ಸಿಡಿ ಕೇಸ್: ಮಹಾನಾಯಕ ರಾಜಕೀಯಕ್ಕೆ 'ನಾಲಾಯಕ್' ಎಂದ ರಮೇಶ್ ಜಾರಕಿಹೊಳಿ!
ಬೆಂಗಳೂರು, ಮಾರ್ಚ್ 27: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿಯೂ 11 ಸಾಕ್ಷಿಗಳಿವೆ ಎಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಹಾನಾಯಕನ ವಿರುದ್ಧ ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದರು. ಸಿಡಿ ಪ್ರಕರಣದ ಹಿಂದಿರುವ ಮಹಾನಾಯಕ ಯಾರು ಎನ್ನುವುದನ್ನು ಸಂತ್ರಸ್ತ ಯುವತಿಯ ಪೋಷಕರೇ ಒಪ್ಪಿಕೊಂಡಿದ್ದಾರೆ ಎಂದರು.
ಡಿಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ನೇರ ವಾಗ್ದಾಳಿ ನಡೆಸಿದರು. ಆ ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್ ಆಗಿದ್ದಾನೆ. ನಾನು ನಿಜವಾದ ಗಂಡಸು. ಅವನು ಗಂಡಸೇ ಅಲ್ಲ. ಗಾಂ.. ಕಿಡಿ ಕಾರಿದರು.

ನಿವೃತ್ತಿ ಘೋಷಿಸಲಿ ಎಂದ ರಮೇಶ್ ಜಾರಕಿಹೊಳಿ:
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ, ಇಂಥ ರಾಜಕಾರಣ ಮಾಡುವುದಕ್ಕಿಂತ ನಿವೃತ್ತಿ ಘೋಷಿಸಲಿ ಎಂದರು. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದ 11 ಸಾಕ್ಷ್ಯಗಳು ನನ್ನ ಬಳಿಯೂ ಇವೆ. ಆ ಸಾಕ್ಷಿಗಳನ್ನು ಹಿಡಿದುಕೊಂಡು ಎಸ್ಐಟಿಗೆ ದೂರು ನೀಡುತ್ತೇನೆ. ಮಹಾನಾಯಕನ ಬಗ್ಗೆ ತನಿಖೆ ನಂತರ ಎಲ್ಲವೂ ಗೊತ್ತಾಗಲಿದೆ. ತಪ್ಪು ಮಾಡಿದವರನ್ನು ಎಸ್ಐಟಿ ಒದ್ದು ಒಳಗೆ ಹಾಕಲಿ. ನಾನು ತಪ್ಪು ಮಾಡಿದ್ದರೆ ನನ್ನನ್ನು ಒದ್ದು ಒಳಗೆ ಹಾಕಲಿ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
"ಆ ಹೆಣ್ಣು ಮಗಳ ಬಗ್ಗೆ ಗೊತ್ತೇ ಇಲ್ಲ":
ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಯುವತಿಯ ಬಗ್ಗೆ ನನಗೆ ಗೊತ್ತೇ ಇಲ್ಲ. ಆ ಹೆಣ್ಣು ಮಗಳ ಹೆಸರನ್ನು ಕೂಡಾ ಇತ್ತೀಚಿಗೆ ನಾನು ತಿಳಿದುಕೊಂಡಿದ್ದೇನೆ. ಹೆಣ್ಣು ಮಕ್ಕಳನ್ನು ಬಳಸಿಕೊಂಡು ರಾಜಕಾರಣ ಮಾಡುವುದು ಸರಿಯಲ್ಲ ಎಂದು ರಮೇಶ್ ಜಾರಕಿಹೊಳಿ ಕಿಡಿ ಕಾರಿದರು.












Click it and Unblock the Notifications