ಪ್ರಧಾನಿ ಮೋದಿ ಭೇಟಿ ಮಾಡಲು ಸರ್ವಪಕ್ಷ ನಿಯೋಗ ಸಮಾಲೋಚನೆ
ಬೆಂಗಳೂರು, ನವೆಂಬರ್, 04 : ರಾಜ್ಯದಲ್ಲಿ ಉದ್ಬವಿಸಿರುವ ಬರ ಮತ್ತು ಕುಡಿಯುವ ನೀರಿನ ಕೊರತೆ ಹಿನ್ನೆಲೆ ಗಮನದಲ್ಲಿರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪುನಃ ಭೇಟಿ ಮಾಡಲು ಸರ್ವಪಕ್ಷ ನಿಯೋಗ ಸಮಾಲೋಚನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ನಗರದ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಅಕ್ಟೋಬರ್ 03ರ ಮಂಗಳವಾರ ನಡೆದ ಜನತಾದರ್ಶನ ಕಾರ್ಯಕ್ರಮ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು. ಮಾತುಕತೆ ಬಳಿಕ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಪ್ರಧಾನಿಯವರಿಂದ ಸಾಧ್ಯ ಎಂಬ ಭರವಸೆ ವ್ಯಕ್ತಪಡಿಸಿದರು.[ಕಳಸಾ-ಬಂಡೂರಿ : ನ್ಯಾಯಾಧೀಕರಣದ ಮುಂದೆ ಮಧ್ಯಂತರ ಅರ್ಜಿ]

ಬರದ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯದ ನಡುವೆ ಸಮರವಿಲ್ಲ
ಬರದ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಶೀತಲ ರಾಜಕೀಯ ಸಮರ ನಡೆಯುತ್ತಿದೆ ಎಂಬ ಆರೋಪ ತಳ್ಳಿ ಹಾಕಿದ ಸಿಎಂ ಅವರು, 'ರಾಜ್ಯದಲ್ಲಿ ಉದ್ಭವಿಸಿರುವ ತೀವ್ರ ಬರ ನಿಭಾಯಿಸಲು ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾನದಂಡಗಳಂತೆ 3850 ಕೋಟಿ ರೂ.ಹಣ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ರಾಜ್ಯದ ಮನವಿಗೆ ಸ್ವಂದಿಸಿ ಪ್ರಧಾನ ಮಂತ್ರಿ ಅವರು ಪರಿಸ್ಥಿತಿ ಅಧ್ಯಯನಕ್ಕಾಗಿ ರಾಜ್ಯಕ್ಕೆ ಕೇಂದ್ರ ತಂಡ ಕಳುಹಿಸಿದ್ದು, ಕೇಂದ್ರ ಸರ್ಕಾರಕ್ಕೆ ತನ್ನ ಅಧ್ಯಯನ ವರದಿ ಸಲ್ಲಿಸಿದೆ. ಸದ್ಯದಲ್ಲೇ ರಾಜ್ಯಕ್ಕೆ ಪರಿಹಾರ ಮೊತ್ತ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.[ಕರ್ನಾಟಕ-ಗೋವಾ ನಡುವೆ ಸಾರಿಗೆ ವ್ಯವಸ್ಥೆ ಸ್ಥಗಿತಗೊಳ್ಳುತ್ತಾ?]
ಬ್ರಾಂಡ್ ಬೆಂಗಳೂರು
ಬಿಬಿಎಂಪಿ ಚುನಾವಣಾ ಮುನ್ನ ನೀಡಿದ ಭರವಸೆ ಪ್ರಕಾರ 'ಬ್ರಾಂಡ್ ಬೆಂಗಳೂರು ರೂಪಿಸಲು ಸಿದ್ಧತೆ ನಡೆಸಲಾಗಿದೆ. ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ರಾಜ್ಯ ಸಂಪುಟ ದರ್ಜೆಯ ಸಚಿವರನ್ನು ನೇಮಕ ಮಾಡಲಾಗಿದೆ. ಕೆಲ ದಿನಗಳಲ್ಲಿಯೇ ಕಸ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ವಿದ್ಯುತ್ ಸಮಸ್ಯೆ
ರಾಜ್ಯದಲ್ಲಿ ಎದುರಾಗಿರುವ ವಿದ್ಯುತ್ ಸಮಸ್ಯೆ ಪರಿಹರಿಸಲು ಈಗಾಗಲೇ ಬೇರೆಡೆಯಿಂದ ವಿದ್ಯುತ್ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಮಾರ್ಚ್ ವೇಳೆಗೆ ರಾಜ್ಯದಲ್ಲಿ 2300 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಸದ್ಯದಲ್ಲೇ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದರು.
ಗೋಮಾಂಸ ತಿಂದಿಲ್ಲ
ಗೋಮಾಂಸ ತಿನ್ನಬೇಕು ಎಂದೆನಿಸಿದರೆ ತಿನ್ನುತ್ತೇನೆ ಎಂದು ಮಾತ್ರ ಹೇಳಿದ್ದೇನೆ. ಆಹಾರ ಅಭ್ಯಾಸಗಳ ಬಗ್ಗೆ ಮತ್ತೊಬ್ಬರು ಮಧ್ಯ ಪ್ರವೇಶಿಸಬಾರದು ಎಂಬ ಸದುದ್ದೇಶದ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದೇನೆಯೇ ಹೊರತು ನಾನು ಎಂದಿಗೂ ಗೋಮಾಂಸ ತಿಂದಿಲ್ಲ ಎಂದು ಸಿದ್ದರಾಮಯ್ಯ ಅವರು ಸ್ವಷ್ಟಪಡಿಸಿದರು.['ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ']
ಪ್ರತಿಪಕ್ಷ ಭಾರತೀಯ ಜನತಾಪಕ್ಷದವರು ಅನಗತ್ಯವಾಗಿ ಈ ವಿಷಯವನ್ನು ದೊಡ್ಡದು ಮಾಡಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಎಲ್ಲರೂ ಧರ್ಮ ಸಹಿಷ್ಣುತೆ ಪಾಲಿಸಬೇಕೆಂದರು.












Click it and Unblock the Notifications