ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಡಿನೋಟಿಫೈ ಆರೋಪ
ಬೆಂಗಳೂರು, ಜನವರಿ 3: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭೂಪಸಂದ್ರದ ಜಮೀನು ಡಿನೋಟಿಫೈ ಆರೋಪ ಮಾಡಿ ಮುಖಭಂಗ ಅನುಭವಿಸಿದ್ದ ರಾಜ್ಯ ಬಿಜೆಪಿ ಇದೀಗ ಮತ್ತೊಂದು ಡಿನೋಟಿಫೈ ಆರೋಪ ಮಾಡಿದೆ.
ಸಿಎಂ ಸಿದ್ದರಾಮಯ್ಯ ಅವರು ಸುಮಾರು 200 ರು. ಕೋಟಿ ರು. ಬೆಲೆ ಬಾಳುವ 2 ಎಕ್ಕರೆ 39 ಗುಂಟೆ ಜಾಗವನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಆರ್ ಅಶೋಕ್, " ಜಯನಗರದ ಲಾಲ್ ಬಾಗ್ ಹತ್ತಿರದ ಅಶೋಕ ಪಿಲ್ಲರ್ ಬಳಿ ಸಾರ್ವಜನಿಕ ಉದ್ಯಾನವನಕ್ಕೆ ಮೀಸಲಿಟ್ಟ ಸರ್ವೇ ನಂಬರ್ 27(1), 28(4), 28(5) ಮತ್ತು 28(6)ರಲ್ಲಿ 2 ಎಕ್ಕರೆ 39 ಗುಂಟೆಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿ ಬೆಂಗಳೂರು ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಈವರೆಗೆ ಯಾವೊಬ್ಬ ಮುಖ್ಯಮಂತ್ರಿಗಳು ಈ 2 ಎಕ್ಕರೆ 39 ಗುಂಟೆ ಜಾಗವನ್ನು ಡಿನೋಟಿಫೈ ಮಾಡಲು ನಿರಾಕರಿಸಿದ್ದಾರೆ. ಆದರೆ, ಸಿದ್ದರಾಂಯ್ಯ ಅವರು 2014ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅಶೋಕ್ ಕಾರಿವಾಲಾ ಎನ್ನುವರಿಗೆ ಅಕ್ರಮವಾಗಿ ಡಿನೋಟಿಪೈ ಮಾಡಿಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಈಗಾಗಲೇ ಮಾಲಿನ್ಯ ಪ್ರಮಾಣ ಹೆಚ್ಚುತ್ತಿದೆ. ಸಾರ್ವಜನಿಕರಿಗೆ ಮೀಸಲಿಟ್ಟ ಜಾಗವನ್ನು ಡಿನೋಟಿಪೈಗೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೂ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ ನ ಆದೇಶವನ್ನು ಉಲ್ಲಂಘಿಸಿ ಡಿನೋಟಿಪೈ ಮಾಡಿದ್ದಾರೆ ಎಂದು ಕಿಡಿಕಾರಿದರು.
ಇದನ್ನು ಬೆಂಗಳೂರು ಬಿಜೆಪಿ ಘಟಕ ಗಂಭೀರವಾಗಿ ತೆಗೆದುಕೊಂಡು ಈ ಜಾಗವನ್ನು ಸಾರ್ವಜನಿಕ ಉದ್ಯಾನಕ್ಕೆ ಬಿಟ್ಟುಕೊಡುವವರೆಗೂ ಬಿಡುವುದಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡದರು.
ಈ ಹಿಂದೆಯೂ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಭೂಪಸಂದ್ರದ 6.26 ಗುಂಟೆ ಜಮೀನು ಡಿನೋಟಿಫೈ ಆರೋಪ ಮಾಡಿದ್ದರು. ಆದರೆ, ಈ ಜಮೀನು ಮಾಲೀಕರಲ್ಲಿ ಒಬ್ಬರಾದ ಕೆ.ವಿ. ಜಯಲಕ್ಷ್ಮಮ್ಮ ಅವರ ಮಗ ಕೆ.ವಿ. ಕೃಷ್ಣ ಪ್ರಸಾದ್, ಭೂಪಸಂದ್ರ ಗ್ರಾಮದಲ್ಲಿ ನಮ್ಮ ವಶದಲ್ಲಿರುವ 6.26 ಎಕರೆ ಜಮೀನಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.












Click it and Unblock the Notifications