ಹನಿ ಟ್ರ್ಯಾಪ್ "ಹನಿ" ತಿನ್ನೋಕೆ ಯಾಕೆ ಹೋಗಿದ್ರು ? ಡಿಕೆಶಿ ಪ್ರಶ್ನೆ
ಬೆಂಗಳೂರು, ಮಾರ್ಚ್ 22: ''ಷಡ್ಯಂತ್ರ ಸದಾಶಿವನಗರದಲ್ಲಿ ಆಯಿತೋ.. ಬಾಂಬೆಯಲ್ಲಿ ಆಯಿತೋ.. ಹನಿ ಯಾಕೆ ತಿನ್ನೋಕೆ ಹೋಗಿದ್ರು. ಮಂಚದ ಮೇಲೆ ರಾಜಕಾರಣ ಮಾಡುವಂತದ್ದೇನಿತ್ತು. ಇದೊಂದು ಷಡ್ಯಂತ್ರ ಎಂದು ವಿಶೇಷ ತನಿಖಾ ಸಂಸ್ಥೆಗೆ ವಹಿಸಿದ್ದಾರೆ. ಯುವತಿ ನನಗೆ ಅನ್ಯಾಯ ಆಗಿದೆ ಎಂದು ಹೇಳುತ್ತಿದ್ದಾಳೆ. ಅವಳ ಹೇಳಿಕೆಯನ್ನು ಯಾಕೆ ಪರಿಗಣಿಸುತ್ತಿಲ್ಲ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.
ಕಲಾಪದ ವೇಳೆ ಸಿಡಿ ಕೇಸಿನ ಬಗ್ಗೆ ಸಿದ್ದು ಗುಡುಗಿದ ನಂತರ ಡಿ.ಕೆ. ಶಿವಕುಮಾರ್ ಪ್ರಸ್ತಾಪಿಸಿದರು. ರಮೇಶ್ ಜಾರಕಿಹೊಳಿಗೆ ಅನ್ಯಾಯ ಆಗಿದೆಯೋ ? ಷಡ್ಯಂತ್ರ ನಡೆದಿದೆಯೋ ? ವಿಡಿಯೋ ಅಸಲಿಯೋ ನಕಲಿಯೋ ಎಂಬುದರ ಬಗ್ಗೆ ಇನ್ನೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತರಿಸಿಕೊಂಡಿಲ್ಲ. ಸಂತ್ರಸ್ತೆ ಹೇಳಿಕೆ ಪರಿಗಣಿಸಿಲ್ಲ. ಕೇವಲ ರಮೇಶ್ ಜಾರಕಿಹೊಳಿಗೆ ಅನ್ಯಾಯ ಆಗಿದೆ. ಇದರಲ್ಲಿ ಷಡ್ಯಂತ್ರ ಅಡಗಿದೆ ಎಂದೆಲ್ಲಾ ಹೇಳುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ನವರು ಶಾಮೀಲಾಗಿದ್ದಾರೆ ಎಂದೆಲ್ಲಾ ಆರೋಪಿಸಿದ್ದಾರೆ. ಇದು ಅಸಲಿ ಸತ್ಯ ಬಯಲಿಗೆ ಬರಬೇಕಾದರೆ ಮೊದಲು ಎರಡು ಆಯಾಮದಲ್ಲಿ ತನಿಖೆ ನಡೆಸಿ. ಕೇವಲ ಷಡ್ಯಂತ್ರಕ್ಕೆ ಸೀಮಿತಗೊಳಿಸಿ ಎಸ್ಐಟಿ ತನಿಖೆಗೆ ವಹಿಸಿರುವುದು ಸರಿಯಲ್ಲ ಎಂದು ಹೇಳಿದರು.

ಎಸ್ಐಟಿ ರಚನೆ ಬಗ್ಗೆ ಅಧಿಕೃತ ನೋಟಿಫಿಕೇಷನ್ ನೀಡಿಲ್ಲ. ಮೊದಲು ವಿಡಿಯೋ ಎಡಿಟ್ ಆಗಿದೆಯೋ. ರಮೇಶ್ ಜಾರಕಿಹೊಳಿ ಅಸಲಿ ಚಿತ್ರವೋ ಎಲ್ಲದರ ಬಗ್ಗೆ ತನಿಖೆಯಾಗಲಿ. ಹಾಗೇನೆ ಸಂತ್ರಸ್ತ ಯುವತಿಯ ಹೇಳಿಕೆ ಆಧರಿಸಿ ತನಿಖೆ ನಡೆಸಲಿ. ಇಬ್ಬರು ಯಾರೋ ಇಬ್ಬರು ಯುವಕರು ಷಡ್ಯಂತ್ರ ನಡೆಸಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಅವರು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಅಂತೂ ಒಬ್ಬ ರಾಜಕಾರಣಿಯ ನೀಚತನ ಬಯಲಿಗೆ ಎಳೆದಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.












Click it and Unblock the Notifications