ಗಾಂಜಾಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಇರಾನಿ ಡ್ರಗ್ ಪೆಡ್ಲರ್ ಕಥೆ
ಬೆಂಗಳೂರು, ಸೆ. 29: ಬಿಡದಿಯ ಈಗಲ್ ಟನ್ ರೆಸಾರ್ಟ್ ನ ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಬೆಳೆದ ಆರೋಪದಡಿ ಮಂಗಳವಾರ ಬಂಧನಕ್ಕೆ ಒಳಗಾಗಿರುವ ಇರಾನಿ ಮೂಲದ ಜಾವಿದ್ ಮಾದಕ ವ್ಯಸನದ ಹಿಂದಿನ ಮತಾಂತರದ ರೋಚಕ ಸಂಗತಿ ಹೊರ ಬಿದ್ದಿದೆ. ಗಾಂಜಾ ದಾಸನಾಗುವ ಜಾವಿದ್ ಅದರ ಬಗ್ಗೆ ಅಧ್ಯಯನ ಮಾಡಿ ಹಿಂದೂಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಜಾವಿದ್ ಹಿಂದೂ ಧರ್ಮಕ್ಕೆ ಮತಾಂತರಗೊಂಡು ರೋಸ್ಟಂಪರ್ ಆಗಿ ಪರಿವರ್ತನೆಯಾಗಿರುವ ಸಂಗತಿ ಸಿಸಿಬಿ ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಎಂಬಿಎ ಪದವಿ ಮಾಡಿದ್ದ ಇರಾನಿ ಮೂಲದ ಜಾವೀದ್ ಉದ್ಯೋಗ ಅರಿಸಿ ಭಾರತಕ್ಕೆ ಬಂದಿದ್ದ. 2010 ರಲ್ಲಿಯೇ ಭಾರತಕ್ಕೆ ಬಂದಿದ್ದ. ಖಾಸಗಿ ಕಂಪನಿಯಲ್ಲಿ ಉದ್ಯೋಗವನ್ನು ಸಂಪಾದನೆ ಮಾಡಿದ್ದ. ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದ ಜಾವೀದ್ ಖಿನ್ನತೆಗೆ ಒಳಗಾಗಿ ಗಾಂಜಾ ಸೇವನೆ ಕರಗತ ಮಾಡಿಕೊಂಡಿದ್ದ. ಗಾಂಜಾ ಸೇವನೆಯಿಂದ ಸಂತೋಷ ಕಂಡುಕೊಂಡು ಅದರ ದಾಸನಾಗಿ ಪರಿವರ್ತನೆಯಾಗಿದ್ದಾನೆ.
ಗಾಂಜಾ ಬಗ್ಗೆ ಅಧ್ಯಯನ ಮಾಡಲು ಶುರು ಮಾಡಿದ್ದಾನೆ. ಈ ಕುರಿತು ಸಾಕಷ್ಟು ಪುಸ್ತಕಗಳನ್ನು ಅಧ್ಯಯನ ಮಾಡಿದ್ದಾನೆ. ಗಾಂಜಾ ಎಂದರೆ ಶಿವ, ಶಿವ ಎಂದರೆ ಗಾಂಜಾ ಎಂದೇ ನಂಬಿದ್ದ ಜಾವೀದ್ ಇಸ್ಲಾಂ ಧರ್ಮವನ್ನು