ಬೆಂಗಳೂರಲ್ಲಿ ಮಳೆ ಅವಾಂತರ; ಈ ನಂಬರ್ ನೋಟ್ ಮಾಡಿಕೊಳ್ಳಿ
ಬೆಂಗಳೂರು, ಆಗಸ್ಟ್ 31; ಬೆಂಗಳೂರು ನಗರದಲ್ಲಿ ಈ ಬಾರಿಯ ನೈಋತ್ಯ ಮುಂಗಾರು ಭಾರೀ ಅವಾಂತರ ಉಂಟು ಮಾಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಜನರಿಗೆ ಸಂಕಷ್ಟ ತಂದಿದೆ. ನಗರದಲ್ಲಿ ನಡೆಯುತ್ತಿರುವ ಹಲವು ಕಾಮಗಾರಿಗಳು ವಿಳಂಬವಾಗುತ್ತಿವೆ.
ಆಗಸ್ಟ್ 1ರಿಂದ 30ರ ತನಕ ಬೆಂಗಳೂರು ನಗರದಲ್ಲಿ 639.9 ಮಿ. ಮೀ. ಮಳೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿಯೇ ಸುರಿದ ಅತಿ ಹೆಚ್ಚಿನ ಮಳೆ ಇದಾಗಿದೆ. 1998ರಲ್ಲಿ ಆಗಸ್ಟ್ನಲ್ಲಿ 387.1 ಮಿ. ಮೀ. ಮಳೆಯಾಗಿತ್ತು. ಅತಿಯಾದ ಮಳೆಯಾದರೆ ಅದನ್ನು ಎದುರಿಸಲು ನಗರ ಸಿದ್ಧವಾಗಿಲ್ಲ ಎಂಬುದು ಎಂದೋ ಸಾಬೀತಾಗಿದೆ.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಅನ್ವಯ ಆಗಸ್ಟ್ 30ರ ಬೆಳಗ್ಗೆ 8.30ರ ತನಕ 24 ಗಂಟೆಯ ಅವಧಿಯಲ್ಲಿ ನಗರದಲ್ಲಿ 93.7 ಮಿ. ಮೀ. ಮಳೆಯಾಗಿದೆ. ಅದರಲ್ಲೂ ನಗರದ ಹೊರವರ್ತುಲ ರಸ್ತೆಗಳು ಜಲಾವೃತವಾಗಿವೆ. ಸಾಮಾಜಿಕ ಜಾಲತಾಣದಲ್ಲಿ ರಸ್ತೆಗಳು ಮುಳುಗಿರುವ ಫೋಟೋ, ವಿಡಿಯೋ ವೈರಲ್ ಆಗಿವೆ.
ಬೆಂಗಳೂರು ನಗರದಲ್ಲಿ ಮಳೆ ಆರಂಭವಾದರೆ ರಸ್ತೆಯ ಮೇಲೆ ನೀರು ನಿಂತು ವಾಹನ ಸವಾರರು ಹೈರಾಣಾಗುತ್ತಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಹಿಡಿಶಾಪ ಹಾಕುತ್ತಾರೆ. ನಗರದಲ್ಲಿ ಮಳೆ ಸುರಿಯುವಾಗ ಅವಾಂತರ ಉಂಟಾದರೆ ಯಾರನ್ನು ಸಂಪರ್ಕಿಸಬೇಕು? ಎಂಬುದು ಹಲವರ ಗೊಂದಲ.

ಬಿಬಿಎಂಪಿಯ ಸಹಾಯವಾಣಿ
ಬೆಂಗಳೂರಿನ ಆಡಳಿತ ನೋಡಿಕೊಳ್ಳುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮಳೆ ಸಂದರ್ಭದಲ್ಲಿ ಸಂಪರ್ಕಿಸಬೇಕು. ಬಿಬಿಎಂಪಿ ಎಲ್ಲಾ ಸಹಾಯವಾಣಿಗಳನ್ನು ವಿಲೀನಗೊಳಿಸಿದೆ. ಈಗ ಬಿಬಿಎಂಪಿಯನ್ನು ಸಂಪರ್ಕಿಸಲು ಉಚಿತ ಸಹಾಯವಾಣಿ ಸಂಖ್ಯೆ 1533. ಬಿಬಿಎಂಪಿಯ 24*7 ಸಹಾಯವಾಣಿ ಸಂಖ್ಯೆ 2266 0000. ವಾಟ್ಸಪ್ ಮೂಲಕ ಸಂಪರ್ಕಿಸಲು ಸಂಖ್ಯೆ 94806 85700. ಇದರ ಜೊತೆಗೆ ಜನರು ತಮ್ಮ ವಿಭಾಗವಾರು ಕಚೇರಿಗಳನ್ನು ಸಹ ಸಂಪರ್ಕಿಸಬಹುದು.

