ಜೂನ್ಗೂ ಮುನ್ನ ಶಿವಾನಂದ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಮುಗಿಯಲ್ಲ
ಬೆಂಗಳೂರು, ಫೆಬ್ರವರಿ 12: ಶಿವಾನಂದ ವೃತ್ತದಲ್ಲಿ ಆರಂಭವಾಗಿರುವ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಜೂನ್ ಒಳಗೆ ಮುಗಿಯುವುದು ಅನುಮಾನವಾಗಿದೆ.
ಸ್ಟೀಲ್ ಬ್ರಿಡ್ಜ್ ಕಾಮಗಾರಿಯ ಭಾಗವಾಗಿ ಕಾಂಕ್ರೀಟ್ ಕಂಬದ ಮೇಲೆ ಕಬ್ಬಿಣದ ಬೀಮ್ಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಆದರೆ ಮಳೆಗಾಲಕ್ಕೂ ಮುನ್ನ ಕಾಮಗಾರಿ ಮುಗಿಯುವ ಸಾಧ್ಯತೆ ಕಡಿಮೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಾಲುಕ್ಯ ವೃತ್ತದ ವಿವಾದಿತ ಉಕ್ಕಿನ ಸೇತುವೆ ಯೋಜನೆಗೆ ಮರುಜೀವ
ಅನೇಕ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಕೆಲವು ದಿನಗಳಿಂದ ಬೀಮ್ ಅಳವಡಿಸುವ ಕಾಮಗಾರಿ ಭರದಿಂದ ಸಾಗಿದೆ. ಇದು ಉಳಿದ ಕಂಬಗಳ ಮೇಲೆ ಬೀಮ್ ಅಳವಡಿಸುವ ಕಾಮಗಾರಿಗೆ ಬಹಳಷ್ಟು ಸಮಯ ಹಿಡಿಯಲಿದೆ. ಇದಾದ ನಂತರ ಎಲಿಮೆಂಟ್ ಕೂಡಿಸಿ ಬ್ರಿಡ್ಜ್ ರೂಪ ನೀಡಲಾಗುತ್ತದೆ.
ಯೋಜನೆ ಜಾರಿಯಾಗುತ್ತಿರುವ ಸ್ಥಳದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಕಾಮಗಾರಿಯನ್ನು ವೇಗವಾಗಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ, ದೊಡ್ಡ ಕ್ರೇನ್ ಮೂಲಕ ಬೀಮ್ ಸಾಗಣೆ ವೇಳೆ ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಬೇಕಿದೆ ಎಂದು ಬಿಬಿಎಂಪಿ ಎಂಜಿನಿಯರ್ ಒಬ್ಬರು ಮಾಹಿತಿ ನೀಡಿದ್ದಾರೆ.
ಮರ ಕಡಿಯಲು ಪರಿಸರ ವಾದಿಗಳ ಆಕ್ಷೇಪ, ಕೋರ್ಟ್ ತಗಾದೆ, ಭೂಸ್ವಾಧೀನ ಕಾರಣದಿಂದ ಕಾಮಗಾರಿ ಆರಂಭಿಸಲು ಅವಕಾಶ ಆಗಿರಲಿಲ್ಲ ಕೆಲಸ ಪ್ರಗತಿಯಲ್ಲಿದೆ ಆದರೂ ನಿರೀಕ್ಷಿತ ಮಟ್ಟವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.