ಬಿಟ್ಟು ಹಿಂದೂಧರ್ಮಕ್ಕೆ ಪರಿವರ್ತನೆಯಾಗಿದ್ದಾನೆ. ತನ್ನ ಮೂಲ ಹೆಸರು ಜಾವಿದ್ ಎಂಬುದನ್ನು ತೊರೆದು ರೋಸ್ಟಂಬರ್ ಎಂಬ ಹೆಸರನ್ನು ಇಟ್ಟುಕೊಂಡಿದ್ದಾನೆ. ಇರಾನ್ ನಲ್ಲಿ ಇಸ್ಲಾಂ ಧರ್ಮ ಉದಯಿಸುವ ಮುನ್ನ ಜೋರಾಸ್ಟ್ರಿಸಂ ಇತ್ತು. ಜೊರಾಸ್ಟ್ರಿಸಂ ಮತ್ತು ಹಿಂದೂ ಧರ್ಮ ಒಂದೇ ಎಂದು ಭಾವಿಸಿದ್ದ ಜಾವೀದ್, ಇದಕ್ಕಾಗಿ ಸುಮಾರು ಆರು ತಿಂಗಳ ಕಾಲ ಅನೇಕ ಪುಸ್ತಕಗಳನ್ನು ಓದಿ ಅಧ್ಯಯನ ಮಾಡಿದ್ದ. ಅಮೇಜಾನ್ ಜಾಲ ತಾಣದಲ್ಲಿ ಶಿವನ ಕುರಿತು ಅನೇಕ ಪುಸ್ತಕ ಖರೀದಿಸಿ ಅಧ್ಯಯನ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಶಿರಚ್ಛೇಧ ಭಯಕ್ಕೆ ಭಾರತದಲ್ಲಿ ನೆಲೆ:
ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ರೊಸ್ಟಂಪರ್ ಮತಾಂತರಗೊಂಡು ಹೋದರೆ ಶಿರಚ್ಛೇಧ ಮಾಡುತ್ತಾರೆ ಎಂಬ ಭಯಕ್ಕೆ ಒಳಗಾಗಿದ್ದ. ಹೀಗಾಗಿ ಭಾರತದಲ್ಲಿಯೇ ಉಳಿದುಕೊಳ್ಳಲು ತೀರ್ಮಾನಿಸಿದ್ದ. ಕೆಲಸ ಇಲ್ಲದೇ ಕಂಗಾಲಾಗಿದ್ದ ರೋಸ್ಟಂಬರ್ ಹಣಕ್ಕಾಗಿಯೂ ಗಾಂಜಾ ಬೆಳೆಯುವ ಬಗ್ಗೆ ಆಲೋಚನೆ ಮಾಡಿದ್ದಾನೆ. ಅದರ ಭಾಗವಾಗಿ ಹೈಡ್ರೋ ಗಾಂಜಾ ಬಗ್ಗೆ ಅಧ್ಯಯನ ಆರಂಭಿಸಿದ್ದಾನೆ. ಡಿನೋಸೆಮ್ ಗ್ರೋವಿಸಿಡಿ ಎಂಬ ವೆಬ್ ತಾಣದಲ್ಲಿ ಹೈಡ್ರೋ ಗಾಂಜಾ ಬಗ್ಗೆ ಅಧ್ಯಯನ ಮಾಡಿದ್ದು, ಅಮೇಜಾನ್ ನಿಂದ ಗಾಂಜಾ ಕುರಿತಾದ ಅನೇಕ ಪುಸ್ತಕ ತರಿಸಿ ಓದಿದ್ದಾನೆ. ಆರು ತಿಂಗಳಲ್ಲಿ ಹೈಡ್ರೋ ಗಾಂಜಾ ಬೆಳೆ ಬೆಳೆಯುವುದನ್ನು ಅರಿತ ಜಾವೀದ್ ಯೂರೋಪ್ ನಿಂದ ಹೈಡ್ರೋ ಗಾಂಜಾ ಸೀಡ್ ನ್ನು ತರಿಸಿಕೊಂಡಿದ್ದಾನೆ.

