ಪುಂಡಾಟ ಪ್ರಕರಣದಲ್ಲಿ ಬಿಟ್ ಕಾಯಿನ್ ದಂಧೆ ಸೂತ್ರಧಾರ ಶ್ರೀಕಿ ಬಂಧನ
ಬೆಂಗಳೂರು, ನ. 06: ರಾಜಕಾರಣಿಗಳ ನಿದ್ದೆಗೆಡಿಸಿರುವ ಬಿಟ್ ಕಾಯಿನ್ ದಂಧೆಯ ಸೂತ್ರಧಾರ ಹ್ಯಾಕರ್ ಶ್ರೀಕೃಷ್ಣ ಮತ್ತೆ ಸುದ್ದಿಯಾಗಿದ್ದಾನೆ. ಖಾಸಗಿ ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿ ಪುಂಡಾಟಿಕೆ ತೋರಿದ ಪ್ರಕರಣದಲ್ಲಿ ಹ್ಯಾಕರ್ ಶ್ರೀಕೃಷ್ಣ ಮತ್ತು ಆತನ ಆಪ್ತನನ್ನು ಜೀವನ ಭೀಮಾನಗರ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.
ಬಿಟ್ ಕಾಯಿನ್ ದಂಧೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದೆ. ಈ ಹೊತ್ತಲ್ಲಿ ಬಿಟ್ ಕಾಯಿನ್ ದಂಧೆಯ ಸೂತ್ರಧಾರ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಎಲ್ಲಿ ಹೋದ ಎನ್ನುವಷ್ಠರಲ್ಲಿ ಮತ್ತೆ ಪುಂಡಾಟ ಪ್ರಕರಣದಲ್ಲಿ ಪ್ರತ್ಯಕ್ಷನಾಗಿದ್ದಾನೆ. ರಾಯಲ್ ಅರ್ಕಿಡ್ ಹೋಟೆಲ್ ನಲ್ಲಿ ತಂಗಿದ್ದ ಹ್ಯಾಕರ್ ಶ್ರೀಕಿಯನ್ನು ನೋಡಲು ತೆರಳಿದ್ದ ವಿಷ್ಣು ಭಟ್ ಮದ್ಯದ ಅಮಲಿನಲ್ಲಿ ಹೋಟೆಲ್ ಸೆಕ್ಯುರಿಟಿ ಮ್ಯಾನೇಜರ್ ಜತೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ.
ಎಚ್ಚರ: ನೋಟ್ ಬ್ಯಾನ್ ಆಗಿ 5 ವರ್ಷವಾದರೂ ಜೀವಂತವಾಗಿದೆ exchange ದಂಧೆ
ಕಂಠಪೂರ್ತಿ ಕುಡಿದ ಪುಂಡಾಟಿಕೆ ತೋರಿದ ಬಗ್ಗೆ ಹೋಟೆಲ್ ಸಿಬ್ಬಂದಿ ಹೊಯ್ಸಳ ಸಿಬ್ಬಂದಿಗೆ ದೂರು ನೀಡಿದ್ದು ಸ್ಥಳಕ್ಕೆ ಪೊಲೀಸರು ದಾವಿಸಿ ಪರಿಶೀಲನೆ ನಡೆಸಿದಾಗ ಕರ್ನಾಟಕದ ಮೋಸ್ಟ್ ವಾಂಟೆಡ್ ಹ್ಯಾಕರ್ ಶ್ರೀಕಿ ಇರುವುದು ಗೊತ್ತಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಹ್ಯಾಕರ್ ಶ್ರೀಕೃಷ್ಣ ಮತ್ತು ಭೀಮಾ ಜ್ಯುವೆಲರಿ ಮಾಲೀಕರ ಪುತ್ರ ವಿಷ್ಣು ಭಟ್ ನನ್ನು ವಶಕ್ಕೆ ಪಡೆದಿದ್ದಾರೆ.
