ಬೆಂಗಳೂರು: ಮಳೆಗೆ ಮನೆಯ ಗೋಡೆ ಕುಸಿದು ವ್ಯಕ್ತಿ ಸಾವು
ಬೆಂಗಳೂರು, ಜೂನ್ 2: ನಗರದಲ್ಲಿ ಕಳೆದ ಎರಡು ತಿಂಗಳಿನಿಂದ ನಿರಂತರ ಮಳೆಯಾಗುತ್ತಿದೆ. ಬೇಸಿಗೆಯನ್ನೇ ಮರೆಮಾಚುವಷ್ಟು ಮಳೆಯಾಗಿದೆ. ಇದೀಗ ಮುಂಗಾರು ಆರಂಭವಾಗಿದ್ದು ಶುಕ್ರವಾರ ಎರಡನೇ ಬಾರಿ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಿದೆ.
ರಾಜಧಾನಿಯಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಬಸವನಗುಡಿಯಲ್ಲಿ ಮನೆ ಗೋಡೆ ಕುಸಿದು ವ್ಯಕ್ತಿ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿ ಮೂಲದ ಮಹಾಂತೇಶ್ ಎಂದು ಗುರುತಿಸಲಾಗಿದೆ.
ವಿಡಿಯೋ : ಇಂದೋರ್ ಕಟ್ಟಡ ಕುಸಿತ, 10 ಮಂದಿ ದುರ್ಮರಣ
ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಮಹಾಂತೇಶ್ ಬಸವನಗುಡಿಯ ಐಟಿಐ ಲೇಔಟ್ನ ಶೆಡ್ವೊಂದರಲ್ಲಿ ನೆಲೆಸಿದ್ದರು. ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಮಹಾಂತೇಶ್ ತೊಡಗಿಸಿಕೊಂಡಿದ್ದರು. ಶುಕ್ರವಾರ ರಾತ್ರಿ ಮನೆಯಲ್ಲಿದ್ದಾಗ ಭಾರಿ ಮಳೆಯಿಂದಾಗಿ ಗೋಡೆ ಕುಸಿದು ಮಹಂತೇಶ್ ಅವರ ಮೇಲೆ ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಅದೇ ಕುಟುಂಬದ ಶರಣಪ್ಪ, ಶೋಭಾ, ಪಾರ್ವತಿ ಎಂಬುವವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.