ಆದರ್ಶ ಗ್ರಾಮ ಪಟ್ಟಿ ಡಿಸಿಗೆ ನೀಡಿ: ಬಿಜೆಪಿ ಸೂಚನೆ
ಬೆಂಗಳೂರು, ನ. 19: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ 'ಸಂಸದರ ಆದರ್ಶ ಗ್ರಾಮ ಯೋಜನೆ' ಅಡಿ ಕರ್ನಾಟಕದ ಬಿಜೆಪಿ ಸಂಸದರು ತಮ್ಮ ಕ್ಷೇತ್ರದಲ್ಲಿ ದತ್ತು ಪಡೆಯಲಿರುವ ಗ್ರಾಮದ ಕುರಿತು ಆಯಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಪಕ್ಷದ ರಾಜ್ಯ ಘಟಕ ತನ್ನ ಎಲ್ಲ 17 ಸಂಸದರಿಗೆ ಸೂಚಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಈಗಾಗಲೇ ಅನೇಕ ಸಂಸದರು ತಾವು ದತ್ತು ಪಡೆಯುವ ಗ್ರಾಮವನ್ನು ಗುರುತಿಸಿದ್ದಾರೆ. ಯೋಜನೆ ಕುರಿತು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಪರಿಶೀಲಿಸಲಿದೆ ಎಂದು ಅವರು ತಿಳಿಸಿದ್ದಾರೆ. [ಒಂದೊಂದು ಗ್ರಾಮ ದತ್ತು ತೆಗೆದುಕೊಳ್ಳಿ: ಮೋದಿ]
ನನ್ನ ಮತಕ್ಷೇತ್ರದ ಅಂಚಿನಲ್ಲಿರುವ ಹಾರು ಬೆಲ್ವಾಡಿ ಗ್ರಾಮವನ್ನು ನಾನೀಗಲೇ ಗುರುತಿಸಿದ್ದೇನೆ. ಈ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯೂ ಪಾಲ್ಗೊಂಡಿದ್ದರು. ಈ ಯೋಜನೆ ಯಶಸ್ಸಿಗೆ ಎಲ್ಲರೂ ಪಕ್ಷ ಭೇದ ಮರೆತು ಸಹಕರಿಸುವುದಾಗಿ ತಿಳಿಸಿದ್ದಾರೆ. [ಜಯಪುರ ದತ್ತು ಪಡೆದ ಮೋದಿ]
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ನಾನು ಈಗಾಗಲೇ ಗಾಂಧಿ ಘರ್ ಎಂಬ ಗ್ರಾಮ ಆಯ್ಕೆ ಮಾಡಿಕೊಂಡಿದ್ದೇನೆ. ಇದು ಮುಡಿಗೆರೆ ತಾಲೂಕಿನಲ್ಲಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಭೇಟಿ ನೀಡಿದ್ದ ಇತಿಹಾಸ ಹೊಂದಿದೆ. ಇನ್ನೂ ಮೂರು ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆಂದು ಅವರು ತಿಳಿಸಿದರು.
ಗ್ರಾಮಗಳ ಆಯ್ಕೆ ಹಾಗೂ ಅಭಿವೃದ್ಧಿ ಸಂದರ್ಭದಲ್ಲಿ ಸಂಸದರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕೆಂದು ಸಲಹೆ ನೀಡಿದರು.