Rahul Gandhi Kolar Rally: ಬೆಂಗಳೂರಿನಲ್ಲಿ ರಾಹುಲ್ ಗಾಂಧಿಗೆ ಭರ್ಜರಿ ಸ್ವಾಗತ
ಬೆಂಗಳೂರು: ಅಂತೂ ರಾಹುಲ್ ಕೋಲಾರ ಯಾತ್ರೆಗೆ ಮುಹೂರ್ತ ಕೂಡಿ ಬಂದಿದೆ. 4 ಬಾರಿ ಮುಂದೂಡಿಕೆಯಾಗಿದ್ದ ಕಾಂಗ್ರೆಸ್ನ ಜೈ ಭಾರತ್ ಸಮಾವೇಶ ಇಂದು ಭರ್ಜರಿಯಾಗಿ ನಡೆಯಲಿದೆ. ಕೋಲಾರ ಹೊರವಲಯದ ಟಮಕದಲ್ಲಿ 'ಜೈ ಭಾರತ್ ಸಮಾವೇಶ'ಕ್ಕೆ ಭರ್ಜರಿ ವೇದಿಕೆ ಸಜ್ಜಾಗಿದೆ. ಹೀಗಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿಗೆ (Rahul Gandhi) ಭರ್ಜರಿ ಸ್ವಾಗತ ಸಿಕ್ಕಿದೆ.
ದೇಶಾದ್ಯಂತ ಕರ್ನಾಟಕ ಚುನಾವಣೆ ಗಮನ ಸೆಳೆಯುತ್ತಿದೆ. ಅದರಲ್ಲೂ ರಾಹುಲ್ ಗಾಂಧಿ ಕೋಲಾರ ಭೇಟಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 2018ರಲ್ಲಿ ರಾಹುಲ್ ಗಾಂಧಿ ಕೋಲಾರದಲ್ಲಿ ಮೋದಿ ಉಪನಾಮದ ಬಗ್ಗೆ ನೀಡಿದ್ದ ಹೇಳಿಕೆ ಸಂಚಲನ ಸೃಷ್ಟಿಸಿ, ಈಗಾಗಲೇ ಈ ವಿಚಾರ ನ್ಯಾಯಾಲಯದ ಮೆಟ್ಟಿಲು ತುಳಿದಿದೆ. ಈ ಬಗ್ಗೆ ತೀರ್ಪು ಹೊರಬಿದ್ದು ರಾಹುಲ್ ಗಾಂಧಿ ಸಂಸದ ಸ್ಥಾನವೂ ಅನರ್ಹಗೊಂಡಿದೆ. ಇದೇ ಸಂದರ್ಭದಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿ ಕೋಲಾರಕ್ಕೆ ತೆರಳಿ ಬೃಹತ್ ಸಭೆ ನಡೆಸುತ್ತಿರುವುದು ಗಮನಾರ್ಹ.

ಸ್ವಾಗತ ಕೋರಿದ ಕಾಂಗ್ರೆಸ್ ನಾಯಕರು
ಕೋಲಾರದಲ್ಲಿ ಆಯೋಜಿಸಿರುವ ಜೈ ಭಾರತ್ ಸಮಾವೇಶದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿಗೆ ರಾಜ್ಯ ಕಾಂಗ್ರೆಸ್ ನಾಯಕರು ಭರ್ಜರಿಯಾಗಿ ಸ್ವಾಗತ ಕೋರಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸ್ವಾಗತ ಕೋರಿದರು. ಬೆಂಗಳೂರಿನಿಂದ ನೇರವಾಗಿ ರಾಹುಲ್ ಗಾಂಧಿ ಕೋಲಾರಕ್ಕೆ ತೆರಳಿದ್ದು, ಇನ್ನೇನು ಕೆಲವೇ ಹೊತ್ತಲ್ಲಿ ಟಮಕದಲ್ಲಿ ನಡೆಯಲಿರುವ 'ಜೈ ಭಾರತ್ ಸಮಾವೇಶ'ದಲ್ಲಿ ಭಾಗವಹಿಸಲಿದ್ದಾರೆ.
ಲಕ್ಷ ಕಾರ್ಯಕರ್ತರು ಸೇರುವ ಸಾಧ್ಯತೆ
ಅಂದಹಾಗೆ ಕಾಂಗ್ರೆಸ್ ಈ ಸಮಾವೇಶವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಇದೇ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ 3 ಬೃಹತ್ ಜರ್ಮನ್ ಶೆಡ್, 60 ಸಾವಿರಕ್ಕೂ ಅಧಿಕ ಆಸನ ಹಾಗೂ ಎಲ್ಇಡಿ ಪರದೆ ಪರದೆಯ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ನಾಯಕರು ಸಮಾವೇಶದ ಉಸ್ತುವಾರಿ ವಹಿಸಿಕೊಂಡಿದ್ದು, ಬಯಲುಸೀಮೆ ಭಾಗದಲ್ಲಿ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ ಕಾಂಗ್ರೆಸ್.
ಭದ್ರತೆ ಪರಿಶೀಲನೆ ಮಾಡಿದ್ದ ಸಿಬ್ಬಂದಿ
ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಸಾಕಷ್ಟು ಭದ್ರತೆ ವಹಿಸಲಾಗಿದೆ. ಅಷ್ಟಕ್ಕೂ ಎಐಸಿಸಿ ನಾಯಕ ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿ 5 ದಿನದ ಹಿಂದೆ ಕೋಲಾರಕ್ಕೆ ಬಂದಿದ್ದು, ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವ ಸೀತಾರಾಮ್ ಸೇರಿದಂತೆ ಅನೇಕರು ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದರು. ಸಮಾವೇಶ ದಿನಾಂಕ ಅಂತಿಮಗೊಂಡ ಬಳಿಕ 3 ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಟೌಟ್ ಹಾಗೂ ಫ್ಲೆಕ್ಸ್ಗಳು ರಾರಾಜಿಸುತ್ತಿವೆ.

ಒಟ್ನಲ್ಲಿ ಕಾಂಗ್ರೆಸ್ನ ಮಹತ್ವದ ಸಮಾವೇಶಕ್ಕೆ ಕೌಂಟ್ಡೌನ್ ಶುರುವಾಗಿದೆ. ಇನ್ನೇನು ಕೆಲವೇ ಹೊತ್ತಲ್ಲಿ ರಾಹುಲ್ ಗಾಂಧಿ ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗೇ 2018ರಲ್ಲಿ ತಾವು ನೀಡಿದ್ದ ಹೇಳಿಕೆ ಬಗ್ಗೆ ಇಲ್ಲಿ ಉಲ್ಲೇಖಿಸುತ್ತಾರಾ ಎಂಬ ಕುತೂಹಲ ದೇಶಾದ್ಯಂತ ಕೆರಳಿದ್ದು, ದೇಶದ ಗಮನ ಕೋಲಾರದ ಕಡೆ ನೆಟ್ಟಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಈ ಪ್ರಶ್ನೆಗೆ ಉತ್ತರ ಕೂಡ ಸಿಗಲಿದೆ.












Click it and Unblock the Notifications