ಕರ್ನಾಟಕದಿಂದ 2 ಯೋಜನೆ ವಿಳಂಬ; ರೈಲ್ವೆ ಮಂಡಳಿಗೆ ಪತ್ರ
ಬೆಂಗಳೂರು, ಮಾರ್ಚ್ 11 : ಎರಡು ರೈಲ್ವೆ ಯೋಜನೆ ಕಾಮಗಾರಿಯನ್ನು ಕರ್ನಾಟಕ ಸರ್ಕಾರ ವಿಳಂಬ ಮಾಡುತ್ತಿದೆ. ಆದ್ದರಿಂದ, ಯೋಜನೆಯನ್ನು ಕರ್ನಾಟಕ ಸರ್ಕಾರದಿಂದ ವಾಪಸ್ ಕೊಡಿಸಬೇಕು ಎಂದು ನೈಋತ್ಯ ರೈಲ್ವೆ ಕೇಂದ್ರ ರೈಲ್ವೆ ಮಂಡಳಿಗೆ ಪತ್ರ ಬರೆದಿದೆ.
ಬೈಯ್ಯಪ್ಪನಹಳ್ಳಿ-ಹೊಸೂರು (48 ಕಿ. ಮೀ. ) ಮತ್ತು ಚನ್ನಸಂದ್ರ-ಯಶವಂತಪುರ (21.7 ಕಿ. ಮೀ) ಜೋಡಿ ಹಳಿ ಕಾಮಗಾರಿಯನ್ನು ಕರ್ನಾಟಕ ವಿಳಂಬ ಮಾಡುತ್ತಿದೆ ಎಂದು ನೈಋತ್ಯ ರೈಲ್ವೆ ಪತ್ರದಲ್ಲಿ ಹೇಳಿದೆ. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯೋಜನೆ ತಡವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಎರಡೂ ಮಾರ್ಗದಲ್ಲಿ ಹೆಚ್ಚಿನ ರೈಲುಗಳು ಸಂಚಾರ ನಡೆಸುತ್ತವೆ. ಯೋಜನೆಯನ್ನು ಬೇಗ ಪೂರ್ಣಗೊಳಿಸಬೇಕು ಎಂಬುದು ನೈಋತ್ಯ ರೈಲ್ವೆಯ ಬೇಡಿಕೆಯಾಗಿದೆ. 2021ಕ್ಕೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು.
2018ರ ಅಕ್ಟೋಬರ್, ನವೆಂಬರ್ನಲ್ಲಿ ಹೊಸೂರು-ಚನ್ನಸಂದ್ರ ಮಾರ್ಗದ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಆದರೆ, ಯೋಜನೆಯ ಅರ್ಧ ವೆಚ್ಚ 690 ಕೋಟಿಯನ್ನು ಭರಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಮಾತಿಗೆ ತಪ್ಪಿದ ಹಿನ್ನಲೆಯಲ್ಲಿ ಟೆಂಡರ್ ಪ್ರಕ್ರಿಯೆ ವಿಳಂಬವಾಯಿತು.
ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ತಲಾ ಶೇ 20ರಷ್ಟು ಅನುದಾನ ನೀಡಲಿವೆ. ಉಳಿದ ಅನುದಾನವನ್ನು ಸಾಲದ ಮೂಲಕ ಪಡೆಯಲು ತೀರ್ಮಾನಿಸಲಾಗಿತ್ತು. ಇದರಿಂದಾಗಿ ಅನುದಾನ ಹಂಚಿಕೆ ಹೊರೆ ಕಡಿಮೆಯಾಗುತ್ತಿತ್ತು.
ರೈಲ್ವೆ ಬೋರ್ಡ್ ಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಿತ್ತು. ಕೆ-ರೈಡ್ ಕೈಗೊಳ್ಳಬೇಕಿದ್ದ ಕಾಮಗಾರಿ ಇನ್ನೂ ಆರಭವಾಗಿಲ್ಲ. ನಿಗದಿತ ಗುರಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನವಾಗಿದೆ.
2020ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವರೂ ಆದ ಬಿ. ಎಸ್. ಯಡಿಯೂರಪ್ಪ ರೈಲ್ವೆ ಯೋಜನೆಯ ಅರ್ಧ ಅನುದಾನವನ್ನು ರಾಜ್ಯ ನೀಡಲಿದೆ ಎಂದು ಘೋಷಣೆ ಮಾಡಿದ್ದಾರೆ. ಈಗಲಾದರೂ ಯೋಜನೆ ಆರಂಭವಾಗಲಿದೆಯೇ?.
ಈಗ ಯೋಜನೆಯನ್ನು ರಾಜ್ಯ ಸರ್ಕಾರದಿಂದ ನೈಋತ್ಯ ರೈಲ್ವೆಗೆ ವಾಪಸ್ ಕೊಡಿಸಿ ಎಂದು ಪತ್ರ ಬರೆಯಲಾಗಿದೆ. ಈ ಕುರಿತ ಪ್ರಕ್ರಿಯೆ ಇನ್ನೂ ಬಾಕಿ ಇದೆ. ರೈಲ್ವೆ ಮಂಡಳಿ ಒಪ್ಪಿಗೆ ನೀಡಿದರೆ ಯೋಜನೆ ಪುನಃ ಕೇಂದ್ರದ ಕೈ ಸೇರಲಿದೆ.