಳೆಯದನ್ನು ಕಲಿತುಕೊಳ್ಳಿ. ಇಂತಹ ಘಟನೆಗಳನ್ನು ಮಾಡಿಕೊಳ್ಳಬೇಡಿ' ಎಂದು ನಟ ಯಶ್ ಮನವಿ ಮಾಡಿದರು.












Click it and Unblock the Notifications