ಸಮ್ಮಿಶ್ರ ಸರ್ಕಾರ ಬೀಳಿಸಲ್ಲ, ಬಿದ್ರೆ ಸುಮ್ನೆ ಕೂರಲ್ಲ: ಶ್ರೀರಾಮುಲು
ಬೆಂಗಳೂರು, ಸೆಪ್ಟೆಂಬರ್ 19: ರಾಜ್ಯ ಸಮ್ಮಿಶ್ರ ಸರ್ಕಾರ ತಾನಾಗಿಯೇ ಬಿದ್ದರೆ ಮಾತ್ರ ಬಿಜೆಪಿ ಸರ್ಕಾರ ರಚನೆ ಮಾಡುತ್ತದೆ, ನಾವು ಯಾವುದೇ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿಲ್ಲ ಎಂದು ಬಿಜೆಪಿ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬೀದಿ ಬೀದಿಗಳಲ್ಲಿ ಕಚ್ಚಾಡಿಕೊಂಡು ಓಡಾಡುತ್ತಿದ್ದಾರೆ, ಕೆಲವರು ಗುಂಪು ಕಟ್ಟಿಕೊಂಡು ದೆಹಲಿಗೆ ಓಡಿ ಹೋಗಿದ್ದಾರೆ ಹೀಗಾಗಿ ನಾವು ಸರ್ಕಾರ ಬೀಳಿಸುವ ಅಗತ್ಯವಿಲ್ಲ ಅವರೇ ಕಚ್ಚಾಡಿಕೊಂಡು ಸರ್ಕಾರ ಕೆಡವಿದರೆ ಮಾತ್ರ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ವರ್ಗಾವಣೆ ದಂಧೆ ಮತ್ತಿತರೆ ಕಾರಣಗಳಿಗಾಗಿ ಅವರಲ್ಲಿ ಕಚ್ಚಾಟ ಆರಂಭವಾಗಿದೆ ಅವರು ಎಲ್ಲಿಗಾದರೂ ಹೋಗಲಿ ಆ ಬಗ್ಗೆ ನಾವು ತಲೆಕಡಿಸಿಕೊಳ್ಳುವುದಿಲ್ಲ, ಕಾಂಗ್ರೆಸ್ ಶಾಸಕರು ದೆಹಲಿಗೆ ಹೋದರೆ ಅದಕ್ಕೆ ನಾವು ಜವಾಬ್ದಾರರಲ್ಲ ಅವರಾಗಿಯೇ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದು ಅದನ್ನು ಬಿಜೆಪಿಯ ಮೇಲೆ ಹೊರಿಸುತ್ತಿದ್ದಾರೆ ನಾವು ಇದನ್ನು ದೂರದಿಂದ ನೋಡುತ್ತಿದ್ದೇವೆ ಎಷ್ಟೇ, ನಾವು ಸರ್ಕಾರ ಕೆಡವಿ ನಮ್ಮ ಸರ್ಕಾರ ರಚಿಸಲು ಹೋಗುವುದಿಲ್ಲ ಸರ್ಕಾರ ತಾನಾಗಿಯೇ ಬಿದ್ದರೆ ಸುಮ್ಮನಿರುವುದಿಲ್ಲ ಎಂದರು.

ಸಮ್ಮಿಶ್ರ ಸರ್ಕಾರವು ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿಲ್ಲ, ರಾಗಿಕಾಳಿನಷ್ಟು ಸರ್ಕಾರದ ಮೇಲೆ ಜನರಿಗೆ ನಂಬಿಕೆ ಇಲ್ಲ, ಜೆಡಿಎಸ್ ಒಂದು ಗುಂಪು, ಕಾಂಗ್ರೆಸ್ ಒಂದು ಗುಂಪು ಮಾಡಿಕೊಂಡಿದೆ, ಸರ್ಕಾರದ ತಪ್ಪುಗಳನ್ನು ಬಿಜೆಪಿ ಮೇಲೆ ಹೊರಿಸಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಜನರ ನಂಬಿಕೆ. ವಿಶ್ವಾಸವನ್ನು ಕಳೆದುಕೊಂಡರೆ ಸರ್ಕಾರವು, ಉತ್ತಮ ಸರ್ಕಾರವಾಗಿ ಉಳಿಯಲು ಸಾಧ್ಯವಿಲ್ಲ, ಪಾರದರ್ಶಕದ ರಾಜಕಾರಣವಾಗಿರದೆ ಸೇಡಿನ ರಾಜಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications