ಒಂದೇ ತಿಂಗಳಲ್ಲಿ ಬಿರುಕು ಬಿಟ್ಟಿರುವ ‘ರ್ಯಾಪಿಡ್ ರಸ್ತೆ’ ವಿಮರ್ಶೆ ವರದಿಗೆ ₹23 ಲಕ್ಷ- ಇಲ್ಲಿದೆ ಮಾಹಿತಿ
ಬೆಂಗಳೂರು, ಜನವರಿ 13: ಬೆಂಗಳೂರಿನ 'ರ್ಯಾಪಿಡ್ ರಸ್ತೆ' ವಿಮರ್ಶೆಯ ವರದಿ ನೀಡಲು ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್ಸಿ) ಬಿಬಿಎಂಪಿ ಒಪ್ಪಿಸಿದೆ. ಈ ವರದಿ ನೀಡಲು ಬರೋಬ್ಬರಿ ₹23 ಲಕ್ಷವನ್ನು ನೀಡಲು ಬಿಬಿಎಂಪಿ ಮುಂದಾಗಿದೆ.
ಬೆಂಗಳೂರಿನ ಹಳೇ ಮದ್ರಾಸ್ ರಸ್ತೆಯಲ್ಲಿ 337.5 ಮೀಟರ್ ರಸ್ತೆಯನ್ನು ಕಳೆದ ತಿಂಗಳು ನಿರ್ಮಿಸಲಾಗಿತ್ತು. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು.
'ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್ಮೆಂಟ್' ತಂತ್ರಜ್ಞಾನ ಬಳಸಿ ರ್ಯಾಪಿಡ್ ರಸ್ತೆಯನ್ನು ಸಿದ್ಧಪಡಿಸಲಾಗಿತ್ತು. ಇದು ಭಾರತದ ಮೊದಲ ರ್ಯಾಪಿಡ್ ರಸ್ತೆ ಎಂದು ಬಿಬಿಎಂಪಿ ಹೇಳಿಕೊಂಡಿತ್ತು. ಆದರೆ, ಉದ್ಘಾಟನೆಯಾದ ಒಂದೇ ತಿಂಗಳಿಗೆ ರ್ಯಾಪಿಡ್ ರಸ್ತೆಯಲ್ಲಿ ಹಲವು ಬಿರುಕುಗಳು ಕಾಣಿಸಿಕೊಂಡಿವೆ.
ನಿರ್ಮಾಣಗೊಂಡ ಒಂದೇ ತಿಂಗಳಲ್ಲಿ ಕಾಂಕ್ರೀಟ್ ಬ್ಲಾಕ್ಗಳು ಬಿರುಕು ಬಿಟ್ಟಿರುವುದನ್ನು ಕಂಡು ಬೆಂಗಳೂರಿನ ಜನರು ನಿರಾಸೆ ವ್ಯಕ್ತಪಡಿಸಿದ್ದರು.
ಇಂತಹ ರಸ್ತೆಯ ಪರಿಶೀಲಿಸಿ ವರದಿ ನೀಡುವಂತೆ ಐಐಎಸ್ಸಿ ಬಿಬಿಎಂಪಿ ಕೇಳಿಕೊಂಡಿದೆ.
ರ್ಯಾಪಿಡ್ ರಸ್ತೆಯನ್ನು ಉದ್ಘಾಟನೆ ಮಾಡಿದ ಬಳಿಕ ವರದಿಗಾರರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬೆಂಗಳೂರು ನಗರದ ಇತರ ರಸ್ತೆಗಳನ್ನು ನಿರ್ಮಿಸಲು ಆರ್ಆರ್ಟಿಯನ್ನು ಬಳಸುವುದ ಬಗ್ಗೆ ಮುಂದೆ ಯೋಚಿಸಲಾಗುವುದು ಎಂದು ತಿಳಿಸಿದ್ದರು.
ಈಗ ಉದ್ಘಾಟನೆಯಾಗಿರುವ ಹಳೆ ಮದ್ರಾಸ್ ರಸ್ತೆಯ ರ್ಯಾಪಿಡ್ ರಸ್ತೆ ಎಷ್ಟು ದಿನಗಳ ಕಾಲ ಬಾಳಿಕೆ ಬರುತ್ತದೆ ಎಂಬುದರ ಮೇಲೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಕಳೆದ ತಿಂಗಳು ಅಂದರೆ ಡಿಸೆಂಬರ್ 8ರಂದು ಹಳೇ ಮದ್ರಾಸ್ ರೋಡಿನಲ್ಲಿ ರ್ಯಾಪಿಡ್ ರಸ್ತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು.
ರ್ಯಾಪಿಡ್ ರಸ್ತೆಗೆ ವಸ್ತುಗಳು ಹಾಗೂ ತಂತ್ರಜ್ಞಾನವನ್ನು ಅಲ್ಟ್ರಾಟೆಕ್ ಸಿಮೆಂಟ್ನ ಆರ್ ಎಂಡ್ ಡಿ ವಿಭಾಗ ಒದಗಿಸಿದೆ. ಇದು ಸಿಎಸ್ಆರ್ ಉಪಕ್ರಮವಾಗಿದ್ದು, ಪ್ರಾಯೋಗಿಕ ಯೋಜನೆಯಾಗಿದೆ ಎಂದು ತಿಳಿದುಬಂದಿದೆ.
'ಹಳೇ ಮದ್ರಾಸ್ ರಸ್ತೆಯಲ್ಲಿ ರ್ಯಾಪಿಡ್ ರೋಡ್ ನಿರ್ಮಾಣವನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ಯೋಜನೆಯಲ್ಲಿ ರ್ಯಾಪಿಡ್ ರೋಡ್ ತಂತ್ರಜ್ಞಾನ ಉತ್ತಮ ಎಂದು ಸಾಬೀತಾದರೆ, ಈ ತಂತ್ರಜ್ಞಾನವನ್ನು ಇತರ ರಸ್ತೆಗಳಿಗೂ ವಿಸ್ತರಿಸಲಾಗುವುದು. ಈ ರಸ್ತೆಯು ಬಾಳಿಕೆ ಬರದೇ ಹೋದರೆ, ಈ ತಂತ್ರಜ್ಞಾನವನ್ನು ಮುಂದಿನ ಯೋಜನೆಗಳಲ್ಲಿ ಬಳಸಲಾಗುವುದಿಲ್ಲ' ಎಂದು ಸಿ.ವಿ.ರಾಮನ್ ನಗರ ಶಾಸಕ ಎಸ್.ರಘು ತಿಳಿಸಿದ್ದರು.
ನಿರ್ಮಾಣಗೊಂಡು ಒಂದೇ ವಾರದಲ್ಲಿ ರ್ಯಾಪಿಡ್ ರೋಡ್ನಲ್ಲಿ ಹಲವು ಬಿರುಕುಗಳು ಕಾಣಿಸಿಕೊಂಡಿರುವದಕ್ಕೆ ವಾಹನ ಸವಾರರು ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.