ಬಾಗಲಕೋಟೆಯಲ್ಲಿ ತಲೆ, ತುಮಕೂರಿನಲ್ಲಿ ದೇಹ, ಮಂಡ್ಯದಲ್ಲಿ ಮಹಿಳೆ ನಾಪತ್ತೆ!
ಬೆಂಗಳೂರು, ಜು. 26: ಮಹಿಳೆಯನ್ನು ಹತ್ಯೆ ಮಾಡಿದ್ದ ಹಂತಕರು ದೇಹವನ್ನು ರೈಲ್ವೇ ಹಳಿ ಮೇಲೆ ಬಿಸಾಕಿದ್ದರು. ದೇಹ ತುಂಡರಿಸಿದ ಬಳಿಕ ತಲೆಯನ್ನು ಕವರ್ನಲ್ಲಿ ಸುತ್ತಿ ಚಲಿಸುತ್ತಿದ್ದ ಲಾರಿಯಲ್ಲಿ ಬಿಸಾಡಿದ್ದರು. ಸಣ್ಣ ಸುಳಿವು ಇಲ್ಲದ ಈ ಹತ್ಯೆ ಪ್ರಕರಣ ರಹಸ್ಯ ಬೇಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಗಲಕೋಟೆಯ ಲಾರಿಯಲ್ಲಿ ತಲೆ!
ಜು. 20 ರಂದು ತುಮಕೂರು ರಸ್ತೆಯ ಹಿರೇಹಳ್ಳಿ ನಿಡುವಂದ ರೈಲ್ವೇ ಹಳಿ ಬಳಿ ರುಂಡ ಇಲ್ಲದ ಮಹಿಳೆಯ ಮೃತ ದೇಹ ಪತ್ತೆಯಾಗಿತ್ತು. ಈ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದರೂ ಮಹಿಳೆ ವಿವರ ಪತ್ತೆಯಾಗಿರಲಿಲ್ಲ. ತನಿಖಾ ಕಾಲದಲ್ಲಿ ಬಾಗಲಕೋಟೆಯ ಇಳಕಲ್ ಬಳಿ ಲಾರಿಯಲ್ಲಿ ರುಂಡ ಸಿಕ್ಕಿರುವ ಅಂಶ ಸಂಗತಿ ಬೆಳಕಿಗೆ ಬಂದಿತ್ತು. ತನಿಖೆಯಲ್ಲಿರುವಾಗಲೇ ತನ್ನ ತಾಯಿ ನಿಂಗಮ್ಮ ಪಿಂಚಣಿ ತರಲು ತುಮಕೂರಿಗೆ ಹೋದವರು ವಾಪಸು ಬಂದಿಲ್ಲ ಎಂದು ಮಂಡ್ಯದ ತೂಬಿನಕೆರೆ ನಿವಾಸಿ ಶಿವಕುಮಾರ್ ಎಂಬುವರು ದೂರು ನೀಡಿದ್ದರು. ಮಹಿಳೆ ಮೃತ ದೇಹ ಸಿಕ್ಕಿರುವ ಮಾಹಿತಿ ತಿಳಿದು ತುಮಕೂರಿನ ಶವಗಾರದಲ್ಲಿ ದೇಹ ನೋಡಿ ತನ್ನ ತಾಯಿಯದ್ದೇ ಎಂದು ಹೇಳಿದ್ದರು. ಈ ಮೂಲಕ ಮೃತ ಮಹಿಳೆ ನಿಂಗಮ್ಮನ ಗುರುತು ಪೊಲೀಸರು ಪತ್ತೆ ಮಾಡಿದ್ದರು.

ಬಿಎಂಟಿಸಿ ಚಾಲಕನೇ ಕೊಲೆ ಪಾತಕ
ಪೋನ್ ಕರೆಗಳ ಸಂಶಯದ ಆಧಾರದ ಮೇಲೆ ತುಮಕೂರಿನ ನಿವಾಸಿ ಬಿಎಂಟಿಸಿ ಚಾಲಕ ಬಾಲಚಂದ್ರ ಎಂಬುವನನ್ನು ವಶಕ್ಕೆ ಪಡದು ರೈಲ್ವೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿಂಗಮ್ಮನನ್ನು ಕೊಲೆ ಮಾಡಿರುವ ಸಂಗತಿ ಬಾಯಿ ಬಿಟ್ಟಿದ್ದು ಆರೋಪಿ ಚಾಲಕನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಈತನೊಂದಿಗೆ ಕೊಲೆಗೆ ಸಹಕರಿಸಿದ ಆರೋಪ ಎದುರಿಸುತ್ತಿರುವ ನಿಂಗಮ್ಮನ ಸೊಸೆ ಲತಾ ತಲೆ ಮರೆಸಿಕೊಂಡಿದ್ದಾರೆ.

