ವೈದ್ಯನ ಮೇಲೆ ಹಲ್ಲೆ ಮಾಡಿದ ಸಂಜಯನಗರ ಪೊಲೀಸರಿಗೆ ಅಮಾನತು ಶಿಕ್ಷೆ !
ಬೆಂಗಳೂರು, ಮೇ. 18: ರೆಮ್ಡೆಸಿವಿರ್ ಅಕ್ರಮ ಜಾಲ ಪತ್ತೆ ಮಾಡುವ ಹೆಸರಿನಲ್ಲಿ ವೈದ್ಯನೊಬ್ಬನನ್ನು ವಿಚಾರಣೆ ನೆಪದಲ್ಲಿ ಹಲ್ಲೆ ಮಾಡಿದ ಸಂಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಆದೇಶ ಮಾಡಿದ್ದಾರೆ. ಮಾತ್ರವಲ್ಲ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.
ಸಂಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕಾತ್ಯಾಯಿನಿ, ಮುಖ್ಯಪೇದೆ ಮಂಜುನಾಥ್, ಮತ್ತು ಪಾಂಡುರಂಗ ಅಮಾನತಿಗೆ ಒಳಗಾದವರು. ಜೆ.ಪಿ. ನಗರ ಉಪ ವಿಭಾಗದ ಎಸಿಪಿ ರಿನಾ ಸುವರ್ಣ ಅವರು ಡಿಸಿಪಿ ಮತ್ತು ಹಿರಿಯ ಅಧಿಕಾರಿಗಳಿಗೆ ನೀಡಿದ ವರದಿ ಆಧಾರದ ಮೇಲೆ ಮೂವರನ್ನು ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಇದೇ ಪ್ರಕರಣ ಸಂಬಂಧ ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದು, ಪೊಲೀಸ್ ಇಲಾಖೆಯನ್ನು ವರದಿ ಕೇಳಿದೆ ಎಂದು ರಾಜ್ಯ ಮಾನವ ಹಕ್ಕು ಆಯೋಗದ ಮೂಲಗಳು ತಿಳಿಸಿವೆ.
ರೆಮ್ಡೆಸಿವಿರ್ ನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಕೆಲವರನ್ನು ಬಂಧಿಸಿದ್ದ ಸಂಜಯನಗರ ಪೊಲೀಸರು, ವಿಚಾರಣೆಗಾಗಿ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್ ಆಗಿದ್ದ ನಾಗರಾಜ್ ಎಂಬುವರನ್ನು ವಿಚಾರಣೆಗೆ ಕರೆಸಿದ್ದಾರೆ. ನೀನು ರೆಮ್ಡೆಸಿವಿರ್ ದಂಧೆಯಲ್ಲಿ ಶಾಮೀಲಾಗಿದ್ದೀಯ ಎಂದು ಹೆದರಿಸಿದ್ದಾರೆ. ನಾನು ಯಾವ ತಪ್ಪು ಮಾಡಿಲ್ಲ ಎಂದು ಹೇಳಿದ ನಾಗರಾಜ್ ನನ್ನು ಥಳಿಸಿದ್ದಾರೆ. ಪೊಲೀಸರ ಥಳಿತಕ್ಕೆ ಹೆದರಿ ಐದು ಲಕ್ಷ ರೂಪಾಯಿ ಹಣವನ್ನು ಕೂಡ ಡಾ. ನಾಗರಾಜ್ ನೀಡಿದ್ದಾನೆ. ಪೊಲೀಸರಿಂದ ಹಲ್ಲೆಗೆ ಒಳಗಾಗಿರುವ ನಾಗರಾಜ್ ಕೂರಲೂ ಆಗದೇ ಪರಿತಪಿಸುತ್ತಿದ್ದ. ಮಾತ್ರವಲ್ಲದೇ ಪೊಲೀಸರು ಹಲ್ಲೆ ಮಾಡಿರುವ ಚಿತ್ರಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿ ಸಂಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಕಾತ್ಯಾಯಿನಿ ಮತ್ತು ಸಿಬ್ಬಂದಿ ನಡೆದುಕೊಂಡ ರೀತಿಯ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದ. ಇದು ವೈರಲ್ ಆಗಿತ್ತು. ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದರು. ಜೆಪಿ ನಗರ ಉಪ ವಿಭಾಗದ ಎಸಿಪಿ ರೀನಾ ಸುವರ್ಣ ಅವರು ನೀಡಿದ ವರದಿಯಲ್ಲಿ ಪೊಲೀಸರು ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಜತೆಗೆ ದೈಹಿಕವಾಗಿ ಚಿತ್ರಹಿಂಸೆ ಕೊಟ್ಟಿರುವುದು ಸಾಭೀತಾಗಿತ್ತು. ಈ ಹಿನ್ನೆಲೆಯಲ್ಲಿ ಮೂವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಮರ್ಯಾದೆಗೆ ಧಕ್ಕೆ: ಮಾದರಿ ಪೊಲೀಸಿಂಗ್ ಗೆ ಹೆಸರು ವಾಸಿಯಾಗಿರುವ ಬೆಂಗಳೂರು ಪೊಲೀಸರು ಇತ್ತೀಚೆಗೆ ಕೆಟ್ಟ ವಿಚಾರಗಳಿಗೆ ಸುದ್ದಿಯಾಗುತ್ತಿದ್ದಾರೆ. ಮುಷ್ಕರ ಪ್ರತಿಭಟನೆ, ಕೊರೊನಾ ಲಾಕ್ ಡೌನ್ ನಿರ್ವಹಣೆಯಲ್ಲಿ ಸಾರ್ವನಿಕರ ಪ್ರಶಂಸೆಗೆ ಪಾತ್ರರಾಗಿದ್ದ ಬೆಂಗಳೂರು ಪೊಲೀಸರು ಈ ಸಲ ಲಾಕ್ ಡೌನ್ ನಿರ್ಬಂಧ ವಿಚಾರದಲ್ಲಿ ದಂಡ ಹಾಗೂ ಲಾಠಿ ಪ್ರಯೋಗ ಮಾಡಿ ಸಾರ್ವಜಿಕರ ಟೀಕೆಗೆ ಗುರಿಯಾದರು. ಮುಗ್ಧ ಜನರನ್ನು ಥಳಿಸಿದ ಪೊಲೀಸರ ಕಾರ್ಯ ಶೈಲಿಯ ಬಗ್ಗೆ ವ್ಯಾಪಕ ಟೀಕೆಗಳು ಬಂದಿದ್ದವು. ಸಾಮಾಜಿಕ ಜಾಲ ತಾಣದಲ್ಲಿ ಟೀಕೆಗೆ ಒಳಗಾಗಿದ್ದರು. ಇದೀಗ ಸಂಜಯನಗರ ಪೊಲೀಸರು ಹಲ್ಲೆ ಮಾಡಿರುವ ಪೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಗೌರವಕ್ಕೆ ದೊಡ್ಡ ಧಕ್ಕೆ ತಂದಿದೆ.












Click it and Unblock the Notifications