ಜಾರಕಿಹೊಳಿ ಪ್ರಕರಣ ವಾಪಸ್ ಪಡೆಯುವಂತೆ ಯುವತಿಗೆ ಬೆದರಿಕೆ
ಬೆಂಗಳೂರು ಮೇ. 05: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸದ್ದಿಲ್ಲದೇ ಹೊಸ ತಿರುವು ಪಡೆದುಕೊಂಡಿದೆ. ಜಾರಕಿಹೊಳಿ ವಿರುದ್ಧ ದಾಖಲಿಸಿರುವ ದೂರನ್ನು ವಾಪಸು ಪಡೆದುಕೊಳ್ಳುವಂತೆ ಸಂತ್ತಸ್ತ ಯುವತಿಗೆ ಒತ್ತಡ ಹಾಕಿರುವ ಸಂಗತಿ ಹೊರಗೆ ಬಿದ್ದಿದೆ. ವ್ಯಕ್ತಿಯೊಬ್ಬ ತನ್ನ ಪರ ವಕೀಲರಿಗೆ ಕರೆ ಮಾಡಿ ಪ್ರಕರಣ ವಾಪಸು ಪಡೆಯುವಂತೆ ಒತ್ತಡ ಹಾಕಿದ್ದಾಗಿ ಸಂತ್ರಸ್ತ ಯುವತಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಹಾಗೂ ಎಸ್ಐಟಿ ತನಿಖಾಧಿಕಾರಿ ಕವಿತಾ ಅವರಿಗೆ ದೂರು ನೀಡಿದ್ದಾಳೆ.
Recommended Video
ಸತತ ನಲವತ್ತು ದಿನ ರಾಜ್ಯದ ಸುದ್ದಿ ಮಾಧ್ಯಮವನ್ನು ಆವರಿಸಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕೊವಿಡ್ ಹಿನ್ನೆಲೆಯಲ್ಲಿ ತಣ್ಣಗಾಗಿತ್ತು. ಎಸ್ಐಟಿ ವಿಚಾರಣೆ ಎದುರಿಸಿದ್ದ ಸಂತ್ರಸ್ತ ಯುವತಿ ನೀಡಿದ ಹೇಳಿಕೆ ಆಧಾರದ ಮೇಲೆ ಆರೋಪಿತ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಜಾರಕಿಹೊಳಿ ವಿಚಾರಣೆಗೆ ವಿನಾಯ್ತಿ ಪಡೆದಿದ್ದರು. ಇದಾಗಿ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಕರಾಳ ಛಾಯೆ ಬೀರಿತ್ತು.
ಇದೀಗ ಸಂತ್ರಸ್ತ ಯುವತಿ ನಗರ ಪೊಲೀಸ್ ಆಯುಕ್ತರಿಗೆ ಮತ್ತು ಎಸ್ಐಟಿ ತನಿಖಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ನನ್ನ ಪರ ವಕೀಲರಾದ ಸೂರ್ಯ ಮುಕುಂದ್ ರಾಜ್ ಮತ್ತು ವಕೀಲ ಜಗದೀಶ್ ಅವರಿಗೆ ಸೋಮವಾರ ಪ್ರತೀಪ್ ಎಂಬ ವ್ಯಕ್ತಿ ವಾಟ್ಸಪ್ ನಲ್ಲಿ ಕರೆ ಮಾಡಿದ್ದಾನೆ. I Have , v Good offer to u ಎಂದು ಆಮಿಷ ಒಡ್ಡಿದ್ದಾರೆ. ಜಾರಕಿಹೊಳಿ ವಿರುದ್ಧ ಪ್ರಕರಣ ವಾಫಸು ಪಡೆದರೆ ಕೋಟ್ಯಂತರ ರೂಪಾಯಿ ಸೆಟಲ್ ಮೆಂಟ್ ಮಾಡುವುದಾಗಿ ಆಮಿಷ ಒಡ್ಡಿದ್ದಾರೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿಡಿ ಸಂತ್ರಸ್ತ ಯುವತಿ ಈಗ ನೀಡಿರುವ ದೂರನ್ನು ಆಧರಿಸಿ ಮತ್ತೊಂದು ಎಫ್ಐಆರ್ ದಾಖಲಿಸಬಹುದು. ಇಲ್ಲವೇ ಮಹತ್ವದ ಸಾಕ್ಷಿಯನ್ನಾಗಿ ಪರಿಗಣಿಸಿಬಹುದು.
ಜಾರಕಿಹೊಳಿಗೆ ಮುಳುವಾಗುತ್ತಾ ಪ್ರಕರಣ: ಇದರಲ್ಲಿ ನನ್ನದೇನು ಇಲ್ಲ ಎಂದೇ ಸಮರ್ಥನೆ ಮಾಡಿಕೊಂಡು ಬಂದಿದ್ದ ರಮೇಶ್ ಜಾರಕಿಹೊಳಿ ಸ್ವತಃ ಸದಾಶಿವನಗರದಲ್ಲಿ ಬ್ಲಾಕ್ ಮೇಲ್ ದೂರು ನೀಡಿದ್ದರು. ಪ್ರಕರಣ ನಾನಾ ತಿರುವು ಪಡೆದಿತ್ತು. ಸಂತ್ರಸ್ತ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿದ್ದರು. ಇದನ್ನು ಆಧರಿಸಿ ತನಿಖೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು, ರಹಸ್ಯ ಕ್ಯಾಮರಾ ಇಟ್ಟು ರೆಕಾರ್ಡ್ ಮಾಡಿರುವ ಸಂಬಂಧ ಮಹತ್ವದ ಸಾಕ್ಷ್ಯಾಧಾರಗಳನ್ನು ಕೂಡ ಕಲೆ ಹಾಕಿದ್ದರು. ಸಂತ್ರಸ್ತ ಯುವತಿ ವಿಚಾರಣೆ ಬಳಕ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನೋಟಿಸ್ ನೀಡಿದ್ದರು.

