ವಿಧಾನ ಸೌಧದಲ್ಲಿ ಮೊದಲ ಬಾರಿ ಶ್ರೀ ಕೃಷ್ಣ ಜಯಂತಿ
ಬೆಂಗಳೂರು, ಸೆಪ್ಟೆಂಬರ್, 04 : ನಾಡಿನಾದ್ಯಂತ ಮುರಾರಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಪೂಜೆ ಪುನಸ್ಕಾರಗಳಲ್ಲಿ ಮಿಂದೇಳಲಿದ್ದಾನೆ ನಾದ ಲೋಲ ವೇಣುಗೋಪಾಲ.
ಕನ್ನಡ ಸಂಸ್ಕೃತಿ ಇಲಾಖೆ ವಿಧಾನ ಸೌಧದ ಬ್ಯಾಂಕ್ವೇಟ್ ಹಾಲ್ನಲ್ಲಿ ಸೆಪ್ಟೆಂಬರ್ 5 ರ ಶನಿವಾರ ಸಂಜೆ 5.30 ಕ್ಕೆ ಇದೇ ಮೊದಲ ಬಾರಿ ಶ್ರೀ ಕೃಷ್ಣ ಜಯಂತಿ ಆಚರಿಸಲು ತೀರ್ಮಾನ ತೆಗೆದುಕೊಂಡಿದೆ.[ಕೃಷ್ಣ ಜನ್ಮಾಷ್ಟಮಿ ಮತ್ತು ಕೃಷ್ಣ ಜಯಂತಿಗಿರುವ ವ್ಯತ್ಯಾಸವೇನು?]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ನಡೆಯುವ ಅದ್ದೂರಿಭರಿತ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜನ್ಮಾಷ್ಟಮಿಯ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಸಂಘದ ಅಧ್ಯಕ್ಷ ಬಿ.ಎಸ್ ಲಕ್ಷ್ಮೀಪತಿ 'ಕೃಷ್ಣ ಜನ್ಮಾಷ್ಟಮಿ ದಿನದಂದು ನಗರ್ತರ ಪೇಟೆಯ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ಮಧ್ಯಾಹ್ನ 2.30ಕ್ಕೆ ಬೆಳ್ಳಿ ರಥದಲ್ಲಿ ಶ್ರೀ ಕೃಷ್ಣನ ಮೆರವಣಿಗೆ ಬ್ಯಾಂಕ್ವೆಟ್ ಹಾಲ್ಗೆ ಬರಲಿದೆ.[ಬಸವನಗುಡಿಯಲ್ಲಿ ಕೃಷ್ಣ ಜನ್ಮಾಷ್ಟಮಿ, ಲೀಲೋತ್ಸವ]
ಕೃಷ್ಣ ಜಯಂತಿಯನ್ನು ಸರ್ಕಾರದಿಂದ ಆಚರಿಸುವಂತೆ ಯಾದವ ಸಮುದಾಯವು ರಾಜ್ಯ ಸರ್ಕಾರಕ್ಕೆ ಎರಡು ವರ್ಷದ ಹಿಂದೆಯೇ ಮನವಿ ಮಾಡಿಕೊಂಡಿತ್ತು. ಅದಕ್ಕೆ ಸ್ಪಂದಿಸಿರುವ ಸರ್ಕಾರ ಈ ಬಾರಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಚರಿಸಲು ನಿರ್ಧಾರ ತೆಗೆದುಕೊಂಡಿದೆ. ಈ ಆಚರಣೆ ರಾಜ್ಯಾದ್ಯಂತ ನಡೆಯಲಿದೆ ಎಂದರು.
ಈ ಸಡಗರದಲ್ಲಿ ವಿಧಾನ ಸಭಾದ್ಯಕ್ಷ ಕಾಗೋಡು ತಿಮ್ಮಪ್ಪ, ಸಚಿವರಾದ ರಾಮಲಿಂಗಾರೆಡ್ಡಿ, ಉಮಾಶ್ರೀ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.