ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸಿಹಿಸುದ್ದಿ
ಬೆಂಗಳೂರು, ಡಿಸೆಂಬರ್ 11; ಏರ್ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್ಗೆ ಪ್ರಯಾಣಿಕರನ್ನು ಸೆಳೆಯಲು ನೈಋತ್ಯ ರೈಲ್ವೆ ವಿವಿಧ ಕಸರತ್ತು ನಡೆಸುತ್ತಿದೆ. ಅತಿ ಕಡಿಮೆ ದರದಲ್ಲಿ ವಿಮಾನ ನಿಲ್ದಾಣ ತಲುಪುಲು ರೈಲು ಇದ್ದರೂ ಜನರು ಆಸಕ್ತಿ ತೋರುತ್ತಿಲ್ಲ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ ದಿನಕ್ಕೆ 6 ಮೆಮು ರೈಲುಗಳು ಸಂಚಾರ ನಡೆಸುತ್ತಿವೆ. ಅಷ್ಟೂ ರೈಲುಗಳು ಸೇರಿ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಪ್ರಯಾಣಿಕರು ಕೇವಲ 18.
ಈ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ದೊಡ್ಡಜಾಲ, ಬೆಟ್ಟಹಲಸೂರು ರೈಲು ನಿಲ್ದಾಣಗಳಲ್ಲಿಯೂ ರೈಲು ನಿಲುಗಡೆ ನೀಡಲು ಮುಂದಾಗಿದೆ. ಜೊತೆಗೆ ರೈಲುಗಳು ವೇಗ ಹೆಚ್ಚಿಸಲು ಸಹ ಚಿಂತನೆ ನಡೆಸಿದೆ.

ಸಿಟಿಜನ್ ಫಾರ್ ಸಿಟಿಜನ್ ಸಂಘಟನೆ ಕೆಲವು ದಿನಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿನ ಹಲವಾರು ಅಂಶಗಳನ್ನು ಪರಿಗಣಿಸಿ ರೈಲ್ವೆ ಪ್ರಯಾಣಿಕರನ್ನು ಸೆಳೆಯಲು ಯೋಜನೆ ರೂಪಿಸಿದೆ.
ಇತರ ಸಾರಿಗೆಗಳಿಗೆ ಹೋಲಿಕೆ ಮಾಡಿದರೆ ರೈಲಿನ ಮೂಲಕ ಕೇವಲ 30 ರೂ.ಗಳಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ. ಆದರೆ ಜನರು ಮಾತ್ರ ಈ ಸೇವೆಗೆ ಆದ್ಯತೆ ನೀಡುತ್ತಿಲ್ಲ. ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಪ್ರಯಾಣಿಕರು ರೈಲು ಸೇವೆ ಉಪಯೋಗಿಸಬೇಕು ಎಂದು ರೈಲ್ವೆ ಇಲಾಖೆ ಮನವಿ ಮಾಡಿದೆ.
ರೈಲುಗಳ ವೇಗ ಹೆಚ್ಚಳ; ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದಲ್ಲಿ ರೈಲುಗಳು ಗಂಟೆಗೆ 80 ರಿಂದ 90 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುತ್ತಿವೆ. ಈಗ ರೈಲ್ವೆ ಇಲಾಖೆ ರೈಲುಗಳ ವೇಗವನ್ನು 100 ರಿಂದ 110 ಕಿ. ಮೀ.ಗೆ ಹೆಚ್ಚಿಸಲು ಮುಂದಾಗಿದೆ. ಬೆಂಗಳೂರು ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್ನಲ್ಲಿ ನಿತ್ಯ 8 ಡೆಮು ರೈಲುಗಳು ಸಂಚಾರ ನಡೆಸುತ್ತಿವೆ.
ಬ್ರಾಂಡ್ ಬೆಂಗಳೂರು ಎಂಬ ಪರಿಕಲ್ಪನೆಯಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ಬಳಿಯೇ ಹಾಲ್ಟ್ ಸ್ಟೇಷನ್ ನಿರ್ಮಾಣ ಮಾಡಲಾಗಿದೆ. ಇಲ್ಲಿನ ನಿಲ್ದಾಣ ನಿರ್ವಹಣೆಗೆ ತಿಂಗಳಿಗೆ 1 ರಿಂದ 1,500 ರೂ. ಸಂಭಾವನೆ ನೀಡಿ ನೈಋತ್ಯ ರೈಲ್ವೆ ಸಿಬ್ಬಂದಿಯೊಬ್ಬರನ್ನು ನಿಯೋಜನೆ ಮಾಡಿದೆ.
ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆಯ ತನಕ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡುತ್ತಾರೆ. ದೇವನಹಳ್ಳಿ ನಿಲ್ದಾಣದಿಂದ ಟಿಕೆಟ್ ತಂದು ವಿತರಣೆ ಮಾಡಬೇಕಿದೆ. ರೈಲು ನಿಲ್ಲುವ ಸಮಯ ದಾಖಲು ಮಾಡುವುದು ಸೇರಿದಂತೆ ನಿಲ್ದಾಣದ ಸಂಪೂರ್ಣ ಉಸ್ತುವಾರಿ ಇದೇ ಸಿಬ್ಬಂದಿಯದ್ದಾಗಿದೆ.

ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು, ಸಿಬ್ಬಂದಿ ಸೇರಿ ಸುಮಾರು 1.5 ಲಕ್ಷ ಜನರು ಸಂಚಾರ ನಡೆಸುತ್ತಾರೆ. ಇವರು ಸಂಚಾರ ದಟ್ಟಣೆಯಲ್ಲಿಯೇ ಸಾಗಿ ವಿಮಾನ ನಿಲ್ದಾಣ ತಲುಪಲು ಹರಸಾಹಸ ಪಡುತ್ತಾರೆ. ಆದರೆ ರೈಲು ಸೇವೆಯನ್ನು ಏಕೆ ಬಳಕೆ ಮಾಡುತ್ತಿಲ್ಲ ಎಂಬುದುಕ್ಕೆ ಯಾರ ಬಳಿಯೂ ಉತ್ತರವಿಲ್ಲ.
2021ರ ಜನವರಿ 4ರಿಂದ ವಿಮಾನ ನಿಲ್ದಾಣ ಬಳಿಯ ಹಾಲ್ಟ್ ಸ್ಟೇಷನ್ ಕಾರ್ಯ ನಿರ್ವಹಣೆ ಮಾಡುತ್ತಿದೆ. ಆದರೆ ಪ್ರಯಾಣಿಕರಿಂದ ಮಾತ್ರ ಉತ್ತಮ ಪ್ರತಿಕ್ರಿಯೆ ಸಿಗಲೇ ಇಲ್ಲ. ಕೋವಿಡ್ ಲಾಕ್ಡೌನ್ ಸಮಯದಲ್ಲಿ ರೈಲು ಸೇವೆ ರದ್ದಾಗಿತ್ತು. ಬಳಿಕ ರೈಲು ಸೇವೆ ಆರಂಭವಾದರೂ ಜನರು ಸ್ಪಂದಿಸುತ್ತಿಲ್ಲ.
ಜನರ ಸ್ಪಂದನೆ ಏಕಿಲ್ಲ?: ಮನೆಯಿಂದ ರೈಲು ನಿಲ್ದಾಣಕ್ಕೆ ತೆರಳಲು ಬೇರೆ ವಾಹನ ಬಳಕೆ ಮಾಡಬೇಕು. ಅಲ್ಲಿಂದ ಫ್ಲಾಟ್ಫಾರ್ಮ್ಗೆ ಬ್ಯಾಗ್ ಹೊತ್ತೊಯ್ಯಬೇಕು. ರೈಲಿಗಾಗಿ ಕಾಯಬೇಕು, ರೈಲು ವಿಳಂಬವಾದರೆ ವಿಮಾನ ಮಿಸ್ ಆಗುವ ಸಾಧ್ಯತೆ ಇದೆ.
ರೈಲಿನಲ್ಲಿ ಹೋದರು ಹಾಲ್ಟ್ ಸ್ಟೇಷನ್ ತನಕ ಸಾಗಬಹುದು ಅಲ್ಲಿಂದ ಬಸ್ ಮೂಲಕ ವಿಮಾನ ನಿಲ್ದಾಣಕ್ಕೆ ಸಾಗಬೇಕು. ಮೂರು, ನಾಲ್ಕು ಬಾರಿ ಲಗೇಜ್ ಹೊತ್ತೊಯ್ಯ ಬೇಕಾದ ಕಾರಣ ಜನರು ವಿಮಾನ ನಿಲ್ದಾಣಕ್ಕೆ ಹೋಗಲು ರೈಲು ಬಳಸುತ್ತಿಲ್ಲ ಎಂಬುದು ಲೆಕ್ಕಾಚಾರವಾಗಿದೆ.












Click it and Unblock the Notifications