ರಾಜರಾಜೇಶ್ವರಿ ನಗರದಲ್ಲಿ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಯಾರು?
ಬೆಂಗಳೂರು, ಮೇ 25 : ಚುನಾವಣಾ ಅಕ್ರಮ ನಡೆದಿದ್ದರಿಂದಾಗಿ ರದ್ದಾಗಿದ್ದ ರಾಜರಾಜೇಶ್ವರಿ ನಗರದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರಕಾರದ ಅಧಿಕೃತ ಅಭ್ಯರ್ಥಿ ಯಾರು?
ಮತಚೀಟಿಗಳನ್ನು ಸಂಗ್ರಹಿಸಿ ಚುನಾವಣಾ ಅಕ್ರಮ ಎಸಗಿದ್ದಾರೆಂದು ಆರೋಪ ಹೊತ್ತಿರುವ ಕಾಂಗ್ರೆಸ್ ನ ಮುನಿರತ್ನ ನಾಯ್ಡು ಅವರಾ? ಅವರ ಅಕ್ರಮವನ್ನು ಲೈವ್ ವಿಡಿಯೋ ಮೂಲಕ ಜಗಜ್ಜಾಹೀರು ಮಾಡಿದ ಜೆಡಿಎಸ್ ನ ಜಿಎಚ್ ರಾಮಚಂದ್ರ ಅವರಾ?
ಮೈತ್ರಿಕೂಟದ ಸರಕಾರ ರಚಿಸಿ, ವಿಶ್ವಾಸಮತದಲ್ಲಿಯೂ ತೇರ್ಗಡೆಯಾಗಿ, ಇನ್ನೇನು ಎರಡೂ ಪಕ್ಷಗಳು ಅಣ್ಣತಮ್ಮಂದಿರಂತೆ ಕೆಲಸ ಮಾಡುತ್ತವೆ ಎಂದು ಅಂದುಕೊಳ್ಳುವಷ್ಟರಲ್ಲಿಯೇ ಟಿಕೆಟ್ ಯಾರಿಗೆ ನೀಡಬೇಕು ಎಂಬ ವಿಷಯದಲ್ಲಿ ಭಾರೀ ಭಿನ್ನಮತ ಭುಗಿಲೆದ್ದಿದೆ.

ಮೇ 28ರಂದು ಸೋಮವಾರ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿ ಜಿಎಚ್ ರಾಮಚಂದ್ರ ಅವರನ್ನೇ ಕಣಕ್ಕಿಳಿಸಿದ್ದು, ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದೆ. ಅವರಿಗೆ ಜೊತೆಯಾಗಿ ಎಚ್ ಡಿ ದೇವೇಗೌಡ ಅವರು ಶನಿವಾರ ರೋಡ್ ಶೋನಲ್ಲಿ ಪಾಲ್ಗೊಂಡಿದ್ದಾರೆ.
ರಾಜರಾಜೇಶ್ವರಿ ನಗರ ಯಶ್ವಂತಪುರ ವಾರ್ಡ್ ನಲ್ಲಿ ಜಿಎಚ್ ರಾಮಚಂದ್ರ ಅವರ ಜೊತೆ ಪ್ರಜ್ವಲ್ ರೇವಣ್ಣ ಅವರು ಕೂಡ ಪ್ರಚಾರಕ್ಕಿಳಿದಿದ್ದು, ನೆರೆದಿದ್ದ ಅಭಿಮಾನಿಗಳೆಲ್ಲ ದೇವೇಗೌಡರಿಗೆ, ಪ್ರಜ್ವಲ್ ರೇವಣ್ಣ ಅವರಿಗೆ ಜೈಜೈಕಾರ ಹಾಕುತ್ತಿದ್ದಾರೆ. ಇದೇ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಖ್ಯಾತ ಚಿತ್ರನಟ ಹುಚ್ಚ ವೆಂಕಟ್ ಅವರು ಕೂಡ ಕಣಕ್ಕಿಳಿದಿದ್ದಾರೆ.
ಈ ನಡುವೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ನಡೆಯುತ್ತಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ, ಮುನಿರತ್ನ ನಾಯ್ಡು ಅವರು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಗಿತ್ತು. ಆದರೆ, ಇದಕ್ಕೆ ಅವರು ಕವಡೆಕಾಸಿನ ಕಿಮ್ಮತ್ತು ನೀಡಿಲ್ಲ. ತಾವೇ ಚುನಾವಣೆಗೆ ನಿಲ್ಲುವುದಾಗಿ ಹಠ ಹಿಡಿದಿದ್ದಾರೆ.
ಜೊತೆಗೆ, ಜೆಡಿಎಸ್ ಕೂಡ ಜಿಎಚ್ ರಾಮಚಂದ್ರ ಅವರನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದೆ. ಈ ಕಾರಣದಿಂದಾಗಿ, ಮತ್ತೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ರಾಜರಾಜೇಶ್ವರಿ ನಗರದಲ್ಲಿ ಕಾಳಗ ನಡೆದರೂ ಅಚ್ಚರಿಯಿಲ್ಲ ಮತ್ತು ಮೈತ್ರಿ ಪಕ್ಷಗಳ ನಡುವೆಯೇ ಬಿರುಕು ಕಂಡುಬಂದರೂ ಅಚ್ಚರಿಯಿಲ್ಲ.












Click it and Unblock the Notifications