ಬೆಂಗಳೂರು; ಕೆಲ ಹೋಟೆಲ್ಗಳಲ್ಲಿ ಇನ್ನೂ ಏರಿಕೆಯಾಗಿಲ್ಲ ದರ!
ಬೆಂಗಳೂರು, ನವೆಂಬರ್ 09; ಕರ್ನಾಟಕದ ಹೋಟೆಲ್ಗಳಲ್ಲಿ ಊಟ, ತಿಂಡಿಗಳ ಬೆಲೆ ಏರಿಕೆ ಮಾಡಲು ರಾಜ್ಯ ಹೋಟೆಲ್ ಮಾಲೀಕರ ಸಂಘ ಒಪ್ಪಿಗೆ ನೀಡಿದೆ. ಆದರೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದರ ಏರಿಕೆ ಮಾಡದೇ ಹೋಟೆಲ್ ಮಾಲೀಕರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.
ನವೆಂಬರ್ 8ರ ಸೋಮವಾರದಿಂದಲೇ ಊಟ, ತಿಂಡಿಗಳ ಬೆಲೆಯಲ್ಲಿ ಏರಿಕೆ ಮಾಡಲು ಸಂಘ ಒಪ್ಪಿಗೆ ನೀಡಿದೆ. ಬೆಂಗಳೂರು ನಗರದಲ್ಲಿಯೇ ಹಲವಾರು ಹೋಟೆಲ್ಗಳು ಇನ್ನೂ ದರ ಏರಿಸಿ ಜನರ ಜೇಬಿಗೆ ಕತ್ತರಿ ಹಾಕಿಲ್ಲ. ದೀಪಾವಳಿಗೆ ಮುನ್ನ ಇದ್ದ ದರಗಳಿಗೆ ಊಟ, ತಿಂಡಿ ದೊರೆಯುತ್ತಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಸಿಲಿಂಡರ್ ಬೆಲೆಗಳು ಸತತವಾಗಿ ಏರುತ್ತಿರುವ ಕಾರಣ ರಾಜ್ಯಾದ್ಯಂತ ಹೋಟೆಲ್ಗಳಲ್ಲಿ ಶೇ 5 ರಿಂದ 10ರಷ್ಟು ದರ ಏರಿಕೆ ಮಾಡಲು ಅನುಮತಿ ನೀಡಲಾಗಿದೆ. ಸೋಮವಾರದಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘ ಹೇಳಿತ್ತು.
ಬೆಂಗಳೂರು ನಗರದ ಕೆಲವು ಹೋಟೆಲ್ಗಳಲ್ಲಿ ದರ ಏರಿಕೆಯಾಗಿದೆ. ಕೆಲವು ಹೋಟೆಲ್ ಮಾಲೀಕರು ಬುಧವಾರದಿಂದ ನೂತನ ದರ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಡಿಸೆಂಬರ್ 1ರಿಂದ ನೂತನ ದರ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಜನರ ಜೇಬಿಗೆ ಸದ್ಯಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿಲ್ಲ.

ಎಷ್ಟು ದರ ಏರಿಕೆಯಾಗಲಿದೆ?
ಅಗತ್ಯ ವಸ್ತುಗಳ ಬೆಲೆ ಏರಿಕೆ, ಸಿಲಿಂಡರ್ ಬೆಲೆ ಏರಿಕೆ, ಕಾರ್ಮಿಕರ ವೇತನ, ನಿರ್ವಹಣಾ ವೆಚ್ಚ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಶೇ 5 ರಿಂದ 10ರಷ್ಟು ಬೆಲೆ ಏರಿಕೆ ಮಾಡಲು ರಾಜ್ಯ ಹೋಟೆಲ್ ಮಾಲೀಕರ ಸಂಘ ಒಪ್ಪಿಗೆ ನೀಡಿದೆ. ಅಂತಿಮ ತೀರ್ಮಾನವನ್ನು ಆಯಾ ಹೋಟೆಲ್ ಮಾಲೀಕರ ಹೆಗಲಿಗೆ ಹಾಕಲಾಗಿದೆ.
ಹಾಲು, ಕಾಫಿ, ಟೀ 2 ರೂ. ಏರಿಕೆ. ದೋಸೆ, ಇಡ್ಲಿ, ವಡೆ, ಪೂರಿ, ರೈಸ್ ಬಾತ್, ಚಾಟ್ಸ್ 5 ರೂ. ಏರಿಕೆ. ದಕ್ಷಿಣ ಮತ್ತು ಉತ್ತರ ಭಾರತೀಯ ಊಟ 10 ರೂ. ಏರಿಕೆಯಾಗಲಿದೆ. ಆದರೆ ಎಲ್ಲಾ ಹೋಟೆಲ್ಗಳಲ್ಲಿಯೂ ಹೊಸ ದರ ಇನ್ನೂ ಜಾರಿಗೆ ಬಂದಿಲ್ಲ.

ಬೆಂಗಳೂರು ನಗರದಲ್ಲಿ ಜಾರಿ
ಬೆಂಗಳೂರು ನಗರದಲ್ಲಿ ಸೋಮವಾರದಿಂದ ಹಲವು ಹೋಟೆಲ್ಗಳಲ್ಲಿ ಶೇ 10ರಷ್ಟು ದರ ಏರಿಕೆಯಾಗಿದೆ. "ನಗರದ ಎಲ್ಲಾ ಹೋಟೆಲ್ಗಳಲ್ಲಿ ನೂತನ ದರ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ" ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ. ಸಿ. ರಾವ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕೆಲವು ಹೋಟೆಲ್ಗಳಲ್ಲಿ ಊಟ, ತಿಂಡಿಯ ದರವನ್ನು ಏರಿಕೆ ಮಾಡಲಾಗಿದೆ. ಆದರೆ ಕಾಫಿ, ಟೀ, ಹಾಲು ಮುಂತಾದವುಗಳ ದರ ಏರಿಕೆ ಮಾಡಿಲ್ಲ. ಒಂದೇ ಬಾರಿ ಜನರ ಮೇಲೆ ಬೆಲೆ ಏರಿಕೆ ಹೊರೆ ಹೇರದಿರಲು ಹೋಟೆಲ್ ಮಾಲೀಕರು ತೀರ್ಮಾನಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ದರ ಇಳಿಕೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಕೆ ಮಾಡಿವೆ. ಇದರಿಂದಾಗಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಇಳಿಕೆಯಾಗಿದೆ. ಎಲ್ಪಿಜಿ ಸಿಲಿಂಡರ್ ಬೆಲೆ ಸಹ ಇಳಿಕೆಯಾಗಬಹುದು ಎಂದು ಹೋಟೆಲ್ ಮಾಲೀಕರು ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ.
ಅಲ್ಲದೇ ಕೋವಿಡ್ ಸಂದರ್ಭ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲಿ ಹೋಟೆಲ್ಗಳಲ್ಲೂ ದರ ಏರಿಕೆ ಮಾಡಿದರೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯಲ್ಲಿ ಮಾಲೀಕರು ಇದ್ದು ಅದಕ್ಕಾಗಿ ದರ ಹೆಚ್ಚಳ ಮಾಡದೇ ಕಾದು ನೋಡುತ್ತಿದ್ದಾರೆ.
Recommended Video

ಹೋಟೆಲ್ ಮಾಲೀಕರಿಗೆ ಬಿಟ್ಟಿದ್ದು
ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ ಈ ಕುರಿತು ಮಾತನಾಡಿದ್ದು, "ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆ ಹೋಟೆಲ್ ತಿನಿಸುಗಳ ಬೆಲೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಆದರೆ ಹೆಚ್ಚಿಸುವುದು, ಬಿಡುವುದು ಹೋಟೆಲ್ ಮಾಲೀಕರಿಗೆ ಬಿಟ್ಟಿದ್ದು" ಎಂದು ಹೇಳಿದ್ದಾರೆ.
"ಸಂಘದ ವತಿಯಿಂದ ಸಲಹೆ ನೀಡಲಾಗಿದೆ. ಮಾಲೀಕರು ತಮ್ಮ ಅನುಕೂಲಕ್ಕೆ ತಕ್ಕಂತೆ ದರ ಏರಿಕೆ ಮಾಡಬಹುದು. ಏಕಕಾಲಕ್ಕೆ ಎಲ್ಲಾ ದರ ಏರಿಕೆ ಮಾಡಿದರೆ ಜನರಿಗೂ ತೊಂದರೆಯಾಗಲಿದೆ" ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ. ಸಿ. ರಾವ್ ತಿಳಿಸಿದ್ದಾರೆ.












Click it and Unblock the Notifications