ಒಟ್ಟಿಗೆ ಮಜಾ ಮಾಡೋಣ ಎಂದು ಕರೆದ ಸರ್ಜಾ: ಶ್ರುತಿ ಹರಿಹರನ್ ದೂರು
Recommended Video

ಬೆಂಗಳೂರು, ಅಕ್ಟೋಬರ್ 27: ಅರ್ಜುನ್ ಸರ್ಜಾ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸುವ ಮೂಲಕ ಭಾರಿ ವಿವಾದ ಸೃಷ್ಟಿಸಿರುವ ನಟಿ ಶ್ರುತಿ ಹರಿಹರನ್ ಶನಿವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ, ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹಿರಿಯ ನಟ ಅಂಬರೀಶ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿತ್ತು.
ಬಳಿಕ ಶ್ರುತಿ, ಅರ್ಜುನ್ ಸರ್ಜಾ ವಿರುದ್ಧ ದೂರು ನೀಡಲು ನಿರ್ಧರಿಸಿದ್ದರು. ವಕೀಲರ ಜೊತೆ ಕಾನೂನಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದ ಶ್ರುತಿ ಶನಿವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸರ್ಜಾ ವಿರುದ್ಧ ಶ್ರುತಿ ದೂರು: ಯುಬಿ ಸಿಟಿ ಘಟನೆ ಬಿಚ್ಚಿಟ್ಟ ನಟಿ
'2015ರಿಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅರ್ಜುನ್ ಸರ್ಜಾ ಅವರ ವಿರುದ್ಧ ದೂರು' ಎಂಬ ವಿಷಯದಡಿ ಅವರು ಸಲ್ಲಿಸಿರುವ ಮೂರು ಪುಟದ ದೂರಿನಲ್ಲಿ ಏನೇನಿದೆ ಓದಿ...

ರಿಹರ್ಸಲ್ ಸಮಯದಲ್ಲಿ ದೌರ್ಜನ್ಯ
2015ರ ನವೆಂಬರ್ನಲ್ಲಿ ನಾನು 'ವಿಸ್ಮಯನ್' ಎಂಬ ಸಿನಿಮಾದಲ್ಲಿ ನಟಿಸಿದ್ದೆ. ಅದರಲ್ಲಿ ನನ್ನದು ರಂಜಿತ್ ಕಾಳಿದಾಸ್ (ಅರ್ಜುನ್ ಸರ್ಜಾ ಪಾತ್ರ) ಅವರ ಪತ್ನಿಯ ಪಾತ್ರವಾಗಿತ್ತು. ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜ್ ಸಮೀಪದ ಬಂಗಲೆಯೊಂದರಲ್ಲಿ ಅದರ ಚಿತ್ರೀಕರಣ ನಡೆದಿತ್ತು. ಬೆಳಿಗ್ಗೆ 7.30ರ ಸಮಯಕ್ಕೆ ಸೆಟ್ಗೆ ಪ್ರವೇಶಿಸಿದ್ದ ನಾನು 6 ಗಂಟೆವರೆಗೂ ಅಲ್ಲಿದ್ದೆ.
ಆಗ ರಿಹರ್ಸಲ್ ಸಮಯದಲ್ಲಿ ಅರ್ಜುನ್ ಸರ್ಜಾ ನನ್ನನ್ನು ಅಸಭ್ಯವಾಗಿ ಮುಟ್ಟಿದ್ದರು. ಅವರು ಹಿರಿಯ ನಟರಾಗಿದ್ದು, ನಾನು ಇನ್ನೂ ಹೊಸಬಳಾಗಿದ್ದರಿಂದ ಅದರಿಂದ ಆದ ನೋವನ್ನು ನನ್ನಲ್ಲಿಯೇ ಮುಚ್ಚಿಟ್ಟುಕೊಂಡಿದ್ದೆ ಎಂದು ಶ್ರುತಿ ಹೇಳಿದ್ದಾರೆ.

