Siddaramaiah: ಮುಡಾ ಪ್ರಕರಣದ ಹೈಕೋರ್ಟ್ ಆದೇಶಕ್ಕೆ ಜಿ.ಪರಮೇಶ್ವರ ರಿಯಾಕ್ಷನ್: Muda Case Update
ಬೆಂಗಳೂರು, ಫೆಬ್ರವರಿ 07: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತ ಪೊಲೀಸ್ ತನಿಖೆ ನಡೆಯುತ್ತಿದೆ. ಈ ತನಿಖೆ ವಿಚಾರವಾಗಿ ಹೈಕೋರ್ಟ್ಗೆ ಸಲ್ಲಿಕೆಯಾದ ಅರ್ಜಿ ವಜಾಗೊಳಿಸುವ ಮೂಲಕ ನ್ಯಾಯಪೀಠ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಕೊಟ್ಟಿದೆ. ಈ ಆದೇಶ ಕುರಿತು ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಅವರು ಪ್ರತಿಕ್ರಿಯಿಸಿದ್ದಾರೆ.
ಹೈಕೋರ್ಟ್ ತೀರ್ಪಿನ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ತನಿಖೆ ಮೇಲೆ ವಿಶ್ವಾಸವಿಟ್ಟು ಹೈಕೋರ್ಟ್ ಈ ಆದೇಶ ನೀಡದಂತೆ ಕಾಣುತ್ತಿದೆ. ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಸರಿಯಾಗಿದೆ ಎಂಬ ದೃಷ್ಟಿಯಲ್ಲಿ ಕೋರ್ಟ್ ಆದೇಶ ನೀಡಿದೆ ಎಂದು ಡಾ.ಜಿ. ಪರಮೇಶ್ವರ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಕುಟುಂಬಕ್ಕೆ ಸಂಬಂಧಿಸಿದ ಮುಡಾ ಪ್ರಕರಣವನ್ನು ಸಿಬಿಐಗೆ ನೀಡುವಂತಹ ಅಂಶಗಳು ಇರಲಿಲ್ಲ. ಲೋಕಾಯುಕ್ತ ಸಂಸ್ಥೆಯ ಮೇಲೆ ಹೈಕೋರ್ಟ್ ವಿಶ್ವಾಸವಿಟ್ಟು ಈ ರೀತಿಯ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದರು.
ಲೋಕಾಯುಕ್ತ ತನಿಖೆ ಸರಿಯಾಗಿ ನಡೆದಿದೆ ಎಂಬ ದೃಷ್ಟಿಯಲ್ಲಿ ಕೋರ್ಟ್ ಆದೇಶ ಬಂದಿದೆ. ಲೋಕಾಯುಕ್ತ ವರದಿ ಸರಿ ಇಲ್ಲ ಎಂದು ಹೇಳಲು ಆಗುವುದಿಲ್ಲ ಎನ್ನುವ ಅರ್ಥದಲ್ಲಿ ಕೋರ್ಟ್ ತೀರ್ಪು ನೀಡಿದೆ. ಇದು ಒಳ್ಳೆಯ ತೀರ್ಮಾನ. ಲೋಕಾಯುಕ್ತ ಸಂಸ್ಥೆಯ ತನಿಖೆಯ ಮೇಲೆ ನಂಬಿಕೆ ಇಡಬೇಕು. ಇಂತಹ ಸಂದರ್ಭದಲ್ಲಿ ಸಂಸ್ಥೆ ತನಿಖೆ ಮಾಡಿದ ಮೇಲೆ ವಿಶ್ವಾಸ ಬೇಕಲ್ಲವೇ ಎಂದರು.
ಸಿಎಂ ವಿರುದ್ಧ ದೂರು ನೀಡಿರುವ ದೂರುದಾರರು ಬೇಕಾದರೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಬೇಕಾದರೆ ಸುಪ್ರೀಂಕೋರ್ಟ್ಗೆ ಹೋಗಲಿ. ನಮ್ಮ ಕಾನೂನು ತಂಡ ಪರಿಶೀಲಿಸಿ ಅದಕ್ಕೆ ಉತ್ತರ ನೀಡುತ್ತಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳು ಸ್ವಾಭಾವಿಕವಾಗಿ ನ್ಯಾಯಯುತವಾಗಿ ಇರುತ್ತವೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಪ್ರಕರಣದ ಸಂಕ್ಷಿಪ್ತ ಹಿನ್ನೆಲೆ, ಇಂದಿನ ತೀರ್ಪು ಕುರಿತು..
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಪಾರ್ವತಿ ಹೆಸರಿನಲ್ಲಿ 14 ಸೈಟುಗಳನ್ನು ಪಡೆದಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಅಕ್ರಮವೆಸಗಿ ನಿವೇಶನ ಪಡೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಆರೋಪಿಸಿದ್ದರು. ರಾಜ್ಯಪಾಲರಿಗೆ ದೂರು ನೀಡಿದ್ದರು. ಅದು ಕೊನೆಗೆ ನ್ಯಾಯಾಲಯದ ಮೇಟ್ಟಿಲೇರಿ ಮೈಸೂರು ಲೋಕಾಯುಕ್ತ ಪೊಲೀಸರು ಸಿಎಂ ವಿರುದ್ಧ ಮುಡಾ ಅಕ್ರಮ ತನಿಖೆಗೆ ಆದೇಶಿಸಿತ್ತು.
ಈ ಲೋಕಾಯುಕ್ತ ಪೊಲೀಸರ ತನಿಖೆ ಪಾರದರ್ಶಕವಾಗಿ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ದೂರುದಾರರು ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ತೀರ್ಪು ಇಂದು ಶುಕ್ರವಾರ ಫೆಬ್ರವರಿ 07ರಂದು ನೀಡಿದ್ದು, ಅರ್ಜಿ ವಜಾಗೊಳಿಸಿದ ಹೈಕೋರ್ಟ್ ನ್ಯಾಯಪೀಠವು ಹಾಲಿ ತನಿಖೆ ಮುಂದುವರೆಸಲು ಗ್ನೀನ್ ಸೀಗ್ನಲ್ ನೀಡಿದೆ. ಇದು ಸಿಎಂ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ಹರ್ಷಕ್ಕೆ ಕಾರಣವಾಗಿದೆ.












Click it and Unblock the Notifications