ಮಕ್ಕಳ ಸುರಕ್ಷತೆಗೆ ಸರ್ಕಾರದ ಮಾರ್ಗಸೂಚಿ
ಬೆಂಗಳೂರು, ಜು.21: ಕರ್ನಾಟಕದ ಮಕ್ಕಳ ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಈಗ ದೇಶದೆಲ್ಲೆಡೆ ಸುದ್ದಿಯಾಗುತ್ತಿದ್ದಂತೆ ರಾಜ್ಯ ಪೊಲೀಸ್ ಇಲಾಖೆ ಇದೀಗ ನಿಧಾನವಾಗಿ ಎಚ್ಚೆತ್ತುಕೊಂಡಿದೆ. ಆರಂಭದ ಹಂತವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಗೃಹ ಇಲಾಖೆ ಮಾರ್ಗ ಸೂಚಿಯನ್ನು ಸಿದ್ದಪಡಿಸಿದ್ದು, ಕರಡು ಪ್ರತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯ ಪೊಲೀಸ್ ಇಲಾಖೆಗೆ ರವಾನಿಸಿದೆ.[ವಿಬ್ ಗಯಾರ್ ಪ್ರಕರಣ : ಆರೋಪಿ ಮುಸ್ತಫಾ ಬಂಧನ]
ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಬೇಕು. ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಜವಾಬ್ದಾರಿ ಆ ಶಾಲೆಗಳಿಗೆ ಸೇರಿದ್ದು, ಅಲ್ಲಿ ನಡೆಯುವ ಅಪರಾಧ ಚಟುವಟಿಕೆಗಳಿಗೆ ಶಾಲಾ ಮುಖ್ಯಸ್ಥರು ಹೊಣೆಯಾಗುತ್ತಾರೆ. ಹೀಗಾಗಿ ಶಿಕ್ಷಣ ಹಾಗೂ ಸುರಕ್ಷತೆ ಶಾಲೆಯ ಜವಾಬ್ದಾರಿ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಮುಂದಿನ ಪುಟದಲ್ಲಿ ಗೃಹ ಇಲಾಖೆ ಸಿದ್ದಪಡಿಸಿದ ಮಾರ್ಗಸೂಚಿಯಲ್ಲಿರುವ ಅಂಶಗಳನ್ನು ನೀಡಲಾಗಿದೆ.[ಪೋಷಕರ ಕೂಗಿಗೆ, ಹಾರ್ಲೆ ಗುಡುಗಿಗೆ ಏಳುವುದೇ ಸರ್ಕಾರ?]

ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯ
*ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಬೇಕು,
*ಶಾಲೆಗೆ ಹೊರಗಿನವರ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು.

ಪೊಲೀಸ್ ಠಾಣೆಗೆ ಮಾಹಿತಿ ನೀಡಿ:
* ಸಮೀಪದ ಪೊಲೀಸ್ ಠಾಣೆಗೆ ಶಾಲಾ ಸಿಬ್ಬಂದಿಗಳ ವಿವರ ಶಾಲೆಯ ಮುಖ್ಯಸ್ಥರು ಸಲ್ಲಿಸಬೇಕು.
*ತಿಂಗಳಿಗೊಮ್ಮೆ ಶಾಲೆಗಳಿಗೆ ಪೊಲೀಸರು ಕಡ್ಡಾಯವಾಗಿ ಭೇಟಿನೀಡಬೇಕು.
*ಶಾಲೆಗಳಲ್ಲಿ ಸ್ಥಳೀಯ ಪೊಲೀಸ್ ಠಾಣೆಗಳ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಬೇಕು.

ಶಾಲಾ ಮುಖ್ಯಸ್ಥರೇ ಹೊಣೆ:
*ಮಕ್ಕಳ ಮೇಲೆ ಯಾವುದೇ ಬಗೆಯ ದೌರ್ಜನ್ಯಗಳಾದರೆ ಅದರ ಹೊಣೆಯನ್ನು ಶಾಲಾ ಮುಖ್ಯಸ್ಥರೇ ಹೊರಬೇಕು.
*ಶಾಲೆಗಳಲ್ಲಿ ಮಕ್ಕಳಿಗೆ ಗಂಭೀರ ಶಿಕ್ಷೆ ನೀಡಬಾರದು.

ಮಕ್ಕಳ ಹಕ್ಕು ಸುರಕ್ಷತೆಗೆ ಕ್ರಮ
*ಮಕ್ಕಳ ಹಕ್ಕುಗಳು ಹಾಗೂ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ಲೋಪವಾಗಬಾರದು.
* ಹೊಸದಾಗಿ ಉದ್ಯೋಗಿಯನ್ನು ನೇಮಕ ಮಾಡುವಾಗ ಉದ್ಯೋಗಿಯ ಪೂರ್ವಾಪರ ಮಾಹಿತಿಯನ್ನು ಪರಿಶೀಲಿಸಿ ನೇಮಕ ಮಾಡಿಕೊಳ್ಳಬೇಕು.

ಮಕ್ಕಳ ಕ್ಲಬ್ ಸ್ಥಾಪಿಸುವುದು:
*ಈ ಎಲ್ಲ ಮಾರ್ಗಸೂಚಿಗಳು ಅನಾಥಾಲಯಗಳಿಗೂ ಅನ್ವಯಿಸುತ್ತದೆ.
*ಖಾಸಗಿ, ಅನುದಾನಿತ, ಸರಕಾರಿ ಶಾಲೆಗಳಲ್ಲಿ ಮಕ್ಕಳ ಕ್ಲಬ್ ಸ್ಥಾಪಿಸುವುದು.

ಮಾರ್ಗಸೂಚಿ ಸೋಮವಾರ ಬಿಡುಗಡೆ:
ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಾಲೆ ಅನುಸರಿಸಬೇಕಾದ ಭದ್ರತಾ ಕ್ರಮಗಳ ಕುರಿತು ಮಾರ್ಗಸೂಚಿ ಈಗಾಗಲೇ ಸಿದ್ಧಗೊಂಡಿದ್ದು, ಸೋಮವಾರ ಅಧಿಕೃತವಾಗಿ ಬೆಂಗಳೂರು ನಗರದ ಎಲ್ಲ ಡಿಸಿಪಿಗಳಿಗೆ ಇದನ್ನು ಬಿಡುಗಡೆ ಮಾಡಲಾಗುವುದು. ಇದೇ ರೀತಿ ರಾಜ್ಯದ ಎಲ್ಲೆಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇಲ್ಲವೇ ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲೆ ಮುಖ್ಯಸ್ಥರ ಸಭೆ ನಡೆಸಿ ಮಾರ್ಗಸೂಚಿಯ ಬಗ್ಗೆ ವಿವರಣೆ ನೀಡಲಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಔರಾದ್ಕರ್ ಹೇಳಿದ್ದಾರೆ.

ಗೂಂಡಾ ಕಾಯ್ದೆಯಡಿ ಶಿಕ್ಷೆ:
"ರಾಜ್ಯದಲ್ಲಿ ಇನ್ನು ಮುಂದೆ ಅತ್ಯಾಚಾರ, ದೌರ್ಜನ್ಯ ಎಸಗಿದ ವ್ಯಕ್ತಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷಿಸಲಾಗುವುದು.ಈ ವಿಚಾರವನ್ನು ರಾಜಕೀಯ ಮಾಡುವುದು ಸರಿಯಲ್ಲ. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ನೀಡಲು ಸರಕಾರ ಹಿಂದೆ ಮುಂದೆ ನೋಡುವುದಿಲ್ಲ. ಪೊಲೀಸರು ಕಟ್ಟು ನಿಟ್ಟಿನ ಕ್ರಮ ಜರುಗಿಸುತ್ತಾರೆ"
ಸಿದ್ದರಾಮಯ್ಯ, ಮುಖ್ಯಮಂತ್ರಿ












Click it and Unblock the Notifications