ರೆಸಾರ್ಟ್ಗೆ ಕರೆದಿದ್ದರು
2015ರ ಡಿಸೆಂಬರ್ನಲ್ಲಿ ದೇವನಹಳ್ಳಿಯ ಆಸ್ಪತ್ರೆಯೊಂದರ ಶೂಟಿಂಗ್ ಸಂದರ್ಭದಲ್ಲಿ ಅವರು ಅನುಚಿತವಾಗಿ ವರ್ತಿಸಿದ್ದರು. ಖಾಸಗಿಯಾಗಿ ಸ್ವಲ್ಪ ಕಾಲ ಕಳೆಯೋಣ ಎಂದು ಹೇಳಿದ್ದರು.
ಅದೇ ತಿಂಗಳು ಮತ್ತೊಮ್ಮೆ ಅವರು ರೆಸಾರ್ಟ್ಗೆ ಬರುವಂತೆ ಕರೆದಿದ್ದರು. ಏಕೆ ಎಂದು ಕೇಳಿದಾಗ, ಮಜವಾಗಿ ಸಮಯ ಕಳೆಯೋಣ. ಈ ಬಗ್ಗೆ ಸತತವಾಗಿ ನಿನಗೆ ಕೇಳುತ್ತಿದ್ದೇನೆ. ನೀನು ನಿರಾಕರಿಸುತ್ತಿದ್ದೀಯ. ಇವತ್ತು ನನಗೆ ಸಂಪೂರ್ಣ ಸಮಯವಿದೆ. ನನ್ನ ಕೊಠಡಿಯಲ್ಲಿ ಯಾರೂ ಇಲ್ಲ ಎಂದು ಹೇಳಿದ್ದರು. ಆಗ ನಾನು ತುಂಬಾ ದುಃಖದಿಂದ ಕಣ್ಣೀರಿಟ್ಟಿದ್ದೆ.

'ಕೆರಿಯರ್ ಹಾಳು ಮಾಡುತ್ತೇನೆ'
2016ರ ಜುಲೈ 18ರಂದು ಅದೇ ಸಿನಿಮಾದ ಚಿತ್ರೀಕರಣಕ್ಕೆಂದು ಯುಬಿ ಸಿಟಿಗೆ ತೆರಳಿದ್ದೆ. ಅಲ್ಲಿನ ಲಾಬಿಯಲ್ಲಿದ್ದಾಗ ನನ್ನ ಹಿಂಬದಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. 'ಲಾಬಿಯಲ್ಲಿ ಏಕೆ ಒಂಟಿಯಾಗಿದ್ದಿ. ನನ್ನ ಕೋಣೆಗೆ ಬಂದು ನನಗೆ ಏಕೆ ಕಂಪೆನಿ ಕೊಡಬಾರದು. ನಾನೂ ಒಬ್ಬನೇ ಇದ್ದೇನೆ. ಸ್ವಲ್ಪ ಮಜ ಮಾಡಬಹುದು' ಎಂದರು. ಅವರ ಉದ್ದೇಶವನ್ನು ಅರ್ಥ ಮಾಡಿಕೊಂಡಿದ್ದೆ. ನಾನು ಬರುವುದಿಲ್ಲ ಎಂದೆ.
'ಒಂದು ದಿನ ನನ್ನ ಖಾಸಗಿ ಕೋಣೆಗೆ ನೀನು ಬರುವಂತೆ ಮಾಡುತ್ತೇನೆ' ಎಂದು ಹೇಳಿದ್ದರು. ಮತ್ತೆ ನಿರಾಕರಿಸಿದಾಗ 'ಜಾಗ್ರತೆ, ಯಾರಿಗಾದರೂ ಹೇಳಿದರೆ ನಿನ್ನ ವೃತ್ತಿ ಬದುಕನ್ನು ಹಾಳು ಮಾಡುತ್ತೇನೆ. ಎಲ್ಲೆಲ್ಲೋ ಎಳೆದಾಡಿ ನಿನ್ನ ಜೀವನ ಕಷ್ಟವಾಗುವಂತೆ ಮಾಡುತ್ತೇನೆ' ಎಂದು ಬೆದರಿಸಿದರು.

