ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಗೃಹ ಸಚಿವರಿಗೆ ದೂರು
ಬೆಂಗಳೂರು, ಜು. 20: ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಮಂಗಳವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ. ಜಾತಿಗಳ ಬಗ್ಗೆ ಉಲ್ಲೇಖಿಸಿ ಶತ್ರುತ್ವ ಬೆಳೆಯುವಂತಹ ಹೇಳಿಕೆ ನೀಡಿರುವ ಇಂದ್ರಜಿತ್ ಲಂಕೇಶ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ದೂರಿನಲ್ಲಿ ಕೋರಿದ್ದಾರೆ.
ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ನಡುವಿನ ಚೆಕ್ ಶ್ಯೂರಿಟಿ ವಿವಾದದ ವಿಚಾರವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಧ್ಯ ಪ್ರವೇಶಿಸಿದ್ದರು. ನಟ ದರ್ಶನ್ ಹೋಟೆಲ್ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವಕನ ಮೇಲೆ ಹಲ್ಲೆ ಮಾಡಿದ್ದರು. ಸಿಸಿಟಿವಿ ನಿರ್ನಾಮ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಮೈಸೂರು ಪೋಲೀಸರು ನಿಷ್ಪ್ರಯೋಜಕರು, ಉಳ್ಳವರ ಪರ ಇದ್ದಾರೆ. ದಲಿತ ಯುವಕನ ಮೇಲೆ ಹಲ್ಲೆ ಮಾಡಿದರೂ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ತನಿಖೆ ಮಾಡಲಿಲ್ಲ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ಇದರಿಂದ ಕೆರಳಿದ್ದ ನಟ ದರ್ಶನ್ ಇಂದ್ರಜಿತ್ ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಇದು ಅಡಿಯೋ- ವಿಡಿಯೋ ಬಿಡುಗಡೆಯ ಮಾತಿನ ಸಮರಕ್ಕೂ ನಾಂದಿ ಹಾಡಿತ್ತು.
ಇಂದ್ರಜಿತ್ ಲಂಕೇಶ್ಗೆ ನಟ ದರ್ಶನ್ ಹಿಂಬಾಲಕರು ಬೆದರಿಕೆ ಹಾಕಿದ್ದಾರೆ. ಅಶ್ಲೀಲ ಸಂದೇಶಗಳನ್ನು ರವಾನಿಸಿ ಚಿತ್ರಹಿಂಸೆ ಕೊಡುತ್ತಿದ್ದಾರೆ. ಇವರ ವಿರುದ್ದ ಕ್ರಮ ಜರುಗಿಸಿ ಎಂದು ಕೋರಿ ಇಂದ್ರಜಿತ್ ಲಂಕೇಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಇತ್ತೀಚೆಗೆ ದೂರು ನೀಡಿದ್ದರು. ಇಂದ್ರಜಿತ್ ದೂರು ಬೆನ್ನಲ್ಲೇ ಟ್ರೋಲ್ ಮಾಡಿ ಅಪಹಾಸ್ಯ ಮಾಡಲಾಗಿತ್ತು. ಈ ವಿವಾದಕ್ಕೆ ಇದೀಗ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಎಂಟ್ರಿ ಕೊಟ್ಟಿದ್ದಾರೆ. ದಲಿತ ಸಮುದಾಯವನ್ನು ಉಲ್ಲೇಖಿಸಿ ಎರಡು ಸಮುದಾಯದ ನಡುವೆ ಶತೃತ್ವ ಹಾಗೂ ಗಲಭೆ ಉಂಟು ಮಾಡುವಂತಹ ಪರಿಸ್ಥಿತಿಗೆ ಕಾರಣವಾಗಿದ್ದಾರೆ. ಸುಳ್ಳು ಹೇಳಿಕೆ ನೀಡುವ ಮೂಲಕ ಇಂದ್ರಜಿತ್ ಲಂಕೇಶ್ ಅಪರಾಧ ಎಸಗಿದ್ದಾರೆ ಇವರ ವಿರುದ್ಧ ಸ್ವಯಂ ಪ್ರೇರಿತ ಕೇಸು ದಾಖಲಿಸಿ ತನಿಖೆ ನಡೆಸಬೇಕು ಎಂದ ಅಬ್ರಹಾಂ ಕೋರಿದ್ದಾರೆ.
ನಟ ದರ್ಶನ್ ನಿಂದ ಮೈಸೂರಿನ ಹೋಟೆಲ್ನಲ್ಲಿ ಹಲ್ಲೆಗೆ ಒಳಗಗಿದ್ದಾರೆ ಎನ್ನಲಾದ ಯುವಕ ದಲಿತ ಸಮದಾಯಕ್ಕೆ ಸೇರಿದವನು ಎಂದು ನಿರ್ದೇಶಕ ಇಂದ್ರಜಿತ್ ಹೇಳಿಕೆ ನೀಡಿದ್ದರು. ಇಂದ್ರಜಿತ್ ಹೇಳಿಕೆ ನಡುವೆ ಹಲ್ಲೆಗೆ ಒಳಗಾಗಿದ್ದ ಯುವಕ ನಾನು ದಲಿತ ಸಮುದಾಯಕ್ಕೆ ಸೇರಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಇದೇ ವಿಚಾರ ಮುಂದಿಟ್ಟುಕೊಂಡು ಸುಳ್ಳು ಹೇಳಿ ಸಮುದಾಯಗಳ ನಡುವೆ ಶತ್ರುತ್ವಕ್ಕೆ ಕಾರಣವಾದ ಆರೋಪ ಸಂಬಂಧ ಕೇಸು ದಾಖಲಿಸುವಂತೆ ಅಬ್ರಹಾಂ ಒತ್ತಾಯಿಸಿದ್ದಾರೆ.