ಬಿಬಿಎಂಪಿಯ 'ಪ್ರಹರಿ'
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 'ಪ್ರಹರಿ' ಎಂಬ ತುರ್ತು ಸಹಾಯ ವಾಹನಗಳ ಸೇವೆ ಆರಂಭಿಸಿದೆ. ಪ್ರಹರಿ ನಗರದ ವಿವಿಧ ಭಾಗಗಳಲ್ಲಿ ಸಂಚಾರ ನಡೆಸುತ್ತಿರುತ್ತದೆ. ಒಂದು ಪ್ರಹರಿ ತಂಡದಲ್ಲಿ 5 ಜನರ ತಂಡವಿದೆ. ವಾಹನದಲ್ಲಿ ಮರ ಕತ್ತರಿಸುವ ಯಂತ್ರ, ನೀರು ಹೊರ ಹಾಕಲು ಮೋಟಾರ್ ಮುಂತಾದ ಯಂತ್ರಗಳಿವೆ. ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸಲು ಪ್ರಹರಿ ಸಹಕಾರಿಯಾಗಿದೆ.

ಬೆಸ್ಕಾಂ ಸಂಪರ್ಕಿಸುವುದು ಹೇಗೆ?
ನಗರದಲ್ಲಿ ಮಳೆ ಬಂದರೆ ವಿದ್ಯುತ್ ವ್ಯವಸ್ಥೆ ಸಹ ಕೈ ಕೊಡುತ್ತದೆ. ಅದರಲ್ಲೂ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡರೆ ಜನರು ಬೆಸ್ಕಾಂ ಸಂಪರ್ಕಿಸಬೇಕಾಗುತ್ತದೆ. ಬೆಸ್ಕಾಂ ಜನರ ಉಪಯೋಗಕ್ಕಾಗಿ ವಾಟ್ಸಪ್ ಸಹಾಯವಾಣಿಯನ್ನು ಆರಂಭಿಸಿದೆ. ಒಂದು ವೇಳೆ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಬ್ಯುಸಿ ಇದ್ದರೆ ಜನರು ವಾಟ್ಸಪ್ ಮೂಲಕವೂ ದೂರು ನೀಡಬಹುದು.
ಉಳಿದರಂತೆ ಸಂಪರ್ಕ ಸಂಖ್ಯೆಗಳು ದಕ್ಷಿಣ ವಲಯ 82778 84011, ಪಶ್ಚಿಮ ವಲಯ 82778 84012, ಪೂರ್ವ ವಲಯ 82778 84013ಮ ಉತ್ತರ ವಲಯ 82778 84014.

ಜಲಮಂಡಳಿ ಸಂಪರ್ಕ ಸಂಖ್ಯೆ
ಮಳೆ ಸಮಸ್ಯೆ ಆದಾಗ ಸಂಪರ್ಕಿಸಲು ಜಲಮಂಡಳಿ ಸಂಪರ್ಕಿಸಲು ಪ್ರತ್ಯೇಕ ಸಹಾಯವಾಣಿ ಇಲ್ಲ. ದೂರು ನೀಡಲು ಬಳಕೆ ಮಾಡುವ 1916 ಸಂಖ್ಯೆಗೆ ಜನರು ಕರೆ ಮಾಡಬೇಕಿದೆ. ಮ್ಯಾನ್ ಹೋಲ್ ಉಕ್ಕಿ ಹರಿಯುವುದು, ಒಳಚರಂಡಿ ಸಮಸ್ಯೆ ಮುಂತಾದವುಗಳಿಗೆ ಈ ಸಂಖ್ಯೆಗೆ ಕರೆ ಮಾಡಬೇಕಿದೆ.
ಬಿಬಿಎಂಪಿಯಲ್ಲಿ ಮೇಯರ್, ಕಾರ್ಪೊರೇಟರ್ ಇಲ್ಲದ ಕಾರಣ ಅಧಿಕಾರಿಗಳ ಆಡಳಿತವಿದೆ. ಆದ್ದರಿಂದ ಜನರು ತಮ್ಮ ಮನೆ ಯಾವ ವಾರ್ಡ್ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದರ ಕಚೇರಿ ನಂಬರ್ ಇಟ್ಟುಕೊಳ್ಳುವುದು ಸೂಕ್ತ.












Click it and Unblock the Notifications