ಬೆಂಗಳೂರು: ಕೆಂಪೇಗೌಡರ ಸೊಸೆ ಸಮಾಧಿ ಸ್ಥಳದಲ್ಲಿ ಮಣ್ಣು ಸಂಗ್ರಹ
ಬೆಂಗಳೂರು, ಅಕ್ಟೋಬರ್ 31: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ಉದ್ಘಾಟನೆಗೆ ಪೂರಕವಾಗಿ ರಾಜ್ಯದಲ್ಲಿ ಪವಿತ್ರ ಮೃತ್ತಿಕಾ ಸಂಗ್ರಹ ಅಭಿಯಾನ ನಡೆಯುತ್ತಿದೆ. ಇದರ ಭಾಗವಾಗಿ ಸೋಮವಾರ ಕೋರಮಂಗಲದ 8ನೇ ಬ್ಲಾಕಿನಲ್ಲಿರುವ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿ ಸಮಾಧಿಯ ಬಳಿ ಮಣ್ಣು ಸಂಗ್ರಹಿಸಲಾಯಿತು.
ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ನೇತೃತ್ವದಲ್ಲಿ ಮಣ್ಣು ಸಂಗ್ರಹ ನಡೆಯಿತು.
ಕೋರಮಂಗಲ ವ್ಯಾಪ್ತಿಯ ಈಜಿಪುರ ಬಸ್ ನಿಲ್ದಾಣದಿಂದ ಆರಂಭವಾದ ಮೆರವಣಿಗೆಯಲ್ಲಿ ನಿರೀಕ್ಷೆಗೂ ಮೀರಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬೆಂಬಲಿಗರು ಜಮಾಯಿಸಿದ್ದರು. ರಸ್ತೆ ಉದ್ದಕ್ಕೂ ಕೆಂಪೇಗೌಡರು ಮತ್ತು ಭಾರತ ಮಾತೆಗೆ ಜಯಘೋಷಗಳು ಮೊಳಗಿದವು.

ಅರ್ಥಪೂರ್ಣ ಸಮಾರಂಭದಲ್ಲಿ ಡೊಳ್ಳು ಕುಣಿತ ಮುಂತಾದ ಜಾನಪದ ನೃತ್ಯಗಳ ಮೆರುಗು ಚಿತ್ತಾಕರ್ಷಕವಾಗಿತ್ತು. ಈ ಸಂದರ್ಭದಲ್ಲಿ ಸ್ವತಃ ಸಚಿವರು ಎತ್ತಿನ ಗಾಡಿ ಹೊಡೆದರು. ಸಾಮಾನ್ಯರಂತೆ ಜನರ ನಡುವೆ ಅವರು ಬೆರೆತರು.
ಮೆರವಣಿಗೆ ಸಂದರ್ಭದಲ್ಲಿ ಬಿಟಿಎಂ ಬಡಾವಣೆಯಲ್ಲಿ ಇರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಜೊತೆಗೆ ಮಡಿವಾಳದ ಸೋಮೇಶ್ವರ ದೇವಸ್ಥಾನ, ಕೋರಮಂಗಲದ ಸಿದ್ಧಾರ್ಥ ಕಾಲೋನಿಯಲ್ಲಿ ಇರುವ ಗಣೇಶನ ದೇವಾಲಯ, ಈಜಿಪುರದ ಶ್ರೀರಾಮ ದೇವಸ್ಥಾನ, ದೊಡ್ಡಮ್ಮದೇವಿ ಮಂದಿರಗಳಿಗೆ ತೆರಳಿದ ಗಣ್ಯರು ಪೂಜೆ ನೆರವೇರಿಸಿದರು.
ಈ ವೇಳೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಮುಖಂಡರಾದ ಎನ್.ಆರ್.ರಮೇಶ್, ಶ್ರೀಧರ ರೆಡ್ಡಿ, ರವಿ, ಲೋಕನಾಥ ರೆಡ್ಡಿ, ಗೀತಾ ವಿವೇಕಾನಂದ ಮುಂತಾದವರು ಲಕ್ಷ್ಮಿದೇವಿ ಸಮಾಧಿಗೆ ಪೂಜೆ ಸಲ್ಲಿಸಿ, ಮೃತ್ತಿಕೆ ಸಂಗ್ರಹಿಸಿದರು. ಬಿಜೆಪಿ ಸಂಘಟನಾ ಕಾರ್ಯದರ್ಶಿ ದಶರಥ ಮತ್ತಿತರರು ಪಾಲ್ಗೊಂಡಿದ್ದರು.

ನ.11ಕ್ಕೆ ಪ್ರಗತಿ ಪ್ರತಿಮೆ ಉದ್ಘಾಟನೆ, ಮಣ್ಣು ಬಳಕೆ; ನವೆಂಬರ್ 11ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ.
ಈ ಪ್ರತಿಮಗೆ 'ಪ್ರಗತಿ ಪ್ರತಿಮೆ' ಎಂದು ಹೆಸರಿಡಲಾಗಿದೆ. ನಿಲ್ದಾಣದ ಆವರಣದಲ್ಲಿ ಥೀಮ್ ಪಾರ್ಕ್ ಹಾಗೂ ನಿಲ್ದಾಣದ ಟರ್ಮಿನಲ್ 2ಅನ್ನು ಸಹ ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಪ್ರತಿಮೆ ಲೋಕಾರ್ಪಣೆ ಸಂಬಂಧ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಅಭಿಯಾನದಲ್ಲಿ ಸಂಗ್ರಹವಾಗುವ ಮಣ್ಣನ್ನು ಪ್ರತಿಮೆ ಮತ್ತು ಥೀಮ್ ಪಾರ್ಕ್ ಸ್ಥಳದಲ್ಲಿ ಉದ್ಘಾಟಿಸಲು ಉದ್ದೇಶಿಸಲಾಗಿದೆ.












Click it and Unblock the Notifications