'ತುಮಕೂರಿನಿಂದ ದೇವೇಗೌಡರೇ ಸ್ಪರ್ಧಿಸುವುದಾದರೆ ಓಕೆ, ಇಲ್ಲವಾದರೆ ಬಿಟ್ಟುಕೊಡಿ'
ಬೆಂಗಳೂರು, ಮಾರ್ಚ್ 18: ತುಮಕೂರಿನಿಂದ ದೇವೇಗೌಡರೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾದರೆ ಪರವಾಗಿಲ್ಲ, ಇಲ್ಲವಾದರೆ ನಮಗೆ ಬಿಟ್ಟುಕೊಡಲಿ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ ತಿಳಿಸಿದ್ದಾರೆ.
ಸೋಮವಾರ ಸಾಲುಮರದ ತಿಮ್ಮಕ್ಕಗೆ ಅಭಿನಂದನೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, ತುಮಕೂರನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದಕ್ಕೆ ಬೇಸರವಾಗಿರುವುದು ನಿಜ ಆದರೆ ಉದ್ದೇಶಪೂರ್ವಕವಾಗಿ ನಡೆದಿದ್ದು ಎಂದು ಅನ್ನಿಸುತ್ತಿಲ್ಲ, ಒಂದೊಮ್ಮೆ ತುಮಕೂರಿನಿಂದ ದೇವೇಗೌಡರ ಬದಲು ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾದರೆ ಕಾಂಗ್ರೆಸ್ ಗೆ ಬಿಟ್ಟುಕೊಡಲಿ ಎಂದು ಹೈಕಮಾಂಡ್ಗೆ ತಿಳಿಸಿರುವುದಾಗಿ ಪರಮೇಶ್ವರ ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಗೆದ್ದ ಅಭ್ಯರ್ಥಿಗಳನ್ನು ಬದಲಿಸುವುದು ಬೇಡ ಎಂದು ಮಾತುಕತೆಯಾಗಿತ್ತು. ತುಮಕೂರಿನಿಂದ ಮುದ್ದಹನುಮೇಗೌಡ ಅವರು ಗೆಲುವು ಸಾಧಿಸಿದ್ದರು.

ಆದರೂ ಜೆಡಿಎಸ್ಗೆ ತುಮಕೂರನ್ನು ಬಿಟ್ಟುಕೊಡಲಾಗಿದೆ. ಈ ವಿಷಯವನ್ನು ನಾವು ನಮ್ಮ ನಾಯಕರ ಗಮನಕ್ಕೆ ತಂದಿದ್ದು, ತುಮಕೂರನ್ನು ನಮಗೆ ಬಿಟ್ಟುಕೊಡುವಂತೆ ಮನವೊಲಿಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ದೇವೇಗೌಡರು ನನ್ನ ಮನವಿಗೆ ಸ್ಪಂದಿಸಿ ಕಾಂಗ್ರೆಸ್ಗೆ ಬಿಟ್ಟುಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಪರಮೇಶ್ವರ್ ತಿಳಿಸಿದರು.











Click it and Unblock the Notifications