ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ: ಕೆಪಿಸಿಸಿ ಅಧ್ಯಕ್ಷರಿಗೆ ಫುಲ್ ಜೈಕಾರ
ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ಚರ್ಚೆ ಅವರವರ ಅಭಿಮಾನಿಗಳನ್ನೂ ಎಷ್ಟು ಆವರಿಸಿಕೊಂಡಿದೆ ಎನ್ನುವುದಕ್ಕೆ ಕಾಂಗ್ರೆಸ್ಸಿನ ಸಭಾ ಕಾರ್ಯಕ್ರಮವೊಂದು ಸಾಕ್ಷಿಯಾಗಿದೆ.
ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗಮಿಸಿದ್ದರು. ಕಾಂಗ್ರೆಸ್ಸಿನಲ್ಲಿ ಭಾರೀ ಸದ್ದು ಮಾಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಫೈಟ್ ನಂತರ ಒಂದೇ ವೇದಿಕೆಯಲ್ಲಿ ಈ ಇಬ್ಬರು ನಾಯಕರಿದ್ದರು.
ಪಕ್ಷ ತೊರೆದು ಹೋಗಿ, ಬಿಜೆಪಿ ಸೇರಿ ಸಚಿವರಾಗಿರುವ ಕೆಲವರು ಮತ್ತೆ ಮಾತೃ ಪಕ್ಷಕ್ಕೆ ಬರಲಿದ್ದಾರೆ ಎನ್ನುವ ವಿಷಯದಲ್ಲೂ ಪಕ್ಷದಲ್ಲಿ ಒಮ್ಮತದ ಅಭಿಪ್ರಾಯವಿಲ್ಲ ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ, ಮುಂದಿನ ಸಿಎಂ ಯಾರು ಎನ್ನುವ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎನ್ನುವ ಸ್ಪಷ್ಟ ಎರಡು ಬಣವಾಗಿರುವುದು ಗೊತ್ತಿರುವ ವಿಚಾರ. ಈಗ ಅಭಿಮಾನಿಗಳಲ್ಲೂ ಅದನ್ನು ನೋಡಬಹುದಾಗಿದೆ.

ಸಿದ್ದರಾಮಯ್ಯನವರು ಭಾಷಣ ಆರಂಭಿಸುತ್ತಿದ್ದಂತೆಯೇ ಡಿಕೆ..ಡಿಕೆ.. ಎಂದು ಘೋಷಣೆ
ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಭಾಗವಹಿಸಿದ್ದರು, ಅಭಿಮಾನಿಗಳೂ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸಿದ್ದರಾಮಯ್ಯನವರು ಭಾಷಣ ಆರಂಭಿಸುತ್ತಿದ್ದಂತೆಯೇ, ಡಿಕೆಶಿ ಅಭಿಮಾನಿಗಳು ಡಿಕೆ..ಡಿಕೆ.. ಎಂದು ಘೋಷಣೆ ಕೂಗಲು ಆರಂಭಿಸಿದರು.

ಯೂತ್ ಕಾಂಗ್ರೆಸ್ ಫೈಟ್ ಬಳಿಕ ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ
ಅಭಿಮಾನಿಗಳು ಘೋಷಣೆ ಕೂಗುತ್ತಿದ್ದರೂ, ಸಿದ್ದರಾಮಯ್ಯ ಅದರ ಮಧ್ಯದಲ್ಲೇ ಭಾಷಣ ಮಾಡುತ್ತಿದ್ದರು. ಒಂದು ಹಂತಕ್ಕೆ ಡಿಕೆ..ಡಿಕೆ ಘೋಷಣೆ ಜಾಸ್ತಿಯಾದಾಗ, ಸ್ವಲ್ಪಹೊತ್ತು ಭಾಷಣ ನಿಲ್ಲಿಸಿದರು. ಅಷ್ಟೊತ್ತಿಗೆ ಡಿ.ಕೆ.ಶಿವಕುಮಾರ್ ವೇದಿಕೆಗೆ ಆಗಮಿಸಿದರು.

ಸ್ಥಳೀಯ ಮುಖಂಡರು ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಸೂಚನೆ
ಇಬ್ಬರು ನಾಯಕರು ಒಬ್ಬರಿಗೊಬ್ಬರು ನಮಸ್ಕರಿಸಿಕೊಂಡ ನಂತರ ಸಿದ್ದರಾಮಯ್ಯ ಭಾಷಣ ಮುಂದುವರಿಸಿದರು. ಆದರೆ, ಡಿಕೆಶಿ ಪರ ಘೋಷಣೆ ಹೊಮ್ಮುತ್ತಲೇ ಇತ್ತು. ಆ ವೇಳೆ, ಸ್ಥಳೀಯ ಮುಖಂಡರು ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಸೂಚಿಸಿದ ನಂತರ, ಸಿದ್ದರಾಮಯ್ಯನವರು ನಿರಾಂತಕವಾಗಿ ಭಾಷಣವನ್ನು ಮುಗಿಸಿದರು.
Recommended Video

ಜಮೀರ್ ಅಹ್ಮದ್ ಖಾನ್ ಹುಟ್ಟುಹಾಕಿದ ವಿಷಯ
ಒಟ್ಟಿನಲ್ಲಿ ಈ ಕಾರ್ಯಕ್ರಮ, ಅಭಿಮಾನಿಗಳಲ್ಲೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಬಣ ರಾಜಕೀಯದಂತೆ ಇದ್ದಂತಿತ್ತು. ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಜಮೀರ್ ಅಹ್ಮದ್ ಖಾನ್ ಹುಟ್ಟುಹಾಕಿದ ವಿಷಯ, ಅಭಿಮಾನಿಗಳೂ ಕವಲು ದಾರಿಯಲ್ಲಿ ಹೋಗುವಂತೆ ಮಾಡಿತಾ ಎನ್ನುವ ಪ್ರಶ್ನೆ ಉದ್ಭವಗೊಂಡಿದೆ.












Click it and Unblock the Notifications