ಪಕ್ಷಕ್ಕೆ ದ್ರೋಹ ಬಗೆದು ಪಕ್ಷಾಂತರ ಮಾಡುವವರಿಗೆ ತಕ್ಕ ಪಾಠ: ಸಿದ್ದು ಗುಡುಗು
ಬೆಂಗಳೂರು, ನವೆಂಬರ್ 05: ಆಮಿಷಗಳಿಗೆ ಒಳಗಾಗಿ ಆಯ್ಕೆಯಾದ ಪಕ್ಷಕ್ಕೆ ದ್ರೋಹ ಬಗೆದು ಪಕ್ಷಾಂತರ ಮಾಡುವವರಿಗೆ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪು ತಕ್ಕ ಪಾಠವಾಗಲಿದೆ. ತೀರ್ಪು ಕಾಂಗ್ರೆಸ್ ಪರವಾಗಿ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾಲು ಸಾಲು ಟ್ವೀಟ್ ಗಳ ಮೂಲಕ ಅನರ್ಹ ಶಾಸಕರಿಗೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಪ ಅವರಿಗೆ ಬಿಸಿ ಮುಟ್ಟಿಸಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಎರಡು ಬಾರಿಯೂ ಜನಾದೇಶದಿಂದ ಮುಖ್ಯಮಂತ್ರಿಯಾದವರಲ್ಲ ಎಂದು ಟೀಕಿಸಿದರು.
ಸರ್ಕಾರ ಬೀಳಿಸುತ್ತೇನೆಂದು ನಾನು ಹೇಳಿಲ್ಲ: ಸಿದ್ದರಾಮಯ್ಯ
ಬಿಜೆಪಿ ಮೂರು ತಿಂಗಳ ಆಡಳಿತವನ್ನು ನೋಡಿದ ಜನ ತಮ್ಮ ನಿರ್ಧಾರವನ್ನು ಪುನರ್ ವಿಮರ್ಶೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ತೀರ್ಪು ನಮ್ಮ ಪರ
"ಶಾಸಕರ ಅನರ್ಹತೆ ಪ್ರಕರಣದ ತೀರ್ಪು ನಮ್ಮ ಪರವಾಗಿ ಬರಲಿದ್ದು, ಆಮಿಷಗಳಿಗೆ ಒಳಗಾಗಿ ಆಯ್ಕೆಯಾದ ಪಕ್ಷಕ್ಕೆ ದ್ರೋಹ ಬಗೆದು ಪಕ್ಷಾಂತರ ಮಾಡುವವರಿಗೆ ಇದೊಂದು ತಕ್ಕ ಪಾಠವಾಗಲಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗೌರವಿಸದವರಿಗೆ ರಾಜಕೀಯದಲ್ಲಿ ಮುಂದುವರೆಯುವ ಯಾವ ನೈತಿಕತೆಯೂ ಇರುವುದಿಲ್ಲ ಎಂಬುದು ನನ್ನ ಭಾವನೆ" -ಸಿದ್ದರಾಮಯ್ಯ
ಪಕ್ಷಾಂತರವೆಂಬ ರಾಜಕೀಯ ಪಿಡುಗು
"ಈ ಹಿಂದೆ ಶಾಸಕರು ಮತ್ತು ಸಂಸದರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು ಸಾಮಾನ್ಯವಾಗಿತ್ತು. ಈ ಪಕ್ಷಾಂತರವೆಂಬ ರಾಜಕೀಯ ಪಿಡುಗನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಸಂವಿಧಾನಕ್ಕೆ ತಿದ್ದುಪಡಿ ತಂದು, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದರು" -ಸಿದ್ದರಾಮಯ್ಯ
ಇದ್ದ ಮೂರು ಜನರಲ್ಲಿ ಕದ್ದವರಾರು?: ಬಿಎಸ್ವೈಗೆ ಸಿದ್ದರಾಮಯ್ಯ ಟಾಂಗ್
ಬಿ ಎಸ್ ವೈ ಜನಾದೇಶದಿಂದ ಮುಖ್ಯಮಂತ್ರಿಯಾದವರಲ್ಲ
"2008 ಮತ್ತು ಈಗ ಎರಡು ಬಾರಿ ಕೂಡ ಬಿ ಎಸ್ ಯಡಿಯೂರಪ್ಪ ಅವರು ಜನಾದೇಶದಿಂದ ಮುಖ್ಯಮಂತ್ರಿಯಾದವರಲ್ಲ. ಆಪರೇಷನ್ ಕಮಲದ ಮೂಲಕ ವಾಮಮಾರ್ಗದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈ ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣಕ್ಕೆ ಕೇಂದ್ರ ಸರ್ಕಾರದ ಬೆಂಬಲವೂ ಇದೆ ಎಂದು ಮುಖ್ಯಮಂತ್ರಿಗಳೇ ಕೋರ್ ಕಮಿಟಿ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ" -ಸಿದ್ದರಾಮಯ್ಯ
ಬಿಎಸ್ವೈ ಆಡಿಯೋ ಸಾಕ್ಷಿ: ಅನರ್ಹ ಶಾಸಕರಿಗೆ ತೀವ್ರ ಸಂಕಷ್ಟ
ಮತ್ತೆ ಕಾಂಗ್ರೆಸ್ ಎಂಬುದು ಜನರ ಅಭಿಪ್ರಾಯ
"ಕಳೆದ ಕೆಲವು ದಿನಗಳ ನನ್ನ ಪ್ರವಾಸದಲ್ಲಿ ನಾನು ಗಮನಿಸಿದ ಬಹುಮುಖ್ಯ ಅಂಶವೆಂದರೆ, ಬಿಜೆಪಿ ಮೂರು ತಿಂಗಳ ಆಡಳಿತವನ್ನು ನೋಡಿದ ಜನ ತಮ್ಮ ನಿರ್ಧಾರವನ್ನು ಪುನರ್ ವಿಮರ್ಶೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಬೇಕು ಎಂಬುದು ಬಹುಪಾಲು ಜನರ ಅಭಿಪ್ರಾಯವಾಗಿದೆ" -ಸಿದ್ದರಾಮಯ್ಯ
ಕಾಂಗ್ರೆಸ್ ಎಂದಿನಂತೆ ಬಲಿಷ್ಠ
"ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಮತಗಳ ಪ್ರಮಾಣ 36.34%, ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ 1.80% ಹೆಚ್ಚು ಮತ ಗಳಿಸಿದೆ. ಹೀಗಾಗಿ ನಮ್ಮ ಪಕ್ಷದ ಯಾವೊಬ್ಬ ಕಾರ್ಯಕರ್ತನು ಧೃತಿಗೆಡಬೇಕಾದ ಅಗತ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಎಂದಿನಂತೆ ಬಲಿಷ್ಠವಾಗಿಯೇ ಇದೆ" -ಸಿದ್ದರಾಮಯ್ಯ