ಮಂಗಳಮುಖಿಯರ ಸಭೆಯಲ್ಲಿ ಕಣ್ಣೀರು ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ!
ಬೆಂಗಳೂರು, ಅ. 28: ನಾನು ನಿಮ್ಮ ಕಷ್ಟ ಕೇಳಿ, ಅದಕ್ಕೆ ಪರಿಹಾರ ಕಂಡುಕೊಳ್ಳಲು ನಿಷ್ಠೆಯಿಂದ ಪ್ರಯತ್ನ ಮಾಡುವ ಭರವಸೆ ನೀಡುತ್ತೇನೆ. ನಾನು ಕೇವಲ ಭರವಸೆ ನೀಡುವುದಿಲ್ಲ, ನುಡಿದಂತೆ ನಡೆಯುತ್ತೇನೆ. ನಿಮ್ಮ ಗೌರವವನ್ನು ರಕ್ಷಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್ ಅವರು ಹೇಳಿದರು. ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಅವರ ಜತೆಗೂಡಿ ಕುಸುಮಾ ಅವರು ಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಪ್ರಚಾರ ನಡೆಸಿದರು.
ನಿಮ್ಮ ಕಷ್ಟ ಸುಖ ಹಂಚಿಕೊಳ್ಳಲು ಒಂದು ಅವಕಾಶ ನೀಡಿ ಅಂತಾ ನಿಮ್ಮ ಮುಂದೆ ಬಂದು ನಿಂತಿದ್ದೀನಿ. ನಿಮ್ಮ ನಿರೀಕ್ಷೆಯನ್ನು ನಾನು ಹುಸಿ ಮಾಡುವುದಿಲ್ಲ. ನಿಮ್ಮ ಮನೆ ಮಗಳಿಗೆ ನೀವು ಹೇಗೆ ಪ್ರೋತ್ಸಾಹ ನೀಡುತ್ತೀರೋ ಅದೇ ರೀತಿ ನನಗೂ ಪ್ರೋತ್ಸಾಹಿಸಿ, ಆಶೀರ್ವಾದ ಮಾಡಿ. ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಯೋಜನೆ, ಕನಸುಗಳನ್ನು ಕಟ್ಟಿಕೊಂಡಿದ್ದೇನೆ. ಇದು ಸಾಕಾರಗೊಳ್ಳಲು ನಿಮ್ಮ ಬೆಂಬಲ ಅಗತ್ಯ. ನವೆಂಬರ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 1 ಹಸ್ತದ ಗುರುತಿಗೆ ಮತ ನೀಡುವ ಮೂಲಕ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಕಣ್ಣೀರು ಹಾಕಿದ ಕುಸುಮಾ: ರಾಜರಾಜೇಶ್ವರಿ ನಗರದಲ್ಲಿ ನಡೆದ ಮಂಗಳಮುಖಿಯರ ಸಭೆಯಲ್ಲಿ ಮಾತನಾಡಿದ ಕುಸುಮಾ ಅವರು ಭಾವುಕರಾದರು. ನಾನು ಪ್ರಚಾರಕ್ಕೆ ಹೋದಕಡೆಯೆಲ್ಲಾ ಮಹಿಳೆಯರು ಹರಿಶಿನ ಕುಂಕುಮ ಇಟ್ಟು, ಅವರೇ ಹೂ ಮೂಡಿಸಿ ನನಗೆ ಆಶೀರ್ವದಿಸುತ್ತಿದ್ದಾರೆ. 2015ರಲ್ಲಿ ನನ್ನ ಅಸಹಾಯಕ ಸ್ಥಿತಿಯನ್ನು ಇಡೀ ದೇಶ ನೋಡಿತ್ತು. ಇಂದು ಎಲ್ಲ ಮಹಿಳೆಯರು ನನ್ನ ಶಕ್ತಿಯಾಗಿ ನಿಂತಿದ್ದಾರೆ. ನಿಮ್ಮ ಪ್ರೀತಿ ಕಂಡು ಹೆಮ್ಮೆಯಾಗುತ್ತಿದೆ. ನೀವು ನನ್ನ ಶಕ್ತಿಯಾಗಿರುವಾಗ ನಾನು ಕುಗ್ಗುವುದಿಲ್ಲ. ಸಧೃಢವಾಗಿ ನಿಲ್ಲುತ್ತೇನೆ.

ನಾವು ಮನುಷ್ಯರನ್ನು ಮನುಷ್ಯರನ್ನಾಗಿ ನೋಡೋಣ. ಲಿಂಗದಿಂದ ತಾರತಮ್ಯ ಮಾಡುವುದು ಬೇಡ ಎಲ್ಲರ ಗೌರವದಿಂದ ನೋಡೋಣ. ನಾನು ನಿಮ್ಮ ಗೌರವ ರಕ್ಷಿಸುವ ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಸ್ವೀಕರಿಸಿ, ನಿಮ್ಮ ಹೋರಾಟದಲ್ಲಿ ನಾನು ಭಾಗಿಯಾಗಿರುತ್ತೇನೆ ಎಂದರು.












Click it and Unblock the Notifications