ಬೆಂಗಳೂರಲ್ಲೇ ಕನ್ನಡಿಗನನ್ನು ಹಿಗ್ಗಾಮುಗ್ಗ ಥಳಿಸಿದ ಪರಭಾಷಿಕ; ಯಾಕೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸದ್ಯ ಪರಭಾಷಿಕರು ಹೆಚ್ಚಾಗಿ ವಲಸೆ ಬಂದು ನೆಲೆಸುತ್ತಿದ್ದಾರೆ. ಅವರು ಎಷ್ಟು ವರ್ಷ ಬೆಂಗಳೂರಿನಲ್ಲಿದ್ದರೂ ಕನ್ನಡವನ್ನು ಕಲಿಯುವುದೇ ಇಲ್ಲ ಎನ್ನುವುದು ನಮ್ಮೆಲ್ಲರ ವಾದವೂ ಹೌದು. ಆದರೆ, ಸ್ವಂತ ನೆಲದಲ್ಲೇ ಪರಭಾಷಿಕರಿಂದ ಏಟು ತಿನ್ನುವ ಪರಿಸ್ಥಿತಿಯೂ ಕನ್ನಡಿಗರಿಗೆ ಬಂದೊದಗಿರುವುದು ವಿಪರ್ಯಾಸವೇ ಸರಿ.
ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಕೆಲ ಪರಭಾಷಿಕರ ವರ್ತನೆ ಮಿತಿ ಮೀರುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲಸಕ್ಕಾಗಿ ಕರುನಾಡಿಗೆ ಬಂದಿರುವ ಪರಭಾಷಿಕರು ಇಲ್ಲಿನ ಕನ್ನಡಿಗರ ಮೇಲೆಯೇ ದರ್ಪ ತೋರುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇಂದು ಕೂಡ ಇಂತದ್ದೇ ಘಟನೆಯೊಂದು ಮರುಕಳಿಸಿದ್ದು, ಕನ್ನಡಿಗನ ಮೇಲೆ ಪರಭಾಷಿಕನೊಬ್ಬ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ಘಟನೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎನ್ನಲಾಗಿದೆ.

ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಏರ್ಪೋರ್ಟ್ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿರುವ ಪರಭಾಷಿಕನೊಬ್ಬ ಕನ್ನಡಿಗ ಕ್ಯಾಬ್ ಚಾಲಕನ ಜೊತೆ ಯಾವುದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವಾಗಲೇ ಆತ ಚಾಲಕನ ಮೇಲೆ ದರ್ಪದಿಂದ ಮನಬಂದಂತೆ ಥಳಿಸಿದ್ದಾನೆ. ಬಳಿಕ ಕ್ಯಾಬ್ ಚಾಲಕ ಕೂಡ ಕೈಕೈ ಮಿಲಾಯಿಸಿದ್ದಾನೆ. ಕೊನೆಗೆ ಸೆಕ್ಯೂರಿಟಿ ಕಾಲಿನಿಂದ ಒದ್ದಿರುವ ಘಟನೆಯೂ ನಡೆದಿದೆ. ಈ ವೇಳೆ ಅಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ.
ಬೆಂಗಳೂರು ಏರ್ಪೋರ್ಟ್ ನ ಘಟನೆ.!
— ಚೇತನ್ ಸೂರ್ಯ ಎಸ್ - Chethan Surya S (@Chethan_Surya_S) August 31, 2024
ಇಲ್ಲಿ ತಪ್ಪು ಯಾರದ್ದೇ ಇರಲಿ
ಹಲ್ಲೆ ಮಾಡೋ ಅಧಿಕಾರ
ಈ ಹಿಂದಿವಾಲನಿಗೆ ಕೊಟ್ಟೋರ್ಯಾರು.?
ಎಲ್ಲಿಂದಲೋ ಅನ್ನ ಹುಡುಕಿ ಬಂದ
ಇವನು ಕನ್ನಡ ಕಲಿತು ಕನ್ನಡದಲ್ಲೇ ಚಾಲಕನ ಮಾತು ಅರ್ಥ ಮಾಡಿಕೊಂಡಿದ್ದರೆ
ಇದು ನಡೀತಿತ್ತ?@BLRAirport
ಇದಕ್ಕೆ ಕನ್ನಡಿಗರಿಗೆ ಉದ್ಯೋಗ ನೀಡಿ ಅನ್ನೋದು.pic.twitter.com/h0e1Hd5vRq
ಆದರೆ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಕನ್ನಡಿಗರೆಲ್ಲ ಕೆಂಡಕಾರುವಂತೆ ಮಾಡಿದೆ. ಹಲವರು ಆಕ್ರೋಶದಿಂದ ಕಾಮೆಂಟ್ ಮಾಡುತ್ತಿದ್ದಾರೆ. ಕ್ಯಾಬ್ ಚಾಲಕನ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ. ʼಇಲ್ಲಿ ತಪ್ಪು ಯಾರದ್ದೇ ಇರಲಿ, ಹಲ್ಲೆ ಮಾಡೋ ಅಧಿಕಾರ
ಈ ಹಿಂದಿವಾಲನಿಗೆ ಕೊಟ್ಟೋರು ಯಾರು?ʼ ಎಂದು ಗುಡುಗಿದ್ದಾರೆ.