ವಿಚಿತ್ರ ಕಾರಣಕ್ಕೆ ಕೊಲೆ
ನಿಂಗಮ್ಮನ ಬಳಿ ಸೊಸೆ ಲತಾ 1.5 ಲಕ್ಷ ರೂ. ಸಾಲ ಮಾಡಿದ್ದರು. ಸಾಲವನ್ನು ನೀಡುವಂತೆ ನಿಂಗಮ್ಮ ಪೀಡಿಸುತ್ತಿದ್ದಳು. ಮಾತ್ರವಲ್ಲ ಬಿಎಂಟಿಸಿ ಚಾಲಕ ಬಾಲಚಂದ್ರ ಮತ್ತು ಲತಾ ನಡುವೆ ಅನೈತಿಕ ಸಂಪರ್ಕ ಇರುವ ಬಗ್ಗೆ ಸಂಬಂಧಿಕರಲ್ಲಿ ಹೇಳಿಕೊಂಡು ಬರುತ್ತಿದ್ದಳು. ಹೀಗಾಗಿ ಆಕೆಯನ್ನು ಕೊಲೆ ಮಾಡಿದರೆ ಹಣ ಕೊಡುವ ಪ್ರಮೇಯ ಬರಲ್ಲ, ಈ ಅಪ ಪ್ರಚಾರಕ್ಕೆ ಇತಿಶ್ರೀ ಹಾಡಲೆಂದು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ.

ಮನೆಗೆ ಕರೆಸಿಕೊಂಡು ಹತ್ಯೆ
ನಿಂಗಮ್ಮನಿಗೆ ಹಣ ವಾಪಸು ಕೊಡುವುದಾಗಿ ಮಂಡ್ಯದಿಂದ ತುಮಕೂರಿಗೆ ಕರೆಸಿಕೊಂಡಿದ್ದಾರೆ. ಕುತ್ತಿಗೆಗೆ ಹಗ್ಗದಿಂದ ಬಿಗಿದು ನಿಂಗಮ್ಮನನ್ನು ಕೊಲೆ ಮಾಡಿದ ಲತಾ ಮತ್ತು ಬಾಲಚಂದ್ರ ಕೊಲೆ ಬಗ್ಗೆ ಗುರುತು ಸಿಗದಂತೆ ಮೃತ ದೇಹವನ್ನು ಹಿರೇಹಳ್ಳಿ ರೈಲ್ವೇ ಹಳಿ ಮೇಲೆ ಬಿಸಾಡಿದ್ದಾರೆ. ಮಾತ್ರವಲ್ಲ ರೈಲು ಹರಿದ ಬಳಿಕ ದೇಹದಿಂದ ಬೇರ್ಪಟ್ಟಿದ್ದ ತಲೆಯನ್ನು ಕವರ್ಗೆ ಹಾಕಿ ಅದನ್ನು ಬಾಗಲಕೋಟೆ ಕಡೆ ಚಲಿಸುತ್ತಿದ್ದ ಲಾರಿಯಲ್ಲಿ ಬಿಸಾಡಿದ್ದರು. ನಿಂಗಮ್ಮನ ಮೈಮೇಲಿದ್ದ ಒಡವೆಗಳನ್ನು ಬಿಚ್ಚಿಕೊಂಡು ಲತಾ ಮತ್ತು ಬಾಲಚಂದ್ರ ಪರಾರಿಯಾಗಿದ್ದರು. ಇದೀಗ ಬಾಲಚಂದ್ರ ರೈಲ್ವೆ ಪೊಲೀಸರ ಅತಿಥಿಯಾಗಿದ್ದಾನೆ. ಇಬ್ಬರನ್ನು ವಿಚಾರಣೆ ನಡೆಸಿದಾಗ ರುಂಡದ ಅಸಲಿ ಸತ್ಯ ಬಾಯಿ ಬಿಟ್ಟಿದ್ದಾರೆ.












Click it and Unblock the Notifications