ಪ್ರತಿಷ್ಠಿತ, ಪ್ರಭಾವಿ ವ್ಯಕ್ತಿ
ಈ ಘಟನೆಯನ್ನು ನನ್ನ ಸ್ನೇಹಿತೆಯಾದ ಯಶಸ್ವಿನಿ ಬಳಿ ಎಳೆಎಳೆಯಾಗಿ ವಿವರಿಸಿ ಚರ್ಚಿಸಿದ್ದೆ. ಸಿನಿಮಾದಲ್ಲಿನ ರೊಮ್ಯಾಂಟಿಕ್ ಸನ್ನಿವೇಶಗಳ ಲಾಭ ಪಡೆದು ದೌರ್ಜನ್ಯ ಎಸಗಿದ್ದನ್ನು ತಿಳಿಸಿದ್ದೆ. ಅರ್ಜುನ್ ಸರ್ಜಾ ತುಂಬಾ ಜನಪ್ರಿಯ, ಹಿರಿಯ ಮತ್ತು ಪ್ರಭಾವಿ ನಟರಾಗಿದ್ದು, ಅವರ ವಿರುದ್ಧ ಪೊಲೀಸ್ ದೂರು ನೀಡಿದರೆ ನಿನ್ನ ವೃತ್ತಿ ಬದುಕಿಗೆ ಹಾನಿ ಮಾಡುವಷ್ಟು ಶಕ್ತರಾಗಿದ್ದಾರೆ. ಜತೆಗೆ ಅದು ನಿನ್ನ ಪ್ರತಿಷ್ಠೆಗೆ ಕುಂದುಂಟುಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಹೀಗಾಗಿ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
ಅರ್ಜುನ್ ಸರ್ಜಾ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸಾಕಷ್ಟು ಬಾರಿ ಯೋಚಿಸಿದ್ದರೂ, ಅದಕ್ಕೆ ಧೈರ್ಯ ಬಂದಿರಲಿಲ್ಲ. ನನ್ನ ಇತರೆ ಆಪ್ತ ವಲಯದಲ್ಲಿ ಈ ಬಗ್ಗೆ ಚರ್ಚಿಸಿದಾಗಲೂ ನಿನ್ನ ಜೀವಕ್ಕೆ ಅಪಾಯವಾಗಬಹುದು. ಹೀಗಾಗಿ ಇದನ್ನು ಕೆದಕುವುದು ಬೇಡ ಎಂದು ಸಲಹೆ ನೀಡಿದ್ದರು. ಈ ಘಟನೆಯಿಂದ ಮಾನಸಿಕವಾಗಿ ತುಂಬಾ ವೇದನೆ ಅನುಭವಿಸಿದ್ದೇನೆ.

ಧೈರ್ಯ ನೀಡಿದ ಮೀಟೂ
ಮೀಟೂ ಅಭಿಯಾನ ತೀವ್ರವಾಗಿ ನಡೆದು ಅನೇಕ ಹಳೆದ ಘಟನೆಗಳು ಬಹಿರಂಗವಾದ ಬಳಿಕ ನನಗೂ ಧೈರ್ಯ ಬಂದಿತು. ಎರಡು ವರ್ಷದ ಯೋಚನೆಯ ಬಳಿಕ ಅರ್ಜುನ್ ಸರ್ಜಾ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಇದಕ್ಕೆ ಸಾಮಾಜಿಕ ಮಾಧ್ಯಮವನ್ನು ಬಳಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಉದ್ದೇಶಿಸಿದ್ದರಿಂದ ತಡವಾಯಿತು.

ಐಪಿಸಿ ಸೆಕ್ಷನ್ ಅಡಿ ದೂರು
ಭಾರತೀಯ ದಂಡ ಸಂಹಿತೆಯನ್ನು ಅಧ್ಯಯನ ಮಾಡಿದ್ದು, ಅರ್ಜುನ್ ಸರ್ಜಾ ಅವರು ಎಸಗಿರುವುದು ಐಪಿಸಿ ಸೆಕ್ಷನ್ 354, 354 A, 509 ಅಡಿಯಲ್ಲಿ ಅಪರಾಧಗಳಾಗಿವೆ. ಈ ದೂರನ್ನು ಪರಿಗಣಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶ್ರುತಿ ಹೇಳಿದ್ದಾರೆ.












Click it and Unblock the Notifications