Breaking: ಬೆಂಗಳೂರು ಮಳೆ ಅವಾಂತರದ ಬಗ್ಗೆ ನಟಿ ರಮ್ಯಾ ಟ್ವೀಟ್!
ಬೆಂಗಳೂರು, ಸೆಪ್ಟೆಂಬರ್ 05: ಬೆಂಗಳೂರಿನಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಯಿಂದಾಗಿ ಅವಾಂತರಗಳೇ ಸೃಷ್ಟಿಯಾಗಿವೆ. ಬಿಬಿಎಂಪಿ ಮತ್ತು ಸರ್ಕಾರದ ಕಾಮಗಾರಿಗಳೇ ಈ ಎಲ್ಲಾ ಅನಾಹುತಗಳಿಗೆ ಕಾರಣ ಎಂದು ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಮಳೆ ಅನಾಹುತಗಳ ಕುರಿತು ಟ್ವೀಟ್ ಮಾಡಿರುವ ನಟಿ ರಮ್ಯಾ, "ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಸರ್ಕಾರಕ್ಕೆ ನನ್ನ ಮತ," ಎಂದು ಟ್ವೀಟ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮಳೆ: ಕಳಪೆ ಮೂಲಸೌಕರ್ಯ- ಒಂದೇ ದಿನದಲ್ಲಿ 225 ಕೋಟಿ ರೂ. ನಷ್ಟ
ಬಿಬಿಎಂಪಿ ಮತ್ತು ಸರ್ಕಾರಗಳು ಅನುಮತಿ ನೀಡಿರುವ ಕೆಲವು ಕಾಮಗಾರಿಗಳು ಹಾಗೂ ಅಕ್ರಮ ಒತ್ತುವರಿಯಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ. ಸ್ಮಾರ್ಟ್ ಸಿಟಿ ಬೆಂಗಳೂರಿನ ಚಿತ್ರಣವನ್ನೇ ಮಳೆರಾಯ ಬದಲಿಸಿ ಬಿಟ್ಟಿದ್ದಾನೆ. ಸಿಲಿಕಾನ್ ಸಿಟಿಯಲ್ಲಿ 51 ವರ್ಷಗಳಲ್ಲೇ ಮೊದಲ ಬಾರಿಗೆ ದಾಖಲೆ ಮಳೆಯಾಗಿದೆ. 709 ಮಿ.ಮೀ ಮಳೆ ಆಗಿದ್ದು, ಇದುವರೆಗೂ ಗರಿಷ್ಠ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಐಟಿ ಕಂಪನಿಗಳಿಗೆ 225 ಕೋಟಿ ರೂಪಾಯಿ ನಷ್ಟ:
ಬೆಂಗಳೂರು ಹೊರ ವರ್ತುಲ ರಸ್ತೆ ಪ್ರದೇಶದಲ್ಲಿರುವ ಐಟಿ ಮತ್ತು ಬ್ಯಾಂಕಿಂಗ್ ಕಂಪನಿಗಳ ಸಂಘಟನೆಯಾದ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ಒಆರ್ಆರ್ಸಿಎ)ವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ತಮ್ಮ ಸದಸ್ಯ ಕಂಪನಿಗಳು ಮತ್ತು ಸಂಸ್ಥೆಗಳು ತೀವ್ರ ಮಳೆ ಮತ್ತು ಜಲಾವೃತದಿಂದಾಗಿ ಒಂದೇ ದಿನದಲ್ಲಿ 225 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ ಎಂದು ಹೇಳಿದರು.
ಹೊರ ವರ್ತುಲ ರಸ್ತೆಯ ಪ್ರದೇಶದಲ್ಲಿ ಕಾಮಗಾರಿ ಸ್ಥಗಿತ:
ಸಿಲಿಕಾನ್ ಸಿಟಿಯಲ್ಲಿ ಮೂರು ದಿನಗಳಿಂದ ಮಳೆಯ ಪರಿಸ್ಥಿತಿ ಮುಂದುವರಿದಿದೆ. ಹೊರ ವರ್ತುಲ ರಸ್ತೆಯ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಸರಾಗಗೊಳಿಸುವ ಉದ್ದೇಶದಿಂದ ಹಲವಾರು ನಿರ್ಮಾಣ ಕಾಮಗಾರಿಗಳೂ ಸ್ಥಗಿತಗೊಂಡಿವೆ ಎಂದು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ ಆರೋಪಿಸಿದೆ. ಇನ್ನೂ ಹಲವಾರು ಯೋಜನೆಗಳಿಗೆ ಹೊಂದಿಕೊಂಡಿರುವ ರಸ್ತೆಗಳ ನಿರ್ಮಾಣ, ಹೆಚ್ಚಿನ ಸಾಂದ್ರತೆಯ ಕಾರಿಡಾರ್ ರಸ್ತೆಗಳು ಮತ್ತು ಮೆಟ್ರೋ ನಿರ್ಮಾಣದ ಕಾರಣ ಟ್ರಾಫಿಕ್ ಪರಿಸ್ಥಿತಿಯನ್ನು ಸುಧಾರಿಸಲು ಕೆಲವು ವರ್ಷಗಳ ಹಿಂದೆ ಹಸಿರು ನಿಶಾನೆ ತೋರಿಸಲಾಗಿತ್ತು. ಆದರೆ ಇದು ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಸುಧಾರಣೆಗೆ ಸ್ಪಷ್ಟ ಮಾರ್ಗಸೂಚಿಯನ್ನು ತರುವಂತೆ ಸಂಘ ಒತ್ತಾಯಿಸಿದೆ.
Very smart city!! 🤯😭My vote is for the govt that will clamp down on illegal construction 👀 #Nammabengaluru pic.twitter.com/2uiEGkFTXv
— Divya Spandana/Ramya (@divyaspandana) September 5, 2022