ಕರ್ನಾಟಕದ ಪ್ರಮುಖ ಗುರೂಜಿಗೆ ಆಯೋಧ್ಯೆಯ ಆಹ್ವಾನವಿಲ್ಲ!
ಬೆಂಗಳೂರು, ಆ.5: ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿಂದು ಅಭಿಜಿನ್ ಮುಹೂರ್ತದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ಕಾರ್ಯ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಪ್ರಧಾನಿ ಮೋದಿ ಅವರು ಪೂಜೆ ಸಲ್ಲಿಸಿ, ಅಡಿಗಲ್ಲು ಇಡಲಿರುವ ಈ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು, ಸಾಧು ಸಂತರಿಗೆ ಆಹ್ವಾನ ಸಿಕ್ಕಿದೆ. ಆದರೆ ಕರ್ನಾಟಕದ ಪ್ರಮುಖ ಗುರೂಜಿಗೆ ಆಯೋಧ್ಯೆಯಿಂದ ಆಹ್ವಾನ ಬಂದಿಲ್ಲ ಎಂಬ ಸುದ್ದಿ ಬಂದಿದೆ.
ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ಆಧಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಅವರಿಗೆ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲು ಅಧಿಕೃತ ಆಹ್ವಾನ ಸಿಕ್ಕಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ, ಸುದ್ದಿಯನ್ನು ಅಲ್ಲಗೆಳೆದಿರುವ ಆರ್ಟ್ ಆಫ್ ಲಿವಿಂಗ್ ವಕ್ತಾರರು, ಶ್ರೀಗಳಿಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಮಜನ್ಮಭೂಮಿ ಭೂಮಿ ಹಂಚಿಕೆ ವಿವಾದ ಇನ್ನೂ ನ್ಯಾಯಾಲಯದಲ್ಲಿದ್ದಾಗ, ಈ ವ್ಯಾಜ್ಯವನ್ನು ನ್ಯಾಯಾಲಯದ ಹೊರಗಡೆ ಇತ್ಯರ್ಥ ಮಾಡಿಕೊಳ್ಳುವಂತೆ ಒಂದು ಹಂತದಲ್ಲಿ ಸುಪ್ರೀಂಕೋರ್ಟ್ ಸೂಚಿಸಿತ್ತು. ಇದಕ್ಕಾಗಿ ಮೂವರು ಸದಸ್ಯರ ಸಂಧಾನ ಸಮಿತಿ ನೇಮಿಸಲಾಗಿತ್ತು. ಈ ಸಂಧಾನ ಸಮಿತಿಯಲ್ಲಿ ರವಿಶಂಕರ್ ಕೂಡಾ ಒಬ್ಬರಾಗಿದ್ದರು. ಆದರೆ, ಸಂಧಾನ ಸಫಲವಾಗದೆ ನ್ಯಾಯಪೀಠದ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಯಿತು.

ಆಗಸ್ಟ್ 5ರಂದು ಪ್ರಧಾನಿ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಸುತ್ತಿದ್ದಾರೆ. ಶಂಕು ಸ್ಥಾಪನೆ ದಿನದಂದು 40 ಕೆಜಿ ಬೆಳ್ಳಿಯ ಇಟ್ಟಿಗೆಯನ್ನು ಇಟ್ಟು ಮೋದಿ ಪೂಜಿಸಲಿದ್ದಾರೆ. ದೂರದರ್ಶನ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ.












Click it and Unblock the Notifications