CD ಯುವತಿಗಾಗಿ ಎಸ್ಐಟಿ ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ !
ಬೆಂಗಳೂರು, ಮಾರ್ಚ್ 13: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜತೆ ಏಕಾಂತವಾಗಿ ಕಳೆದ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿಗಾಗಿ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಗೋವಾದಲ್ಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಒಂದು ತಂಡ ಗೋವಾದಲ್ಲಿ ಶೋಧ ನಡೆಸುತ್ತಿದೆ. ಇನ್ನೊಂದು ತಂಡ ಉತ್ತರ ಕರ್ನಾಟಕದಲ್ಲಿ ಹುಡುಕಾಟ ಆರಂಭಿಸಿದೆ. ಎಸ್ಐಟಿ ತನಿಖೆ ಬೆಳವಣಿಗೆ ನೋಡಿಕೊಂಡು ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರು ನೀಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಯುವತಿ ಎಲ್ಲಿ ?: ಇನ್ನು ಪ್ರಕರಣದ ಪ್ರಮುಖ ಕೇಂದ್ರಬಿಂದು ಯುವತಿಯಾಗಿದ್ದು, ಆಕೆಯ ಹೇಳಿಕೆ ಮಹತ್ವ. ಆದರೆ ಸಿಡಿ ಬಿಡುಗಡೆಯಾದ ದಿನದಿಂದ ಆಕೆ ಎಲ್ಲಿದ್ದಾಳೆ ಎಂಬ ಸುಳಿವು ಯಾರಿಗೂ ಸಿಕ್ಕಿಲ್ಲ. ಇನ್ನು ಯುವತಿ ಜತೆ ಹೋಟೆಲ್ ನಲ್ಲಿ ಸಂಭಾಷಣೆ ನಡೆಸಿದ ಇಬ್ಬರ ವ್ಯಕ್ತಿಗಳ ಕುರಿತ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಇನ್ನು ಇದೇ ಪ್ರಕರಣ ಸಂಬಂಧ ಸೈಬರ್ ಎಕ್ಸ್ ಪರ್ಟ್ ಹಾಗೂ ಪ್ರತ್ರಕರ್ತನಿಗಾಗಿಯೂ ಹುಡುಕಾಟ ನಡೆಸುತ್ತಿದ್ದಾರೆ. ನಾಲ್ಕು ದಿನದ ಹಿಂದೆ ಬಾಗೇಪಲ್ಲಿ ಬಳಿ ಇಬ್ಬರ ಸ್ವಿಚ್ ಆಫ್ ಆಗಿದ್ದು, ಆಂಧ್ರ ಪ್ರದೇಶ ಕಡೆ ತಲೆ ಮರೆಸಿಕೊಂಡಿರುವ ಸಾಧ್ಯತೆಯಿದೆ.

ತಾಂತ್ರಿಕ ಮಾಹಿತಿ ಸಂಗ್ರಹ: ಇನ್ನು ಸಿಡಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ನಡುವಿನ ಸಂಪರ್ಕ ಕುರಿತ ತಾಂತ್ರಿಕ ಸಾಕ್ಷಾಧಾರಗಳನ್ನು ಎಸ್ಐಟಿ ಈಗಾಗಲೇ ಸಂಗ್ರಹಿಸಿದೆ. ಎಲ್ಲಾ ದಾಖಲೆಗಳ ಸಮೇತ ಪ್ರಾಥಮಿಕ ವರದಿಯನ್ನು ಸಹ ತಯಾರಿಸಿದ್ದು, ಗೃಹ ಸಚಿವರಿಗೆ ಸೋಮವಾರ ಸಲ್ಲಿಸಿದ್ದಾರೆ. ವರದಿ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಬೇಕೇ ? ಅಥವಾ ಸಚಿವರ ಕಡೆಯಿಂದ ದೂರು ಸ್ವೀಕರಿಸಿ ತನಿಖೆ ಮುಂದುವರೆಸಬೇಕೆ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

ಎಸ್ಐಟಿ ಸಭೆ: ಇನ್ನು ಎಸ್ಐಟಿ ತನಿಖೆಯ ಪ್ರಗತಿ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡದ ಸಭೆ ನಡೆಸಲಾಗಿದೆ. ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ , ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಅನುಚೇತ್ ಎಂ.ಎನ್. ಸಿಸಿಬಿ ಅಪರಧ ವಿಭಾಗದ ಡಿಸಿಪಿ ರವಿಕುಮಾರ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.












Click it and Unblock the Notifications