ರಾಜೀವ್ ಗಾಂಧಿ ವಿವಿ ಪರೀಕ್ಷಾ ಅಕ್ರಮ, ನಾಲ್ವರ ಬಂಧನ
ಬೆಂಗಳೂರು, ಆಗಸ್ಟ್ 10 : ರಾಜೀವ್ ಗಾಂಧಿ ವಿಜ್ಞಾನ ವಿಶ್ವವಿದ್ಯಾಲಯದ ಪರೀಕ್ಷಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 10 ಕಾಲೇಜುಗಳ 32 ಉತ್ತರ ಪತ್ರಿಕೆಗಳು ಬದಲಾವಣೆಯಾಗಿದ್ದು, ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ಸಿಸಿಬಿ ತನಿಖೆ ನಡೆಸುತ್ತಿದೆ.
ವಿವಿಯ ಮೌಲ್ಯಮಾಪನ ವಿಭಾಗದ ಮಾಜಿ ಸಹಾಯಕ ರಿಜಿಸ್ಟ್ರಾರ್ ದೇವೇಂದ್ರಗೌಡ ಪಾಟೀಲ್, ಭಗೀರಥ್, ಧಾರವಾಡದ ನಿವಾಸಿ ಡಾ.ಶಂಕರಗೌಡ ಮತ್ತು ಮೌಲ್ಯಮಾಪನ ವಿಭಾಗದ ಹಿರಿಯ ಸಹಾಯಕ ಜಯಮಾದೇಗೌಡ ಬಂಧಿತ ಆರೋಪಿಗಳಾಗಿದ್ದಾರೆ. [ಕರ್ನಾಟಕದ ಒಂದು ವಿವಿ ಸೇರಿ ನಕಲಿ ವಿವಿಗಳ ಪಟ್ಟಿ ಪ್ರಕಟ]

ಅನಾಮಧೇಯ ವ್ಯಕ್ತಿ ದೂರು : 2014ನೇ ಸಾಲಿನಲ್ಲಿ ಪಿಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ದೂರಿನ ಅನ್ವಯ ವಿವಿಯ ಮೌಲ್ಯಮಾಪನ ವಿಭಾಗದ ಕುಲಸಚಿವರು ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಬಿಗೆ ವಹಿಸಿತ್ತು. [ಬೆಂಗಳೂರು ವಿಶ್ವವಿದ್ಯಾಲಯ ಒಡೆದು ಮೂರು ಭಾಗ]
ಪ್ರಕರಣದ ತನಿಖೆ ಆರಂಭಿಸಿದ್ದ ಸಿಸಿಬಿ ಪೊಲೀಸರು ವಿವಿಯ ಸಿಬ್ಬಂದಿಗಳಾದ ಧನಂಜಯ್ ಮತ್ತು ಮೈಸೂರು ವೈದ್ಯಕೀಯ ಕಾಲೇಜಿನ ಪ್ರಥಮ ದರ್ಜೆ ಸಹಾಯಕ ವಿ.ಶ್ರೀಧರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಅವರು ನೀಡಿದ ಮಾಹಿತಿ ಅನ್ವಯ ಭಾನುವಾರ 4 ಜನರನ್ನು ಬಂಧಿಸಲಾಗಿದೆ.
ಸಮಿತಿ ರಚನೆ ಮಾಡಲಾಗಿತ್ತು : ವಿವಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ದೂರು ಬಂದ ತಕ್ಷಣ ವಿವಿ ಸಿಂಡಿಕೇಟ್ ಸದಸ್ಯರ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ 10 ಕಾಲೇಜುಗಳ 32 ಉತ್ತರ ಪತ್ರಿಕೆಗಳಲ್ಲಿ ಅಕ್ರಮ ನಡೆದಿದೆ ಎಂದು ವರದಿ ನೀಡಿತ್ತು.
ಖಾಲಿ ಉತ್ತರ ಪತ್ರಿಕೆ ಸಂಗ್ರಹ : ಮೊದಲು ಖಾಲಿ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಲಾಗುತ್ತಿತ್ತು. ಪರೀಕ್ಷೆ ಮುಗಿದ ಬಳಿಕ ಹಣ ಕೊಟ್ಟ ವಿದ್ಯಾರ್ಥಿಗಳಿಂದ ಉತ್ತರಗಳನ್ನು ಬರೆಸಿ ಪತ್ರಿಕೆಗಳನ್ನು ಬದಲಾವಣೆ ಮಾಡಲಾಗುತ್ತಿತ್ತು. ಬಂಧಿತರಾದ ಭಗೀರಥ್ ಸಿಂಗ್ ಖಾಲಿ ಉತ್ತರ ಪತ್ರಿಕೆಗಳನ್ನು ಜಯಮಾದೇಗೌಡ ಇತರರ ಸಹಾಯದಿಂದ ಸಂಗ್ರಹಿಸುತ್ತಿದ್ದರು ಎಂಬ ಆರೋಪವಿದೆ.












Click it and Unblock the Notifications