ಅಂಬೇಡ್ಕರ್ ಸಮಾವೇಶಕ್ಕೆ ರಾಹುಲ್, ಮಾರ್ಟಿನ್ ಲೂಥರ್ ಕಿಂಗ್-3 ಚಾಲನೆ
ಬೆಂಗಳೂರು, ಜುಲೈ 21: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಂತಾರಾಷ್ಟ್ರೀಯ ಸಮ್ಮೇಳನ 'ಕ್ವೆಸ್ಟ್ ಫಾರ್ ಇಕ್ವಿಟಿ'ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ 3ನೇ ಮಾರ್ಟಿನ್ ಲೂಥರ್ ಕಿಂಗ್ ಚಾಲನೆ ನೀಡಿದರು.
ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮ ವರ್ಷಾಚರಣೆ ಅಂಗವಾಗಿ 'ಸಾಮಾಜಿಕ ನ್ಯಾಯ ಮರುಸ್ಥಾಪನೆ-ಅಂಬೇಡ್ಕರ್ ಚಿಂತನೆಗಳ ಪುನರ್ ಅವಲೋಕನ' ಕುರಿತ ಅಂತಾರಾಷ್ಟ್ರೀಯ ಸಮಾವೇಶ ಇಂದಿನಿಂದ 3 ದಿನಗಳ ಕಾಲ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಖ್ಯಾತ ಸಮಾಜ ಸುಧಾರಕ 3ನೇ ಮಾರ್ಟಿನ್ ಲೂಥರ್ ಕಿಂಗ್, ಡಾ. ಅಂಬೇಡ್ಕರ್ ಭಾರತದ ಹೊರಗೆ ಅಷ್ಟಾಗಿ ಪರಿಚಿತರಲ್ಲ. ಆದರೆ ನಾವು ಇದನ್ನು ಬದಲಿಸಬೇಕು. ವಿಶ್ವದಾದ್ಯಂತ ಅಂಬೇಡ್ಕರ್ ಚಿಂತನೆಗಳನ್ನು ಹರಡಬೇಕು," ಎಂದು ಹೇಳಿದರು.

"ನಾವು ಜನಾಂಗೀಯತೆ, ಜಾತಿ, ಲಿಂಗಭೇದಭಾವವನ್ನು ಕಿತ್ತೆಸೆಯಬೇಕು. ಒಂದೊಮ್ಮೆ ನನ್ನ ತಂದೆ ಇಲ್ಲಿದ್ದಿದ್ದರೆ ದಲಿತರು ಮತ್ತು ಕಾರ್ಮಿಕರ ಹೋರಾಟವನ್ನು ಬೆಂಬಲಿಸುತ್ತಿದ್ದರು," ಎಂದು ಹೇಳಿದ 3ನೇ ಮಾರ್ಟಿನ್ ಲೂಥರ್ ಕಿಂಗ್, ಡಾ ಅಂಬೇಡ್ಕರ್ ಮೂರ್ತಿ ವಾಷಿಂಗ್ಟನ್ ಡಿಸಿಯಲ್ಲಿರುವ ನನ್ನ ತಂದೆಯ ಪ್ರತಿಮೆಯಂತೆಯೇ ಇದೆ. ನನಗೆ ಇದನ್ನು ಕಂಡು ಆಶ್ಚರ್ಯವಾಗುತ್ತಿದೆ ಎಂದೂ ಹೇಳಿದರು.
ತಮ್ಮ ತಂದೆ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ 1959ರ ಮಾತುಗಳನ್ನು ಪುನರುಚ್ಚರಿಸಿದ ಮಾರ್ಟಿನ್ ಲೂಥರ್ ಕಿಂಗ್, "ನಾನು ಬೇರೆ ದೇಶಗಳಿಗೆ ಪ್ರವಾಸಿಗನಾಗಿ ತೆರಳುತ್ತೇನೆ. ಆದರೆ ಭಾರತಕ್ಕೆ ಮಾತ್ರ ಭಕ್ತಿಯಿಂದ ಆಗಮಿಸುತ್ತೇನೆ," ಎಂದು ಭಾರತದ ಮೇಲಿನ ತಮ್ಮ ಪ್ರೀತಿ ಮತ್ತು ಗೌರವವನ್ನು ತೆರೆದಿಟ್ಟರು. ಭಾರತ ಇವತ್ತು ಜಗತ್ತಿನಲ್ಲೇ ಗುರುತಿಸಿಕೊಳ್ಳುವ ಶಕ್ತಿಯಾಗಿದೆ ಎಂದೂ ಕಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಸಮ್ಮೇಳನದಲ್ಲಿ ವಿಶೇಷವಾಗಿ ಕೆಂಪು ಹಳದಿ 'ಕನ್ನಡ ಧ್ವಜ'ದ ಹಿನ್ನಲೆಯಲ್ಲಿ ಎಲ್ಲರೂ ಎದ್ದು ನಿಂತ ಕನ್ನಡ ನಾಡ ಗೀತೆ 'ಜಯ ಭಾರತ ಜನನಿಯ ತನುಜಾತೆ' ಹಾಡಿಗೆ ಗೌರವ ಸೂಚಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಮಂತ್ರಿಗಳಾದ ಎಚ್. ಆಂಜನೇಯ ಎಚ್.ಸಿ. ಮಹದೇವಪ್ಪ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರಾದ ಕೈಲಾಶ್ ಸತ್ಯಾರ್ಥಿ ಹಾಗೂ
ದೇಶ ವಿದೇಶಗಳಿಂದ ಆಗಮಿಸಿರುವ ಸುಮಾರು 300ಕ್ಕೂ ಹೆಚ್ಚು ಚಿಂತಕರು, ನೀತಿ ನಿರೂಪಕರು, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications