ಅಧಿಕಾರಿಗಳಿಗೆ ಸಿದ್ದರಾಮಯ್ಯ ಖಡಕ್ ಆದೇಶ
ಬೆಂಗಳೂರು, ನವೆಂಬರ್ 07 : ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿದ್ಧರಾಮಯ್ಯ ಅವರು ಆಡಳಿತದ ಕಾರ್ಯಗಳನ್ನು ಲಗುಬಗೆಯಿಂದ ಮುಗಿಸಲು ಪಣತೊಟ್ಟಂತಿದೆ. ನವೆಂಬರ್ 07 ರ ಮಂಗಳವಾರ ವಿಧಾನಸೌದದಲ್ಲಿ ಕರೆದಿದ್ದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಗಳ ಸಭೆಯಲ್ಲಿ ಆದಷ್ಟು ತ್ವರಿತವಾಗಿ ಸರ್ಕಾರದ ಕಾರ್ಯಗಳನ್ನು ಪೂರೈಸುವಂತೆ ಖಡಕ್ ಆದೇಶ ನೀಡಿದ್ದಾರೆ.
ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಬಹುದು. ಜತೆಗೆ ಪ್ರಸಕ್ತ ಸಾಲಿನ ಹಣಕಾಸು ವರ್ಷ ಪೂರ್ಣಗೊಳ್ಳಲು ಇನ್ನೂ ಐದು ತಿಂಗಳಿದೆ. ಆದ್ದರಿಂದ ಎಲ್ಲ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಅವರು ಅಧಿಕಾರಿಗೆ ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮನೆ ಮತ್ತು ನಿವೇಶನಗಳ ಹಂಚಿಕೆ, ಇಂದಿರಾ ಕ್ಯಾಂಟೀನ್ ನಿರ್ಮಾಣ, ಸರ್ಕಾರಿ ಭೂಮಿ ಒತ್ತುವರಿ ತೆರವು, ಪಡಿತರ ಚೀಟಿ ಹಂಚಿಕೆ, ಭೂ ಮಂಜೂರಾತಿ ಹಾಗೂ ಹಕ್ಕುಪತ್ರಗಳ ವಿತರಣೆ ಕಡೆ ಹೆಚ್ಚಿನ ಗಮನ ವಹಿಸುವಂತೆ ಸಿದ್ಧರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಚುನಾವಣೆಗೆ ಮುಂಚೆ ಆದಷ್ಟು ತ್ವರಿತವಾಗಿ ಸರ್ಕಾರದ ಯೋಜನೆಗಳನ್ನು ಪೂರೈಸಿ, ಸರ್ಕಾರದ ಸಾಧನಾ ಪಟ್ಟಿಗೆ ಇನ್ನಷ್ಟು ಅಂಕಿ-ಅಂಶಗಳನ್ನು ಸೇರಿಸಿಕೊಳ್ಳುವ ತರಾತುರಿಯಲ್ಲಿ ಸಿದ್ಧರಾಮಯ್ಯ ಅವರು ಅಧಿಕಾರಿಗಳಿಗೆ ಹಲವು ಖಡಕ್ ಎಚ್ಚರಿಗೆಳನ್ನು, ಹೊಸ ಗುರಿಗಳನ್ನು ನೀಡಿದರು.

5 ವರ್ಷದಲ್ಲಿ 15 ಲಕ್ಷ ಮನೆ ನಿರ್ಮಾಣ ಗುರಿ
ವಸತಿ ಯೋಜನಯು ಫಲಾನುಭವಿಗಳಿಗೆ ತಲುಪುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಿ.ಎಂ, ಐದು ವರ್ಷದಲ್ಲಿ 15 ಲಕ್ಷ ಮನೆ ನಿರ್ಮಾಣದ ಗುರಿ ಸರ್ಕಾರ ಹೊಂದಿತ್ತು ಆದರೆ ವಸತಿ ಹಂಚಿಕೆಯಾಗದೆ ಗುರಿ ತಲುಪಲು ಸಾದ್ಯವಿಲ್ಲ ಹಾಗಾಗಿ ಹೆಚ್ಚು ಯೋಜನೆ ತ್ವರಿತವಾಗಿ ಫಲಾನುಭವಿಗಳಿಗೆ ತಲುಪುವಂತೆ ಮಾಡಿ ಎಂದರು.

ಬೆಂಗಳೂರು ಜಿಲ್ಲಾಧಿಕಾರಿ ಮಾದರಿ
ಬೆಂಗಳೂರು ನಗರದಲ್ಲಿ ಒತ್ತುವರಿ ತೆರವು ಕಾರ್ಯ ಉತ್ತಮವಾಗಿ ನಡೆದಿದೆ ಇಲ್ಲಿನ ಜಿಲ್ಲಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಸಿದ್ದಾರೆ. ಇದೇ ಮಾದರಿಯಲ್ಲಿ ಉಳಿದ ಜಿಲ್ಲೆಯ ಜಿಲ್ಲಾಧಿಕಾರಿಗಳು ಅನುಸರಿಸಬೇಕು ಎಂದು ಅವರು ಹೇಳಿದರು.

ಸರ್ಕಾರದ ಆಸ್ತಿ ರಕ್ಷಣೆ ಮಾಡಿ
ಸರ್ಕಾರದ ಆಸ್ತಿ ರಕ್ಷಣೆ ಮಾಡುವುದು ಕಂದಾಯ ಇಲಾಖೆ ಅಧಿಕಾರಿಗಳ ಜವಾಬ್ದಾರಿಗಳಲ್ಲಿ ಒಂದು. ಜಿಲ್ಲಾಧಿಕಾರಿಗಳು ಆ ಕಾರ್ಯ ಮಾಡದೇ ಇದ್ದರೆ ಕರ್ತವ್ಯಲೋಪವಾಗುತ್ತದೆ ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಕುಡಿಯುವ ನೀರು, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಬಗ್ಗೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಜಾಗೃತೆ ವಹಿಸಬೇಕು ಎಂದರು.

247 ಇಂದಿರಾ ಕ್ಯಾಂಟೀನ್ ನಿರ್ಮಾಣದ ಗುರಿ
ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಜನವರಿ 1 ರಿಂದ ಇಂದಿರಾ ಕ್ಯಾಂಟೀನ್ ಆರಂಭಿಸಲು ನಿರ್ಧರಿಸುವುದಾಗಿ ಮುಖ್ಯಮಂತ್ರಿಗಳು ಸಭೆಯಲ್ಲಿ ಪುನರ್ ಉಚ್ಚರಿಸಿದರು. ಒಟ್ಟು 247 ಕ್ಯಾಂಟೀನ್ ಗಳನ್ನು ನಿರ್ಮಿಸಲು ಉದ್ದೇಶಿಸಿದ್ದು.'ಒಂದು ಲಕ್ಷ ಜನಸಂಖ್ಯೆಗೆ ಒಂದು ಕ್ಯಾಂಟೀನ್ ಎಂದು ತೀರ್ಮಾನ ಮಾಡಲಾಗಿದೆ, ಜನಸಂಖ್ಯೆ ಕಡಿಮೆ ಇದ್ದರೂ ಪರವಾಗಿಲ್ಲ. ಕ್ಯಾಂಟೀನ್ ಆರಂಭಿಸಿ' ಎಂದರು.

ಜನ ನಿಬಿಡ ಪ್ರದೇಶದಲ್ಲಿ ಕ್ಯಾಂಟೀನ್
ಆಸ್ಪತ್ರೆ, ಬಸ್ ನಿಲ್ದಾಣ, ಕೃಷಿ ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಆವರಣ ಸೇರಿದಂತೆ ಜನಸಂದಣಿಯ ಪ್ರದೇಶಗಳಲ್ಲಿ ಕ್ಯಾಂಟೀನ್ ಆರಂಭಿಸಲು ಜಾಗ ಗುರುತಿಸುವಂತೆ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು. ಒಂದು ವೇಳೆ ಸರ್ಕಾರಿ ಜಾಗ ಸಿಗದಿದ್ದರೆ ಸಂಚಾರಿ ಕ್ಯಾಂಟೀನ್ಗಳನ್ನು ತೆರೆಯಿರಿ ಎಂದು ಆದೇಶಿಸಿದರು. ಅದೂ ಸಾಧ್ಯವಾಗದಿದ್ದರೆ ಬಾಡಿಗೆಗೆ ಮನೆಗಳನ್ನು ಪಡೆದುಕೊಳ್ಳಿ ಎನ್ನುವ ಮೂಲಕ ಇಂದಿರಾ ಕ್ಯಾಂಟೀನ್ ಅನ್ನು ಶಥಾಯಗತಾಯ ನಿರ್ಮಿಸಲೇ ಬೇಕೆಂಬುದನ್ನು ಒತ್ತಿ ಹೇಳಿದರು.












Click it and Unblock the Notifications