ಹೈಡ್ರೋ ಗಾಂಜಾ ಪ್ರಯೋಗ:
ಆನ್ಲೈನ್ ನಲ್ಲಿ ತರಿಸಿದ್ದ ಹೈಡ್ರೋ ಗಾಂಜಾದ ಕೆಲ ಸೀಡ್ ನ್ನು ಫಿಶ್ ಟ್ಯಾಂಕ್ ನಲ್ಲಿ ಹಾಕಿ ಪರೀಕ್ಷೆ ಮಾಡಿದ್ದಾನೆ. ಫಿಶ್ ಟ್ಯಾಂಕ್ ನಲ್ಲಿ ಬೀಜ ಬೆಳೆದಿದ್ದನ್ನು ನೋಡಿ ಹೈಡ್ರೋ ಗಾಂಜಾ ಬೆಳೆಯಲು ಸಿದ್ಧತೆ ನಡೆಸಿದ್ದಾನೆ. ಸಿಸಿಬಿ ಪೊಲೀಸರು ಡ್ರಗ್ ಪ್ರಕರಣದಲ್ಲಿ ಪೆಡ್ಲರ್ ಗಳನ್ನು ಬಂಧಿಸಿದ್ದನ್ನು ನೋಡಿ ಹೆದರಿದ್ದ ಜಾವೀದ್ ರೋಸ್ಟಂಪರ್, ಕಮ್ಮನಹಳ್ಳಿ ಬಿಟ್ಟು ಬಿಡದಿಯ ವಿಲ್ಲಾಗೆ ವರ್ಗಾವಣೆಯಾಗಿದ್ದ. ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ತನಿಖೆ ನೋಡಿ ಭಯ ಬೀತನಾಗಿದ್ದ ರೋಸ್ಟಂಪರ್, ನೋ ಬ್ರೋಕರ್ ವೆಬ್ ತಾಣದ ಮೂಲಕ ಮಿಲಿಟರಿ ಅಧಿಕಾರಿಯ ವಿಲ್ಲಾ ಬಾಡಿಗೆ ಪಡೆದಿದ್ದ. ಈಗಲ್ ಟನ್ ರೆಸಾರ್ಟ್ ನಲ್ಲಿರುವ ವಿಲ್ಲಾವನ್ನು ಮಾಸಿಕ 36 ಸಾವಿರ ರೂ. ಬಾಡಿಗೆಗೆ ಪಡೆದಿದ್ದ. ಮನೆಯಲ್ಲಿದ್ದ ಒಂದು ಕೊಠಡಿಯಲ್ಲಿ ಹೈಡ್ರೋ ಗಾಂಜಾ ಬೆಳೆದಿದ್ದ.

ಹೈಡ್ರೋ ಗಾಂಜಾ ಬೆಳೆಯಲು ಯುವಿ ಲೈಟ್, ಎಲ್ಇಡಿ, ಲ್ಯಾಂಪ್ ಟೆಂಪರೇಚರ್, ರೆಗ್ಯುಲೇಟರ್ ಬಳಿಸಿ ಮನೆಯಲ್ಲಿಯೇ ಹೈಡ್ರೋ ಗಾಂಜಾ ಬೇಸಾಯ ಅರಂಭಿಸಿದ್ದ. ರೋಸ್ಟಂಪರ್ ಅಂದುಕೊಂಡಂತೆ ಉತ್ತಮ ಫಸಲು ಬಂತು. ಡ್ರಗ್ ಪೆಡ್ಲರ್ ಗಳ ಸಂಪರ್ಕ ಸಾಧಿಸಿ ಅದನ್ನು ಮಾರಾಟ ಮಾಡುತ್ತಿದ್ದ. ಹೀಗೆ ಮಾರಾಟ ಮಾಡುವ ಮೂಲಕ ಬೇಕಾದಷ್ಟು ಹಣ ಸಂಪಾದನೆ ಮಾಡಿ ಮಜಾ ಉಡಾಯಿಸುತ್ತಿದ್ದ. ರೋಸ್ಟಂಪರ್ ನಿಂದ ಹೈಡ್ರೋ ಗಾಂಜಾ ಪಡೆದು ಮಾರಾಟ ಮಾಡುತ್ತಿದ್ದ ನಾಲ್ವರು ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಅವರು ನೀಡಿದ ಮಾಹಿತಿ ಮೇರೆಗೆ ಈಗಲ್ ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿ ರೋಸ್ಟಂಪರ್ ನನ್ನು ಬಂಧಿಸಿದ್ದಾರೆ. ಗಾಂಜಾ ಎಂದರೆ, ಶಿವ, ಶಿವ ಎಂದೆ ನೇಚರ್ ಎಂದು ನಂಬಿಕೆ ಬೆಳೆಸಿಕೊಂಡು ಮತಾಂತರಗೊಂಡಿರುವ ಜಾವೀದ್ ರೋಸ್ಟಂಪರ್ ಆಗಿ ಪರಿವರ್ತನೆಯಾಗಿರುವ ವಿಚಾರ ಇದೀಗ ಚರ್ಚೆಗೆ ನಾಂದಿ ಹಾಡಿದೆ.












Click it and Unblock the Notifications