ಬೆಂಗಳೂರಿನಲ್ಲಿ ಈ ಬಾರಿಯೂ ಮಳೆ ಅವಾಂತರ ಫಿಕ್ಸ್! ಬಿಬಿಎಂಪಿ ಮುಖ್ಯ ಆಯುಕ್ತರು ಹೇಳಿದ್ದೇನು ?
ಬೆಂಗಳೂರಿನಲ್ಲಿ ಈ ಬಾರಿಯೂ ಪ್ರವಾಹ ಪರಿಸ್ಥಿತಿ ತಪ್ಪಿದ್ದಲ್ಲ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಕಾರಣ ಬೆಂಗಳೂರಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಹಾಗೂ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದು. ಈಚೆಗೆ ಸುರಿದ ಸಾಧಾರಣ ಮಳೆಗೆ ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಯಾಗಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಆಗಲಿದೆ ಎಂದೇ ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಇನ್ನೂ ಪ್ರವಾಹ ಪರಿಸ್ಥಿತಿ ಎದುರಾಗುವ ಪ್ರದೇಶಗಳಲ್ಲಿ ಸಮಸ್ಯೆ ಪರಿಹರಿಸಿಲ್ಲ ಅದೇನು ಎನ್ನುವ ಬಗ್ಗೆ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರೇ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಅವಾಂತರ ಎದುರಾಗದಂತೆ ಇಂದು ಅವರು ಬಿಬಿಎಂಪಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುತಿಸಿರುವಂತಹ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೋಮವಾರ (ಮೇ 26) ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಮಳೆಗಾಲದ ವೇಳೆ ಪ್ರತಿ ವಲಯದ ಎಲ್ಲಾ ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದಾರೆ.
ಮಳೆಗಾಲದ ವೇಳೆ ರಾಜಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜಕಾಲುವೆ ವಿಭಾಗದಿಂದ ನಿರಂತರವಾಗಿ ಹೂಳು ತೆಗದು ಸ್ವಚ್ಛತೆ ಕಾಪಾಡುವ ಕೆಲಸ ಮಾಡಬೇಕು. ಇನ್ನು ಆರ್.ಸಿ.ಸಿ ತಡೆಗೋಡೆ ನಿರ್ಮಾಣ ಮಾಡದ ರಾಜಕಾಲುವೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಲಾವೃತವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ನಗರದಲ್ಲಿ 210 ಪ್ರವಾಹ ಪೀಡಿತ ಪ್ರದೇಶಗಳ ಪೈಕಿ ಈಗಾಗಲೇ 166 ಕಡೆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ವಲಯ ಆಯುಕ್ತರು ಅವುಗಳಿಗೆ ದೃಢೀಕರಣ ಮಾಡಿ ನೀಡಬೇಕು. ಇನ್ನು ಬಾಕಿಯಿರುವ 44 ಸ್ಥಳಗಳಲ್ಲಿ ಕೂಡಲೇ ತಾತ್ಕಾಲಿಕ ಕ್ರಮ ಕೈಗೊಳ್ಳುವುದರ ಜೊತೆಗೆ ಶಾಶ್ವರ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮಳೆಗಾಲದಲ್ಲಿ ನಗರದ ರಸ್ತೆಗಳ ಮೇಲೆ ನೀರು ನಿಂತು ಸಂಚಾರ ದಟ್ಟಣೆ ಹೆಚ್ಚಾಗುವ ಸ್ಥಳಗಳ ಪಟ್ಟಿಯನ್ನು ಸಂಚಾರ ಪೊಲೀಸ್ ವಿಭಾಗದವರು ನೀಡಿದ್ದಾರೆ. ಈ ಸ್ಥಳಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ಜೊತೆಗೆ ರಸ್ತೆ ಬದಿಯ ಚರಂಡಿ/ಶೋಲ್ಡರ್ ಡ್ರೈನ್ಗಳಲ್ಲಿ ಹೂಳು ತೆಗೆಯುವಿಕೆ ಮತ್ತು ಶುಚಿಗೊಳಿಸುವಿಕೆ ಕಾರ್ಯ ನಿರಂತರವಾಗಿ ಮಾಡಲು ನಿರ್ದೇಶನ ನೀಡಲಾಗಿದೆ.
