ಆರ್ಥಿಕವಾಗಿ ಕೈಲಾಗದವರ ಕೈಹಿಡಿಯುವ ರಾಗೀಗುಡ್ಡ ಟ್ರಸ್ಟ್
1975ರಲ್ಲಿ ಆರಂಭವಾದ ರಾಗೀಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ತನ್ನ ಸಾಮಾಜಿಕ ಮತ್ತು ಜನಪರ ಕಾಳಜಿಯ ಕೆಲಸಗಳ ಮೂಲಕ ವರ್ಷದಿಂದ ವರ್ಷಕ್ಕೆ ಬಡವರ ಪಾಲಿಗೆ ಬೆಳಕಾಗುವ ಕೆಲಸವನ್ನು ಮಾಡುತ್ತಿದೆ.
RSPAS ವಿದ್ಯಾನಿಧಿ ಹೆಸರಿಲ್ಲಿ, ನರ್ಸರಿಯಿಂದ ಹತ್ತನೇ ತರಗತಿಯವರೆಗೆ ಸುಮಾರು 1,200ಕ್ಕೂ ಹೆಚ್ಚು ಬಡವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಟ್ರಸ್ಟ್, ಉತ್ತಮ ಗುಣಮಟ್ಟದ ಮಧ್ಯಾಹ್ನದ ಊಟ, ಪುಸ್ತಕ, ಸಮವಸ್ತ್ರವನ್ನು ಉಚಿತವಾಗಿ ವಿತರಿಸುತ್ತಿದೆ.
ಇದರ ಜೊತೆಗೆ, ದಾನಿಗಳ ಸಹಾಯದಿಂದ ತಮ್ಮದೇ ಸ್ಕೂಲಿನಲ್ಲಿ ಹತ್ತನೇ ತರಗತಿ ಓದಿದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಆರ್ಥಿಕ ಅಡಚಣೆ ಎದುರಾದಲ್ಲಿ, ಅಂತಹ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವ ಕೆಲಸವನ್ನೂ ಟ್ರಸ್ಟ್ ಮಾಡುತ್ತಿದೆ.

ಈ ವಿದ್ಯಾಕೇಂದ್ರ 2013ರಲ್ಲಿ 151 ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವ ಮೂಲಕ ಆರಂಭವಾದ ಟ್ರಸ್ಟಿನ ಸಾಮಾಜಿಕ ಅಭಿಯಾನ, ಕಳೆದ ವರ್ಷದ ಜೂನ್ ವರೆಗೆ 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 'ವಿದ್ಯಾರ್ಥಿವೇತನ' ನೀಡಿ, ಅಕ್ಷರ ಕ್ರಾಂತಿ ನಿರ್ಮಿಸಿದೆ.
ಸ್ಕೂಲಿನ ಆವರಣದಲ್ಲಿ ಆರೋಗ್ಯ ಕೇಂದ್ರ ಘಟಕವನ್ನೂ ಸ್ಥಾಪಿಸಿರುವ ಟ್ರಸ್ಟ್, ಕೈಗೆಟಕು ದರದಲ್ಲಿ ಅಲ್ಟ್ರಾಸೌಂಡ್, ಇಸಿಜಿ ಮುಂತಾದ ಸೌಲಭ್ಯವನ್ನೂ ನೀಡುತ್ತಿದೆ. ಆರೋಗ್ಯ ನಿಧಿ ಹೆಸರಿನಲ್ಲಿ ಪ್ರತ್ಯೇಕ ದೇಣಿಗೆ ಸಂಗ್ರಹಿಸಿ, ಉಚಿತ ಡಯಾಲಿಸಿಸಿ ಮತ್ತು ಇತರ ತುರ್ತು ಸೇವೆಯನ್ನು ಉಚಿತವಾಗಿ ನೀಡುತ್ತಿದೆ.
ಪ್ರಸಕ್ತ ಸಾಲಿನ ವಿದ್ಯಾನಿಧಿ ವಿತರಣೆ ಕಾರ್ಯಕ್ರಮವನ್ನು ರಾಗೀಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ಚಾರಿಟೇಬಲ್ ಟ್ರಸ್ಟ್, ಇದೇ ಶನಿವಾರದಂದು (ಜೂ 23) ಆಯೋಜಿಸಿದೆ. ಬೆಂಗಳೂರು ಜಯನಗರ ಒಂಬತ್ತನೇ ಬ್ಲಾಕಿನಲ್ಲಿರುವ ರಾಗೀಗುಡ್ಡ ದೇವಾಲಯದ, ಕುಚಲಾಂಬ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
10.30ಕ್ಕೆ ಆರಂಭವಾಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರ್ಯ ಸಾಫ್ಟವೇರ್ ಸಂಸ್ಥೆಯ ಚೇರ್ಮನ್ ಡಿ ಎನ್ ಪ್ರಹ್ಲಾದ್ ವಹಿಸಿಕೊಳ್ಳಲಿದ್ದಾರೆ. ಅನಿರಿಸ್ತು ಇಂಡಿಯಾದ ವ್ಯವಸ್ಥಾಪಕರಾದ ವಾಸುದೇವ ತಂತ್ರಿ, ರಾಗೀಗುಡ್ಡ ಟ್ರಸ್ಟಿನ ಅಧ್ಯಕ್ಷ ಕೆ ಪಿ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.












Click it and Unblock the Notifications