ʼಎಲ್ಲಿಂದಲೋ ಅನ್ನ ಹುಡುಕಿ ಬಂದ ಇವನು ಕನ್ನಡ ಕಲಿತು ಕನ್ನಡದಲ್ಲೇ ಚಾಲಕನ ಮಾತು ಅರ್ಥ ಮಾಡಿಕೊಂಡಿದ್ದರೆ ಇದು ನಡೀತಿತ್ತ? ಇದಕ್ಕೆ ಕನ್ನಡಿಗರಿಗೆ ಉದ್ಯೋಗ ನೀಡಿ ಅನ್ನೋದುʼ ಎಂದು ಕಾಮೆಂಟ್ ಮಾಡಿದ್ದಾರೆ. ʼಸರ್ಕಾರಕ್ಕೆ ಬುದ್ಧಿ ಇಲ್ಲ, ನಮ್ ಕಡೆ ಜನ ಇಲ್ವಾ? ಏರ್ಪೋರ್ಟ್ನಲ್ಲಿ ಕೆಲಸ ಮಾಡೋಕೆ ಹಿಂದಿಯವರೇ ಬೇಕಾ? ಎಂದು ಪ್ರಶ್ನಿಸಿದ್ದಾರೆ. ಈ ರೀತಿ ದರ್ಪ ತೋರಿರುವ ಆ ಹಿಂದಿವಾಲನನ್ನು ಪೊಲೀಸರು ಕೂಡಲೇ ಬಂಧಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಟ್ವಿಟರ್ನಲ್ಲಿ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ.
ಇತ್ತೀಚೆಗೆ ಭಾಷಾ ವಿಚಾರವಾಗಿ ಕನ್ನಡಿಗರು ಹಾಗೂ ಪರಭಾಷಿಕರ ನಡುವೆ ಜಗಳ ನಡೆಯುವ ಘಟನೆಗಳು ಮರುಕಳಿಸುತ್ತಲೇ ಇವೆ. ಅನ್ಯಭಾಷಿಕರಿಗೆ ಕರ್ನಾಟಕದಲ್ಲಿ ಸಿಗುವ ಸ್ವಾತಂತ್ರ್ಯ ಬೇರೆಲ್ಲೂ ಇಲ್ಲ. ದಿನದಿಂದ ದಿನಕ್ಕೆ ಇಂತಹ ಘಟನೆಗಳು ಹೆಚ್ಚಾಗುತ್ತಲೇ ಇದ್ದು, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವ ಸರ್ಕಾರ ಬಂದರೂ ಕನ್ನಡಕ್ಕೆ, ಕನ್ನಡಿಗರಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ ಎಂದು ಸಂಕಟ ಹೊರಹಾಕಿದ್ದಾರೆ. ಸ್ವಂತ ನೆಲದಲ್ಲೇ ಕನ್ನಡಿಗರಿಗೆ ರಕ್ಷಣೆ ಇಲ್ಲದಿದ್ದರೆ ಸರ್ಕಾರ ಇದ್ದೂ ಏನು ಪ್ರಯೋಜನ? ಎಂದು ಹಿಡಿಶಾಪ ಹಾಕುತ್ತಿದ್ದಾರೆ.












Click it and Unblock the Notifications