ರಾಜ್ಯದಲ್ಲಿ ಮತ್ತೆ ಆಕ್ಸಿಜನ್ ಕೊರತೆ?; ಡಿಸಿಗಳಿಗೆ ತುರ್ತು ಸಂದೇಶ
ಬೆಂಗಳೂರು, ಮೇ 24: ರಾಜ್ಯದಲ್ಲಿ ಮತ್ತೆ ಆಕ್ಸಿಜನ್ ಕೊರತೆಯ ಭೀತಿ ಎದುರಾಗುತ್ತಿದ್ದು, ಎರಡು ದಿನಗಳ ಕಾಲ ಶೇಕಡಾ 20ರಷ್ಟು ಆಮ್ಲಜನಕ ಕೊರತೆಯಾಗಲಿದೆ ಎಂದು ತಿಳಿದುಬಂದಿದೆ.
ಕೊರೊನಾ ವೈರಸ್ನಿಂದ ಬಳಲುತ್ತಿರುವ ಹಲವರು ಆಕ್ಸಿಜನ್ ಕೊರತೆಯಿಂದ ದಿನಾಲೂ ಸಾಯುತ್ತಿರುವ ನಡುವೆ ಮತ್ತೊಂದು ಆಘಾತ ಕೇಳಿಬಂದಿದೆ. ಕರ್ನಾಟಕದಲ್ಲಿರುವ ಎರಡು ಆಕ್ಸಿಜನ್ ಉತ್ಪಾದನಾ ಕಂಪನಿಗಳು ಎರಡು ದಿನಗಳ ಕಾಲ ಆಕ್ಸಿಜನ್ ಉತ್ಪಾದನೆ ಮಾಡುತ್ತಿಲ್ಲ.
ಕೊರೊನಾ ಲಸಿಕೆ ವಿಷಯದಲ್ಲಿ ಭಾರತ ಮಾಡಿದ ಎಡವಟ್ಟೇನು?; ಸೋಂಕು ತಜ್ಞರ ಉತ್ತರ
ಹೀಗಾಗಿ ರಾಜ್ಯದಲ್ಲಿ ಎರಡು ದಿನಗಳ ಕಾಲ ಆಕ್ಸಿಜನ್ ಕೊರತೆ ಇರಲಿದೆ ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಹೆಚ್ಚುವರಿ ಔಷಧ ನಿಯಂತ್ರಕ ಅಮರೇಶ್ ತುಂಬಗಿ ಸಂದೇಶ ರವಾನೆ ಮಾಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ಔಷಧ ನಿಯಂತ್ರಕರಿಗೆ ಸಂದೇಶ ರವಾನೆಯಾಗಿದ್ದು, ಜೊತೆಗೆ ರಾಜ್ಯ ಆಮ್ಲಜನಕ ಪೂರೈಕೆಯ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಂದಲೂ ಎಲ್ಲಾ ಡಿಸಿಗಳಿಗೆ ಸಂದೇಶ ಕಳಿಸಲಾಗಿದೆ.
ಕರ್ನಾಟಕದಲ್ಲಿರು ಪ್ರಾಕ್ಸೈರ್ ಇಂಡಿಯಾ ಮತ್ತು ಏರ್ ವಾಟರ್ ಇಂಡಿಯಾ ಎಂಬ ಎರಡು ಕಂಪನಿಗಳಿಂದ ಆಕ್ಸಿಜನ್ ಉತ್ಪಾದನೆಯಲ್ಲಿ ವ್ಯತ್ಯಯ ಉಂಟಾಗಲಿರುವ ಕಾರಣದಿಂದ ರಾಜ್ಯದಲ್ಲಿ ಆಮ್ಲಜನಕ ಕೊರತೆಯಾಗಲಿದೆ.
ಇದರ ನಡುವೆ ದ್ರವೀಕೃತ ಆಮ್ಲಜನಕ ಉತ್ಪಾದನೆಯಲ್ಲೂ ಸಮಸ್ಯೆ ಇದ್ದು, ಹೀಗಾಗಿ ಎರಡು ದಿನ ರಾಜ್ಯಕ್ಕೆ ಶೇ.20ರಷ್ಟು ಆಮ್ಲಜನಕ ಪೂರೈಕೆ ಕೊರತೆಯಾಗಲಿದೆ ಎಂದು ತಿಳಿದುಬಂದಿದೆ. ಸದ್ಯ ಬಳ್ಳಾರಿಯ ಜಿಂದಾಲ್ನಿಂದ ಅತಿ ಹೆಚ್ಚು ಆಕ್ಸಿಜನ್ ಪೂರೈಕೆಯಾಗುತ್ತಿದೆ.
Recommended Video