ಕೊವಿಡ್ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದ್ದ ರಮೇಶ್ ಜಾರಕಿಹೊಳಿಗೆ ಈವರೆಗೂ ನಾಲ್ಕು ನೋಟಿಸ್ ನೀಡಲಾಗಿದೆ. ಇಷ್ಟಾಗಿಯೂ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಇದೀಗ ರಮೇಶ್ ಜಾರಕಿಹೊಳಿ ಪರ ವ್ಯಕ್ತಿಯೊಬ್ಬ ಕರೆ ಮಾಡಿ ಆಮಿಷ ಒಡ್ಡಿರುವುದು ಈ ಪ್ರಕರಣಕ್ಕೆ ಮತ್ತೊಂದು ಆಯಾಮ ನೀಡಿದೆ. ರಾಜ್ಯದಲ್ಲಿ ಈಗ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಕೋವಿಡ್ ಇದ್ದರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ. ಆದರೆ ಎಸ್ಐಟಿ ಅಧಿಕಾರಿಗಳು ಯಾಕೆ ಈ ಪ್ರಕರಣದಲ್ಲಿ ಮೌನ ವಹಿಸಿದ್ದಾರೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುತ್ತಿಲ್ಲ.

ಅಧಿಕಾರಿಗಳಿಗೆ ಕೋವಿಡ್ ಡ್ಯೂಟಿ: ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ರಚನೆ ಮಾಡಿದ್ದ ಎಸ್ಐಟಿ ಅಧಿಕಾರಿಗಳು ಬಹುತೇಕರು ಕೋವಿಡ್ ಡ್ಯೂಟಿಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಜಾರಕಿಹೊಳಿ ಪ್ರಕರಣದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದೀಗ ಸಂತ್ರಸ್ತ ಯುವತಿ ದೂರು ನೀಡಿದ್ದು, ಮತ್ತೆ ಪ್ರಕರಣದ ತನಿಖೆ ಚುರುಕು ಪಡೆಯಲಿದೆ.












Click it and Unblock the Notifications