ಸ್ಲೂಯಿಸ್ ಗೇಟ್ ಅಳವಡಿಕೆಗೆ ಕ್ರಮ: ಇನ್ನು ಉಳಿದಂತೆ ಪಾಲಿಕೆ ಅಧೀನದಲ್ಲಿ 183 ಕೆರೆಗಳು ಬರಲಿದ್ದು, ಈ ಪೈಕಿ 13 ಕೆರೆಗಳಿಗೆ ಸ್ಲೂಯಿಸ್ ಗೇಟ್ ಗಳನ್ನು ಅಳವಡಿಸಲಾಗಿದೆ. ಸ್ಲೂಯಿಸ್ ಗೇಟ್ ಅಳವಡಿಸುವ ಕೆರೆಗಳಲ್ಲಿ ನೀರು ತುಂಬಿದ್ದರೆ ನೀರಿನ ಮಟ್ಟವನ್ನು ಕಡಿಮೆ ಮಾಡಿ ಮಳೆ ನೀರು ತುಂಬಲು ಅನುವಾಗುವಂತೆ ಮಾಡಬೇಕು. ಅದಲ್ಲದೆ ಉಳಿದ ಕೆರೆಗಳಿಗೂ ಹಂತ-ಹಂತವಾಗಿ ಸ್ಲೂಯಿಸ್ ಗೇಟ್ ಗಳನ್ನು ಅಳವಡಿಸಲು ಹಾಗೂ ಹೂಳು ತೆರವುಗೊಳಿಸದ ಕೆರೆಗಳಲ್ಲಿ ಹೂಳು ತೆರವು ಮಾಡುವ ವಿಚಾರವಾಗಿ ಯೋಜನೆ ರೂಪಿಸಲು ಹೇಳಲಾಗಿದೆ.
ಧರೆಗುರುಳಿದ ಮರಗಳ ತೆರವು: ನಗರದಲ್ಲಿ ಮಳೆಗಾಲದ ವೇಳೆ ಗಾಳಿ ಸಹಿತ ಬೀಳುವ ಮಳೆಗೆ ಮರಗಳು ಹಾಗೂ ಮರದ ರೆಂಬೆ/ಕೊಂಬೆಗಳು ಧರೆಗುರುಳಿದ ಸಂದರ್ಭದಲ್ಲಿ ಅವುಗಳನ್ನು ಕೂಡಲೇ ತೆರವು ಮಾಡಲು ತಂಡಗಳು ಸದಾ ಸನ್ನದ್ಧವಾಗಿರಬೇಕು. ಇನ್ನು ಒಣಗಿದ/ಅಪಾಯ ಸ್ಥಿತಿಯಲ್ಲಿರುವ ಮರ, ರೆಂಬೆ/ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸುವ ಕೆಲಸ ಮಾಡಲು ಸೂಚಿಸಿದರು.
ಲಾರಿ ಪಾಯಿಂಟ್ಗಳನ್ನು ಸ್ಥಳಾಂತರಿಸಿ: ನಗರದಲ್ಲಿ ರಸ್ತೆ ಬದಿಯಲ್ಲಿ ಆಟೋ ಟಿಪ್ಪರ್ಗಳಿಂದ ಕಾಂಪ್ಯಾಕ್ಟರ್ ಗಳಿಗೆ ತ್ಯಾಜ್ಯ ವರ್ಗಾವಣೆ (ಟ್ರಾನ್ಸ್ ಫರ್ ಪಾಯಿಂಟ್) ಮಾಡುತ್ತಿದೆ. ರಸ್ತೆ ಭಾಗದಲ್ಲಿರುವ / ರಸ್ತೆ ಅಕ್ಕಪಕ್ಕದಲ್ಲಿ ಸಂಗ್ರಹ ಮಾಡುವ ಕಸದ ಲಾರಿಗಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕು. ಈ ಸಂಬಂಧ ಪಾಲಿಕೆಯ ಜಾಗ ಅಥವಾ ಇನ್ನಿತರೆ ಸ್ಥಳಗಳನ್ನು ಗುರುತಿಸಿ, ರಸ್ತೆ ಬದಿ ವರ್ಗಾವಣೆ ಮಾದಡಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಪಾದಚಾರಿ ಮಾರ್ಗಗಳಿಗೆ ಒತ್ತು: ಬೆಂಗಳೂರು ನಗರದಲ್ಲಿ ಸುಗಮ ಪಾದಚಾರಿ ಮಾರ್ಗಗಳಿಗೆ ಹೆಚ್ಚು ಆದ್ಯತೆ ನೀಡಿ. ಈ ನಿಟ್ಟಿನಲ್ಲಿ ಪಾದಚಾರಿಗಳಲ್ಲಿ ಇರುವ ಸಣ್ಣ-ಪುಟ್ಟ ಸಮಸ್ಯೆಗಳನ್ನು ಪರಿಹಸಿದರೆ ಪಾದಚಾರಿಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಬಹುದಾಗಿರುತ್ತದೆ. ಆದ್ದರಿಂದ ಆಯಾ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳಿಗೆ ಹೆಚ್ಚು ಗಮನ ನೀಡಿ ದುರಸ್ತಿ ಕಾರ್ಯ ಹಾಗೂ ಸ್ವಚ್ಛತಾ ಕಾರ್ಯ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸತೀಶ್, ರಮ್ಯಾ, ದಿಗ್ವಿಜಯ್ ಬೋಡ್ಕೆ, ಕರೀಗೌಡ, ಸ್ನೇಹಲ್, ರಮೇಶ್, ವಲಯ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ ಸೇರಿದಂತೆ ಹಲವರು ಇದ್ದರು.












Click it and Unblock the Notifications