ನವೀಕೃತ ಕಂಠೀರವ ಸ್ಟೇಡಿಯಂನಲ್ಲಿ ಸಿದ್ದು ಬಾಸ್ಕೆಟ್ ಬಾಲ್!
ಬೆಂಗಳೂರು, ಜುಲೈ 20: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು 9.7 ಕೋಟಿ ರೂ. ಗಳ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗುರುವಾರದಂದು ಕ್ರೀಡಾಂಗಣವನ್ನು ಪರಿವೀಕ್ಷಿಸಿದರು.
ಬಾಸ್ಕೆಟ್ ಬಾಲ್ ಎಸೆಯುವ ಮೂಲಕ ಮುಖ್ಯಮಂತ್ರಿಯವರು ಪರಿವೀಕ್ಷಣೆಗೆ ಚಾಲನೆ ನೀಡಲು ಯತ್ನಿಸಿದರು. ಆದರೆ, ಒಮ್ಮೆ ಕೂಡಾ ಚೆಂಡು ಬಾಸ್ಕೆಟ್ ಯೊಳಗೆ ಬೀಳಲೇ ಇಲ್ಲ.
ಇದೇ ಸಂದರ್ಭದಲ್ಲಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ಕ್ರೀಡಾಂಗಣದ ಸುವ್ಯವಸ್ಥೆಗೆ ಪ್ರಥಮಾದ್ಯತೆ ನೀಡಲಾಗುವುದು. ದುಸ್ಥಿತಿಯಲ್ಲಿದ್ದ ಕ್ರೀಡಾಂಗಣವನ್ನು ಇಲಾಖೆಯಿಂದ 5.00 ಕೋಟಿ ರೂ, ಬಿ.ಬಿ.ಎಂ.ಪಿ. ಇಂದ 3.5 ಕೋಟಿ ರೂ, ಬಿ.ಡಿ.ಎ ಯಿಂದ ಮರದ ನೆಲಹಾಸಿಗಾಗಿ 1.2 ಕೋಟಿಗಳು, ಒಟ್ಟು 9.7 ಕೋಟಿ ರೂ. ಗಳ ವೆಚ್ಚದಲ್ಲಿ ನವೀಕರಣಗೊಳಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಹೊರಾಂಗಣ ಕ್ರೀಡಾಂಗಣವನ್ನು ಸುಮಾರು 6.00 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಹೊದಿಕೆಗಳನ್ನು ಬದಲಿಸುವ ಮೂಲಕ ಇತರ ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ಇಲಾಖೆಯಲ್ಲಿ ಹಣ ಲಭ್ಯವಿದೆ ಎಂದು ತಿಳಿಸಿದರು.
ಹೊಸ ವ್ಯವಸ್ಥೆ: ಕ್ರೀಡಾಪಟುಗಳಿಗೆ ಬೇಕಾದ ವ್ಯವಸ್ಥೆಗಳು, ತಾಂತ್ರಿಕ ಸೌಲಭ್ಯಗಳು, ಕೋಚ್ಗಳಿಗೆ ಬೇಕಾದ ವ್ಯವಸ್ಥೆಗಳು, ಮಾಧ್ಯಮದವರಿಗೆ ಬೇಕಾಗುವ ಅನುಕೂಲಗಳನ್ನು ಕಲ್ಪಿಸಲಾಗಿದೆ. ಮರದ ನೆಲಹಾಸು, ಆಸನಗಳ ವ್ಯವಸ್ಥೆ, ಕೊಠಡಿಗಳ ನವೀಕರಣ, ಶೌಚಾಲಯ ಸುವ್ಯವಸ್ಥೆ ಹೀಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನವೀಕರಿಸಲಾಗಿದೆ. ಇತರ ಕಾರ್ಯಕ್ರಮಗಳಿಗೆ ಕ್ರೀಡಾಂಗಣವನ್ನು ನೀಡುವಾಗ ಸುಪ್ರೀಂಕೋರ್ಟಿನಆದೇಶ ಪಡೆದು ನೀಡಲಾಗುವುದು. ಇದರಿಂದ ಕ್ರೀಡಾಂಗಣದ ನಿರ್ವಹಣೆಗೆ ಆರ್ಥಿಕವಾಗಿ ನೆರವಾಗುವುದು ಎಂದರು.
ನವೀಕೃತಗೊಂಡಿರುವ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು ಇಂದು ಉದ್ಘಾಟಿಸಿದೆ pic.twitter.com/6bnn3z0hLs
— CM of Karnataka (@CMofKarnataka) July 20, 2017
ಅಂತಾರಾಷ್ಟ್ರೀಯ ಮಹಿಳಾ ಬಾಸ್ಕೇಟ್ ಬಾಲ್ (FIBA) ಜುಲೈ 23 ರಿಂದ ಪ್ರಾರಂಭವಾಗಲಿದ್ದು, ಏಷ್ಯ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸೇರಿದಂತೆ ಒಟ್ಟು 16 ದೇಶಗಳು ಭಾಗವಹಿಸಲಿವೆ.
ಇದೇ ಸಂದರ್ಭದಲ್ಲಿ ಹಾಜರಿದ್ದ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಜಾರ್ಜ್ ಅವರು ಮಾಧ್ಯಮದವರು ಮೆಟ್ರೋನಲ್ಲಿ ಹಿಂದಿ ಭಾಷೆ ಬಳಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮಾಧ್ಯತೆ ನೀಡಲಾಗುವುದು. ಆದರೆ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಯಾವುದೇ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.