ಬೆಂಗಳೂರು : ಬಿಲ್ಡರ್ ನಾಪತ್ತೆ, ಅಪಹರಣ ಶಂಕೆ
ಬೆಂಗಳೂರು, ಜುಲೈ 03 : ಬೆಂಗಳೂರಿನ ರಾಜರಾಜೇಶ್ವರಿ ನಗರದ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಹುಡುಕಾಟಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ.
ರಾಜರಾಜೇಶ್ವರಿ ನಗರದ ನಿವಾಸಿ ಉದ್ಯಮಿ ಪ್ರಸಾದ್ ಬಾಬು (47) ಗುರುವಾರದಿಂದ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. ಪ್ರಸಾದ್ ಬಾಬು ಅವರ ಪತ್ನಿ ಅನಿತಾ ರಾಜರಾಜೇಶ್ವರಿ ನಗರ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.
ಗುರುವಾರ ಸಂಜೆ ಉದ್ಯಮದ ಪಾಲುದಾರ ತೇಜಸ್ ಭೇಟಿ ಮಾಡುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಪ್ರಸಾದ್ ಬಾಬು ನಾಪತ್ತೆಯಾಗಿದ್ದಾರೆ. ಜೆ.ಪಿ.ನಗರ ತಲುಪುವಾಗ ಅವರು ಪತ್ನಿಗೆ ಕರೆ ಮಾಡಿ ಮಾತನಾಡಿದ್ದರು.

ಆದರೆ, ರಾತ್ರಿ ಎಷ್ಟು ಹೊತ್ತಾದರೂ ಅವರು ಮನೆಗೆ ವಾಪಸ್ ಆಗಿಲ್ಲ. ಅವರ ಮೊಬೈಲ್ಗೆ ಕರೆ ಮಾಡಿದರೆ ಸ್ವಿಚ್ ಆಫ್ ಬರುತ್ತಿದೆ. ತೇಜಸ್ ಅವರ ಕಚೇರಿಯಲ್ಲಿ ವಿಚಾರಿಸಿದರೆ ಅಲ್ಲಿಗೆ ಅವರು ಬಂದೇ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ಅನಿತಾ ಅವರು ಕುಟುಂಬ ಸದಸ್ಯರ ಜೊತೆ ಜೆ.ಪಿ.ನಗರಕ್ಕೆ ಹೋಗಿ ಪರಿಶೀಲಿಸಿದ್ದಾರೆ. ತೇಜಸ್ ಅವರ ಕಚೇರಿ ಸಮೀಪ ಪ್ರಸಾದ್ ಬಾಬು ಅವರ ಬೈಕ್ ಪತ್ತೆಯಾಗಿದೆ. ಅದರಲ್ಲಿ ಕೀ ಸಹ ಹಾಗೇ ಇದೆ. ಹಣಕ್ಕಾಗಿ ಅವರನ್ನು ಯಾರೋ ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಪಶ್ಚಿವ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್ ಈ ಕುರಿತು ಮಾಹಿತಿ ನೀಡಿದ್ದಾರೆ. 'ಪ್ರಸಾದ್ ಬಾಬು ಅವರ ಹುಡುಕಾಟಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಅವರ ಮೊಬೈಲ್ ಕರೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ' ಎಂದು ಹೇಳಿದ್ದಾರೆ.
ಪ್ರಸಾದ್ ಬಾಬು ಅವರು ಕೆಲವು ದಿನಗಳ ಹಿಂದೆ ಒಂದು ಅಪಾರ್ಟ್ಮೆಂಟ್ ಅನ್ನು ನಿರ್ಮಿಸಿ ಎಲ್ಲಾ ಫ್ಲಾಟ್ಗಳನ್ನು ಮಾರಾಟ ಮಾಡಿದ್ದರು. ಈ ಬಗ್ಗೆ ತಿಳಿದಿದ್ದವರು ಅವರನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿದೆ.











Click it and Unblock the Notifications