ಹಲ್ಲೆಗೆ ಸಂಬಂಧಸಿದಂತೆ ಹೋಟೆಲ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಹ್ಯಾಕರ್ ಶ್ರೀಕಿ ಮತ್ತು ಆತನ ಆಪ್ತ ಸ್ನೇಹಿತ ವಿಷ್ಣು ಭಟ್ ನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಕುಡಿತದ ಅಮಲಿನಲ್ಲಿರುವುದು ಗೊತ್ತಾಗಿದ್ದು, ಮಾದಕ ವಸ್ತು ಸೇವನೆ ಕುರಿತು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಹಲ್ಲೆ ಪ್ರಕರಣದಲ್ಲಿ ಬಂಧನ :
ರಾಯಲ್ ಆರ್ಕಿಡ್ ಹೋಟೆಲ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಹ್ಯಾಕರ್ ಶ್ರೀಕೃಷ್ಣ ಮತ್ತು ವಿಷ್ಣು ಭಟ್ ನನ್ನು ಜೀವನ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ, ಜೀವ ಬೆದರಿಕೆ, ರಕ್ತ ಗಾಯ ಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ IPC sec 341, IPC 323, IPC 324 ಅಡಿ ಕೇಸು ದಾಖಲಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ಮಾಡಿರುವುದು ಖಚಿತವಾದರೆ, ಮಾದಕ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಬಂಧನದ ವೇಳೆ ಶ್ರೀಕಿ ಬಳಿಸುತ್ತಿದ್ದ ನಾಲ್ಕು ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತರ ಹೇಳಿಕೆ :
ಶ್ರೀಕೃಷ್ಣ ಬಂಧನ ವಿಚಾರ ತಿಳಿಯುತ್ತಿದ್ದಂತೆ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಮತ್ತು ಡಿಸಿಪಿ ಶರಣಪ್ಪ ಭೇಟಿ ನೀಡಿ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಮುರುಗನ್, ಸಂಜೆ ನಾಲ್ಕು ಗಂಟೆ ಸುಮರಿಗೆ ಖಾಸಗಿ ಹೋಟೆಲ್ ನಿಂದ ಪೋನ್ ಕರೆ ಬಂದಿತ್ತು. ಹೊಯ್ಸಳ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಹ್ಯಾಕರ್ ಶ್ರೀಕೃಷ್ಣ ನ ಆಪ್ತನಾದ ವಿಷ್ಣುಭಟ್ ಹೋಟೆಲ್ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತನೆ ಮಾಡಿ ಹಲ್ಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದೇವೆ. ಶ್ರೀಕಿ ಬಳಸುತ್ತಿದ್ದ ಲ್ಯಾಪ್ಟಾಪ್ ಸಿಕ್ಕಿದೆ. ಹೋಟೆಲ್ ಗೆ ಏಕಾಏಕಿ ನುಗ್ಗಿದ ವಿಷ್ಣು ಭಟ್ ನನ್ನು ತಡೆದ ಸೆಕ್ಯುರಿಟಿ ಮೇಲೆ ಹಲ್ಲೆ ಮಾಡಿದ್ದಾನೆ. ಒಂದು ತಿಂಗಳಿನಿಂದ ಶ್ರೀಕಿ ಹೋಟೆಲ್ ನಲ್ಲಿ ತಂಗಿದ್ದ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದರು.ಮಾಧ್ಯಮಗಳಿಗೆ ಅಸಭ್ಯ ಕೈಸನ್ನೆ :
ಹೋಟೆಲ್ ಸಿಬ್ಬಂದಿ ಮೇಲೆ ಜತೆ ಪುಂಡಾಟ ಮೆರೆದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿಗೆ ಹೋದ ವಿಷ್ಣುಭಟ್ ಮಾಧ್ಯಮಗಳಿಗೆ ಅಸಭ್ಯವಾಗಿ ಕೈ ಸನ್ನೆ ಮಾಡಿ ಉದ್ದಟತನ ತೋರಿದ್ದಾನೆ. ಶ್ರೀಕಿ ಜತೆ ನಿರಂತರ ಸಂಪರ್ಕ ಹೊಂದಿದ್ದ ವಿಷ್ಣು ಭಟ್ ಗೆ ಸೇರಿದ ಲ್ಯಾಪ್ಟಾಪ್ ಕೂಡ ಸಿಕ್ಕಿದ್ದು, ಈತ ಸಹ ಹ್ಯಾಕಿಂಗ್ ಎಕ್ಸ್ ಪರ್ಟ್ ಆಗಿರುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರಾಜಕಾರಣಿಗಳಿಗೆ ನಡುಕ :
ಹ್ಯಾಕರ್ ಶ್ರೀಕೃಷ್ಣ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಬಳಿಕ ಸಾಕಷ್ಟು ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದ ಎಂಬ ಆರೋಪ ಕೇಳಿ ಬಂದಿದೆ. ಪ್ರತಿಷ್ಠಿತ ರಾಜಕಾರಣಿಗಳ ಶ್ರೀಕಿ ಜತೆ ಸಂಪರ್ಕ ಹೊಂದಿದ್ದು, ಬಿಟ್ ಕಾಯಿನ್ ದಂಧೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಿಟ್ ಕಾಯಿನ್ ಹ್ಯಾಕ್ ಮಾಡಿ ವಂಚನೆ ಸಂಬಂಧ ಪ್ರಧಾನ ಮಂತ್ರಿಗಳ ಕಾರ್ಯಾಲಯ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ದಂಧೆಯ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ ಎಂದೇ ಹೇಳಲಾಗುತ್ತಿತ್ತು. ಇದರ ನಡುವೆ ಶ್ರೀಕೃಷ್ಣ ಬಂಧನಕ್ಕೆ ಒಳಗಾಗಿರುವುದು ರಾಜಕಾರಣಿಗಳ ಪಾಲಿಕೆ ನಡುಕ ಹುಟ್ಟಿಸಿದೆ.