Pavithra Gowda: ಜೈಲಿನಲ್ಲಿ ಪವಿತ್ರಾ ಗೌಡಗೆ ಸಿಗುತ್ತಿದ್ದ ಮನೆ ಊಟಕ್ಕೆ ಹೈಕೋರ್ಟ್ ಬ್ರೇಕ್
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಪ್ರಮುಖ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಒಟ್ಟು ಮೂವರು ಆರೋಪಿಗಳು ಜೈಲಿನಲ್ಲಿದ್ದು, ಅವರಿಗೆ ವಾರಕ್ಕೊಮ್ಮೆ ಮನೆ ಊಟ ಸಿಗುತ್ತಿತ್ತು. ಇದೀಗ ಹೈಕೋರ್ಟ್ ಆದೇಶದ ಬಳಿಕ ಅದಕ್ಕೂ ಬ್ರೇಕ್ ಬಿದ್ದಿದೆ. ಹೈಕೋರ್ಟ್ ಕೆಳ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ್ದರಿಂದ ನಟಿ ಪವಿತ್ರಾ ಗೌಡರ ಮನೆಯೂಟದ ಆಸೆ ನಿರಾಸೆಯಾಗಿದೆ.
ಈ ಮೂವರು ಕೊಲೆ ಆರೋಪಿಗಳು ಮನೆ ಊಟ ಬೇಕೆಂದು ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ 57ನೇ ಸಿಸಿಎಚ್ ನ್ಯಾಯಾಲಯವು ಈ ಮೂವರಿಗೆ ಪ್ರತಿ ದಿನ ಅಲ್ಲ ವಾರಕ್ಕೆ ಒಂದು ಬಾರಿ ಮನೆ ಊಟ ನೀಡುವಂತೆ ಆದೇಶಿಸಿತ್ತು. ವೈದ್ಯರ ಸಲಹೆ ನೀಡಿದರೆ ಕೊಲೆ ಎ2 ಆರೋಪಿ ನಟ ದರ್ಶನ್ಗೂ ಮನೆ ಊಟ ನೀಡಬಹುದೆಂದು ಕೋರ್ಟ್ ತಿಳಿಸಿ ಆದೇಶಿಸಿತ್ತು.

ಮನೆ ಊಟದ ಆದೇಶ ಪ್ರಶ್ನಿಸಿ ಜೈಲಾಧಿಕಾರಿಗಳು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು, ಕಾನೂನು ಎಲ್ಲರಿಗೂ ಒಂದೇ ಆಗಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ತಿಳಿಸಿರುವಂತೆ ಜೈಲಿನಲ್ಲಿ ಯಾರಿಗೂ ಸಹ ವಿಶೇಷ ಸವಲತ್ತು ನೀಡದಂತೆ ತಿಳಿಸಿದ್ದನ್ನು ಉಲ್ಲೇಖಿಸಿತು. ಜೈಲಿನ ಕೈಪಿಡಿಯಲ್ಲಿ ತಿಳಿಸಿರುವಂತೆ ವೈದ್ಯಕೀಯ ಕಾರಣ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ಅದು ಐಜಿಪಿ ಅವರ ಒಪ್ಪಿಗೆ ಮೇರೆಗೆ ಮನೆ ಊಟ ನೀಡಬೇಕು ಎಂದು ತಿಳಿಸಿದ ಹೈಕೋರ್ಟ್ 57ನೇ ಸಿಸಿಎಚ್ ನ್ಯಾಯಾಲಯ ನೀಡಿದ್ದ ಮನೆ ಊಟದ ಆದೇಶಕ್ಕೆ ತಡೆ ನೀಡಿತು.
ಹೈಕೋರ್ಟ್ ಆದೇಶದ ಮೂಲಕ ಆರೋಪಿ ಪವಿತ್ರಾ ಗೌಡ, ಲಕ್ಷ್ಮಣ್ ಹಾಗೂ ನಾಗರಾಜು ಅವರು ಜೈಲಿನಲ್ಲಿದ್ದುಕೊಂಡು ಮನೆ ಊಟ ಸವಿಯುತ್ತ ವಿಶೇಷ ಸವಲತ್ತು ಪಡೆಯುತ್ತಿರುವುದಕ್ಕೆ ಬ್ರೇಕ್ ಬಿದ್ದಿದೆ. ಇಂದು ಹೈಕೋರ್ಟ್ ವಿಚಾರಣೆಯಲ್ಲಿ ಸರ್ಕಾರಿ ವಕೀಲರ ಒಂದಷ್ಟು ವಿಷಯಗಳನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದು ವಿಶೇಷವಾಗಿತ್ತು.
ವಿಶೇಷ ಸೌಲಭ್ಯ ನೀಡದಂತೆ ಸುಪ್ರೀಂ ಕೊರ್ಟ್ ಎಚ್ಚರಿಕೆ
ಹೈಕೋರ್ಟ್ ವಿಚಾರಣೆ ವೇಳೆ, ಸರ್ಕಾರಿ ವಕೀಲರು ಸುಪ್ರೀಂ ಕೋರ್ಟ್ ಸೂಚನೆಯನ್ನು ವಿವರಿಸಿದರು. ಇದೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆರೋಪಿಗಳಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಪವಿತ್ರಾ ಗೌಡ ಮತ್ತಿತರ ಆರೋಪಿಗಳಿಗೆ ಜೈಲಿನಲ್ಲಿ ಮನೆ ಊಟಕ್ಕೆ ಅವಕಾಶ ನೀಡಿದರೆ ಇತರ ಆರೋಪಿ/ಕೈದಿಗಳು ಅದನ್ನೆ ಕೇಳುತ್ತಾರೆ. ಆಗ ಎಲ್ಲರಿಗೂ ಅದನ್ನು ಕೊಡಲಾಗುವುದಿಲ್ಲ. ಜೈಲಿನ ಶಿಸ್ತು ಉಲ್ಲಂಘಿಸಿದಂತಾಗುತ್ತದೆ ಎಂಬ ಅಂಶವನ್ನು ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಭಾರತೀಯ ಆಹಾರ ಸುರಕ್ಷತಾ-ಗುಣಮಟ್ಟ ಪ್ರಾಧಿಕಾರ (FASSI) ಜೈಲಿನಲ್ಲಿನ ಆಹಾರ ಪದಾರ್ಥ ಪರಿಶೀಲಿಸಿ ದೃಢೀಕರಿಸಿದೆ. ಶುಚಿ, ರುಚಿಯಾದ, ಆರೋಗ್ಯಕರ ಮತ್ತು ಗುಣಮಟ್ಟದ ಆಹಾರವನ್ನು ಕೈದಿಗಳಿಗೆ ನೀಡಲಾಗುತ್ತಿದೆ. ಅಂದ ಮೇಲೆ ಮನೆ ಊಟ ಆರೋಪಿಗಳಿಗೆ ಒದಗಿಸುವ ಅಗತ್ಯವಾದರೂ ಏನಿರುತ್ತದೆ ಎಂದು ವಾದ ಮಂಡಿಸಿದರು. ವಾದ ಎಲ್ಲ ಆಲಿಸಿದ ಹೈಕೋರ್ಟ್ ಮಧ್ಯಂತರ ತಡೆ ನೀಡಿ, ಮನೆ ಊಟಕ್ಕೆ ಬ್ರೇಕ್ ಹಾಕಿದರು.












Click it and Unblock the Notifications